ಉಜಿರೆ: ಪರ್ಯಾಯ ಶ್ರೀ ಶೀರೂರು ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪೌರ ಸನ್ಮಾನ ಸಮಿತಿಯಿಂದ ಪೊಡವಿಗೊಡೆಯ ಉಡುಪಿಯ ಅನ್ನಬ್ರಹ್ಮ ಶ್ರೀ ಕೃಷ್ಣ ದೇವರ ಸನ್ನಿಧಿಯಲ್ಲಿ ಸರ್ವಜ್ಞ ಪೀಠಾರೋಹಣವೇರಿ ಶ್ರೀ ಕೃಷ್ಣ ದೇವರ ಪೂಜಾ ಕೈಂಕರ್ಯ ದೀಕ್ಷೆಯನ್ನು ಸ್ವೀಕರಿಸಲಿರುವ ಶ್ರೀ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಗೆ ಬೆಳ್ತಂಗಡಿ ತಾಲೂಕಿನ ಸಮಸ್ತ ನಾಗರಿಕರಿಂದ ಪೌರಸಮ್ಮಾನ ಕಾರ್ಯಕ್ರಮವು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಜ.2ರಂದು ನಡೆಯಿತು.
ಶ್ರೀ ಶೀರೂರು ಮಠ ಭಾವೀ ಪರ್ಯಾಯ ಪೀಠಾಧಿಪತಿಗಳಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ,ಉಜಿರೆ ಹಾಗೂ ಉಡುಪಿಗೆ ಅವಿನಾಭಾವ ಸಂಬಂಧಗಳಿವೆ. ಜನಾರ್ದನನಿಗೆ ಖುಷಿಯಾಗುವ ಕಾರ್ಯವನ್ನು ಮಧ್ವಾಚಾರ್ಯರು ಉಜಿರೆಯಲ್ಲಿ ಮಾಡಿರುತ್ತಾರೆ. ಭಕ್ತರಿಗೆ ಶ್ರೀ ಕೃಷ್ಣನ ಸೇವೆ ಮಾಡುವ ಅವಕಾಶವೇ ಪರ್ಯಾಯ. ಕೃಷ್ಣನ ಆರಾಧನೆಯಿಂದ ಸಂಕಷ್ಟಗಳು ದೂರವಾಗುತ್ತದೆ ಎಂದು ನುಡಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ ಪರ್ಯಾಯದ ಸಂದರ್ಭದಲ್ಲಿ ಪೂರ್ಣವಾಗಿ ತೊಡಗಿಸಿಕೊಳ್ಳುವಂತಹ ಯೋಗಭಾಗ್ಯ ಬೆಳ್ತಂಗಡಿ ತಾಲೂಕಿನ ಭಕ್ತರಿಗೆ ದೊರೆತಿರುತ್ತದೆ. ಶ್ರೀ ಮಧ್ವಾಚಾರ್ಯರು ಕರ್ಮ ನಿರ್ಣಯ ಎಂಬ ಗ್ರಂಥವನ್ನು ಈ ಕ್ಷೇತ್ರದಲ್ಲಿ ಬರೆದಿರುವಂತಹದ್ದು ನಮಗೆ ಹೆಮ್ಮೆಯ ಸಂಗತಿ. ಹಿಂದೂ ಸಮಾಜಕ್ಕೆ ಶಕ್ತಿಯಾಗಿ,ಬೆಳ್ತಂಗಡಿ ತಾಲೂಕಿನ ಜನತೆಗೆ ಶ್ರೀಗಳ ಆಶೀರ್ವಾದ ಸದಾ ಇರಲಿ ಎಂದರು.
ಆರೋಗ್ಯ ಕ್ಲಿನಿಕ್ ಡಾ। ಪ್ರದೀಪ್ ನಾವೂರು ಅಭಿವಂದನಾ ನುಡಿಗಳನ್ನಾಡಿಲೌಕಿಕ ಪ್ರಾಪಂಚಿಕ ಚಿಂತನೆಗಳ ಬಗ್ಗೆ ಆಕರ್ಷಿತರಾಗುವ ಸಂದರ್ಭದಲ್ಲಿ ವಿರಕ್ತಿಯ ಭಾವ ಮೂಡುವುದು ದೊಡ್ಡ ಸಂಗತಿಯಾಗಿದ್ದು ಶ್ರೀಗಳು ವೇದಗಳನ್ನು ಉಳಿಸುವ ಸಂಕಲ್ಪ ಇಟ್ಟುಕೊಂಡಿದ್ದಾರೆ ಎಂದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶೀಕ ಆಡಳಿತ ಮೊಕ್ತೇಸರಾದ ಶರತ್ ಕೃಷ್ಣ ಪಡ್ವೆಟ್ನಾಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ,ಎಲ್ಲರನ್ನೂ ಸ್ವಾಗತಿಸಿದರು.ಶಾಸಕ ಹರೀಶ್ ಪೂಂಜ,ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್,ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ,ಉಡುಪಿ ಶಿರೂರು ಮಠದ ಡಾ.ಉದಯ ಕುಮಾರ್ ಸರಳತ್ತಾಯ,ಪೌರ ಸಮ್ಮಾನ ಸಮಿತಿ ಸಂಚಾಲಕ ಕೆ. ಮೋಹನ್ ಕುಮಾರ್,ಕೋಶಾಧಿಕಾರಿ ಅವಿನಾಶ್ ಶೆಟ್ಟಿ ಅಗ್ರಿಲೀಫ್ ಉಪಸ್ಥಿತರಿದ್ದರು. ಪೌರ ಸಮ್ಮಾನ್ ಸಮಿತಿ ಕಾರ್ಯದರ್ಶಿ ಪೂರನ್ ವರ್ಮ ವಂದಿಸಿದರು. ಶ್ರೀನಿವಾಸ್ ರಾವ್ ಧರ್ಮಸ್ಥಳ,ಮುರಳಿಕೃಷ್ಣ ಆಚಾರ್ ಕಾರ್ಯಕ್ರಮ ನಿರೂಪಿಸಿದರು.











