ಕಲ್ಮಂಜ: ಕಲ್ಮಂಜ: ದ.ಕ.ಜಿ.ಪಂ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶತ ಸಂಭ್ರಮದ ಧ್ವಜಾರೋಹಣವ, ಜ್ಞಾನದೀಪ ಸಭಾಂಗಣ ಲೋಕಾರ್ಪಣೆ, ಸಭಾ ಕಾರ್ಯಕ್ರಮವು ಜ.3ರಂದು ಜರುಗಿತು.
ಶತಮಾನೋತ್ಸವ ಸಮಿತಿ ಗೌರವ ಮಾರ್ಗದರ್ಶಕರು, ನಿಡಿಗಲ್ ಶ್ರೀ ಶಾಂತಿನಾಥ ಸ್ವಾಮಿ ಜೈನ್ ಬಸದಿ ಆಡಳಿತ ಮೊಕ್ತೇಸರರು ರತನ್ ಕುಮಾರ್ ಜೈನ್ ಹುಣಿಪ್ಪಾಜೆ ಗುತ್ತು ಧ್ವಜಾರೋಹಣವನ್ನು ನೆರವೇರಿಸಿದರು.

ಉಜಿರೆ ಅನುಗ್ರಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರು ರೆ. ಫಾ| ವಿಜಯ ಲೋಬೋ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಫೆರ್ನಾಂಡಿಸ್ ಅಧ್ಯಕ್ಷತೆಯನ್ನು ವಹಿಸಿ, ಜಾತಿ-ಧರ್ಮ ಬೇಧ ಭಾವ ಮರೆತು ಸಂಘ ಸಂಸ್ಥೆಗಳ, ಶಿಕ್ಷಣ ಪ್ರೇಮಿಗಳ ಪ್ರೋತ್ಸಾಹ, ಅಪಾರವಾದ ಸಹಕಾರದಿಂದ ಶತಮಾನೋತ್ಸವ ಆಚರಿಸುವುದಕ್ಕೆ ಸಾಧ್ಯವಾಗಿದೆ ಎಂದರು.
ಮುಖ್ಯ ಅತಿಥಿ ಬೆಳ್ತಂಗಡಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್ ಮಾತನಾಡಿ, ಮಾನವೀಯ ಮೌಲ್ಯಯುತ ಶಿಕ್ಷಣವನ್ನು ಕಲ್ಮಂಜ ಶಾಲೆ ನೀಡುತ್ತಿದೆ. ಶಿಕ್ಷಣದಿಂದ ಸಮಾಜ ಸುಧಾರಣೆ ಸಾಧ್ಯವಿದೆ. ಪ್ರವೀಣ್ ಫೆರ್ನಾಂಡಿಸ್ ರವರು ಸಾರಥಿಯಾಗಿ ಶತಮಾನೋತ್ಸವ ಎಂಬ ರಥವನ್ನು ಅತ್ಯುತ್ತಮವಾಗಿ ನಡೆಸುತ್ತಿದ್ದಾರೆ ಎಂದರು. ವೇದಿಕೆಯಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷೆ ಪೂರ್ಣಿಮಾ, ಮಾಜಿ ಅಧ್ಯಕ್ಷ ಶ್ರೀಧರ ಕಲ್ಮಂಜ, ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಮಂಜುನಾಥ ಶೆಟ್ಟಿ ಉಪಾಧ್ಯಕ್ಷ ಸೇಸಪ್ಪ ಟಿ. ಕ೦ದೂರು, ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಉದ್ಯಮಿ ಮಹಮ್ಮದ್ ಮುಜೀಬ್, ಉಜಿರೆ ಸಂತ ಅಂಥೋನಿ ಚರ್ಚ್ ಉಪಾಧ್ಯಕ್ಷ ಅಂತೋನಿ ಫೆರ್ನಾಂಡಿಸ್, ಶಾಲಾ ಮುಖ್ಯೋಪಾಧ್ಯಾಯಿನಿ ಮಂಜುಳಾ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಚಿದಾನಂದ ಮಂಟಮೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಮೀದ್, ಶಾಲಾ ವಿದ್ಯಾರ್ಥಿ ನಾಯಕ ಭವಿತ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಾಲೆಗಳಿಗೆ ಕೊಡುಗೆ ನೀಡಿದ ದಾನಿಗಳನ್ನು ಗೌರವಿಸಲಾಯಿತು.
ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಾಯ ಅಕ್ಷಯ ನಗರ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಶಿಕ್ಷಕಿ ಐಶ್ವರ್ಯ ವಂದಿಸಿದರು. ವಿವಿಧ ಉಪ ಸಮಿತಿ ಸಂಚಾಲಕರು, ಸದಸ್ಯರು, ಶಿಕ್ಷಕರು, ಹಳೆ ವಿದ್ಯಾರ್ಥಿಗಳು ಸಹಕರಿಸಿದರು.











