ಬೆಳಾಲು: ಮನೆಯಿಂದ ಹೊರಟು ಹೋದ ವ್ಯಕ್ತಿ ಮನೆಗೆ ವಾಪಾಸು ಹಿಂದಿರುಗದೆ ಕಾಣೆಯಾದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಪುರುಷರಬೆಟ್ಟು ಎಂಬಲ್ಲಿ ಡಿ.27 ರಂದು ನಡೆದಿದೆ.
ಕಾಣೆಯಾದ ವ್ಯಕ್ತಿ ಜಿನ್ನಪ್ಪ ಗೌಡರ ಹಿರಿಯ ಪುತ್ರ ರಾಜೇಶ್ ಪಿ. (30ವ) ಅವರು ಒಂದು ವರ್ಷದ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು, ಬಳಿಕ ವಾಪಾಸು ಊರಿಗೆ ಬಂದು ಕೆಲಸವಿಲ್ಲದೆ ತಂದೆ-ತಾಯಿಯ ಜೊತೆಗೆ ಮನೆಯಲ್ಲಿ ವಾಸವಿದ್ದರು, ಡಿ. 27 ರಂದು ಅವರ ತಮ್ಮ ಪ್ರಶಾಂತ್ ಪಿ ಅವರು ರಜೆಯ ಕಾರಣ ಮನೆಗೆ ಬಂದಾಗ ಅಣ್ಣ ರಾಜೇಶ್ ಕಾಣದಿರುವುದನ್ನು ತಾಯಿಯಲ್ಲಿ ವಿಚಾರಿಸಿದಾಗ ಅವನು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಗೆ ಹೋದವನು ವಾಪಾಸು ಬಂದಿರುವುದಿಲ್ಲವಾಗಿ ತಿಳಿಸಿದರು. ಅವರ ಮೊಬೈಲ್ಗೆ ಕರೆ ಮಾಡಿದರೆ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ, ನೆರೆ ಮನೆ, ಸಂಬಂಧಿಕರಿಗೆ ವಿಚಾರ ತಿಳಿಸಿ ಮನೆಯ ವಠಾರದಲ್ಲಿ ಹುಡುಕಾಡಿದರೂ ಪತ್ತೆಯಾಗಿಲ್ಲ, ರಾತ್ರಿ ಸಮಯ ಮನೆಗೆ ಬರಬಹುದೆಂದು ಕಾದು ನೋಡಿದರೂ ಈವರೆಗೆ ವಾಪಾಸು ಮನೆಗೆ ಬಾರದೇ ಇರುವುದರ ಕುರಿತು ಅವರನ್ನು ಪತ್ತೆ ಹಚ್ಚಿಕೊಡಬೇಕು ಎಂದು ತಮ್ಮ ಪ್ರಶಾಂತ್ ಪಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ.
ಸಾಧರಣ ಶರೀರ, 5.6 ಅಡಿ ಎತ್ತರ, ಕಪ್ಪು ಬಣ್ಣದ ಉದ್ದ ತೋಳಿನ ಶರ್ಟ್ ಹಾಗೂ ಬರ್ಮುಡ ಧರಿಸಿದ್ದು ತುಳು, ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ.೮೨/೨೫ ಕಲಂ ಅಡಿ ಮನುಷ್ಯ ಕಾಣೆಯಾಂತೆ ದೂರು ದಾಖಲಾಗಿದೆ.











