ಬೆಳ್ತಂಗಡಿ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬೆಳ್ತಂಗಡಿ ತಾಲೂಕು ಘಟಕದ ನೇತೃತ್ವದಲ್ಲಿ 1971ರ ಇಂಡೋ ಪಾಕ್ ಯುದ್ಧದಲ್ಲಿ ಭಾಗವಹಿಸಿದ್ದ ವೀರ ಯೋಧ ಸಿ ಜಾರ್ಜ್ ಕುಟ್ಟಿ ಅವರನ್ನು ಧರ್ಮಸ್ಥಳ ಗ್ರಾಮದ ಅವರ ಮನೆಗೆ ತೆರಳಿ ಸನ್ಮಾಸಲಾಯಿತು.
ಧರ್ಮಸ್ಥಳ ಸೈಂಟ್ ಜೊಸೆಫ್ ಚರ್ಚ್ನ ಧರ್ಮ ಗುರುಗಳಾದ ಫಾ. ಜೋಸೆಫ್ ವಾಳೂಕಾರನ್ ಮಾತನಾಡಿ ದೇಶ ಕಟ್ಟುವ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ದೇಶದ ಒಳಿತಿಗಾಗಿ ತಮ್ಮ ಜೀವನವನ್ನು ಮೀಸಲಿಟ್ಟವರು ಸೈನಿಕರು ಅವರನ್ನು ಗೌರವಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಭಾರತದ ಪರ ಯುದ್ದದಲ್ಲಿ ಭಾಗವಹಿಸಿ ದೇಶದ ಗೆಲುವಿಗೆ ಶ್ರಮಿಸಿದವರನ್ನು ಇಂದು ಗೌರವಿಸುವುದು ಹೆಮ್ಮೆಯ ವಿಚಾರವಾಗಿದೆ ಎಂದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಕಾಂಚೋಡು ಮಾತನಾಡಿ ಸಂಘಟನೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದು ಮಾಜಿ ಸೈನಿಕರನ್ನು ಸಂಘಟಿಸುವ ಕಾರ್ಯ ಮಾಡುತ್ತಿದೆ ಹಾಗೂ ಮಾಜಿ ಸೈನಿಕರ ಪರವಾಗಿ ಕೆಲಸ ಮಾಡುತ್ತಿದೆ ಎಂದರು ಜಿಲ್ಲಾ ಸಮ್ಮೇಳನದ ಸಂದರ್ಭದಲ್ಲಿ ನಿವೃತ್ತ ಯೋಧ ಸಿ ಜಾರ್ಜ್ ಕುಟ್ಟಿ ಅವರಿಗೆ ಭಗವಹಿಸಲು ಸಾಧ್ಯವಾಗದ ಕಾರಣ ಇಂದು ಅವರ ಮನೆಗೆ ಬಂದು ಸನ್ಮಾನಿಸುವ ಕಾರ್ಯ ಮಾಡಿದ್ದೇವೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಸಿ ಜಾರ್ಜ್ ಕುಟ್ಟಿ ಅವರು 1964 ರಲ್ಲಿ ಸೇನೆಗೆ ಸೇರ್ಪಡೆಯಾಗಿ ೨೨ವರ್ಷಗಳ ಕಾಲ ಸೇವೆ ಸಲ್ಲಿಸಿರುವುದಾಗಿ ತಿಳಿಸಿ ಇಂಡೋ ಪಾಕ್ ಯುದ್ದದ ದಿನಗಳನ್ನು ನೆನೆದುಕೊಂಡರು.
ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕು ಅಧ್ಯಕ್ಷ ಎನ್.ಪಿ ತಂಗಚ್ಚನ್, ತಾಲೂಕು ಕಾರ್ಯದರ್ಶಿ ಸುರೇಶ್ ಗೌಡ, ಜಿಲ್ಲಾ ಕೋಶಾಧಿಕಾರಿ ಚಂದಪ್ಪ ಡಿ.ಎಸ್. ಜಿಲ್ಲಾ ಸಲಹೆಗಾರ ಹರೀಶ್ ರೈ, ತಾಲೂಕು ಉಪಾಧ್ಯಕ್ಷ ರವಿಪ್ರಸಾದ್, ತಾಲೂಕು ಸಮಿತಿಯ ಗೌರವಾಧ್ಯಕ್ಷ ಎ.ಜೆ ಮಾಣಿ, ಗೌರವ ಸಲಹೆಗಾರ ಜೋಸೆಫ್ ಎನ್.ಕೆ, ಸಿ ಜಾರ್ಜ್ ಕುಟ್ಟಿ ಅವರ ಪುತ್ರ ನಿವೃತ್ತ ಸೈನಿಕ ರಾಜೇಶ್, ನಿವೃತ್ತ ಸೈನಿಕರ ಕುಟುಂಬಸ್ಥರು ಹಾಗೂ ಇತರರು ಇದ್ದರು.











