July 23, 2026
Uncategorized

ಬೆಳ್ತಂಗಡಿ: 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅಂದರ್: ಈತನ 36 ವರ್ಷದ ಟ್ರಾವೆಲ್ ಹಿಸ್ಟರಿ ಮಾತ್ರ ಬಿಂದಾಸ್

ಬೆಳ್ತಂಗಡಿ: ಹಲ್ಲೆ ಪ್ರಕರಣ ಸಂಬಂಧ 36 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ಬಿಂದಾಸ್ ಜೀವನ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಘಟನೆಯ ವಿವರ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಚಾರ್ಮಾಡಿ ಗೇಟ್ ಬಳಿ ಮೋಹನ್ ಎಂಬಾತನಿಗೆ 1989 ಇಸವಿಯಲ್ಲಿ ಆರೋಪಿಗಳಾದ ಕೊರಗಪ್ಪ ಗೌಡ ಮತ್ತು ರವೀಂದ್ರ ಸೇರಿ ಹಲ್ಲೆ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 68/1989 ರಂತೆ ಕಲಂ 341,323,326 ಜೊತೆಗೆ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೊಮ್ಮಣ್ಣ ಮಗನಾದ ರವೀಂದ್ರ(56)ಎಂಬಾತ ಪೊಲೀಸರಿಗೆ ಹಾಗೂ ನ್ಯಾಯಾಲಯಕ್ಕೆ ಹಾಜರಾಗದೆ ಸಿಗದೆ ತಲೆಮರೆಸಿಕೊಂಡಿದ್ದನು.ಈತನ ಸಹ ಆರೋಪಿ ಕೊರಗಪ್ಪ ಗೌಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿ ಪ್ರಕರಣದಿಂದ ಖುಲಾಸೆಯಾಗಿದ್ದಾನೆ.

ಆರೋಪಿಗಾಗಿ ಹುಡುಕಾಟ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯದಿಂದ ಆರೋಪಿ ಪತ್ತೆಗಾಗಿ ಎಲ್.ಪಿ.ಸಿ 04/1992 ರಂತೆ ವಾರಂಟ್ ಜಾರಿ ಮಾಡಿದ್ದರು. ಈ ಪ್ರಕರಣದ ಆರೋಪಿ ರವೀಂದ್ರನ ಪತ್ತೆಗಾಗಿ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡದ ಸಿಬ್ಬಂದಿಗಳು ಆರೋಪಿಯ ಬಗ್ಗೆ ವಿವಿಧ ಕಡೆ ಹುಡುಕಾಟ ನಡೆಸುತ್ತಿದ್ದರು.

ಆರೋಪಿ ಬಂಧನ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಬೊಮ್ಮಣ್ಣ ಮಗನಾದ ರವೀಂದ್ರ(56) ಎಂಬಾತನನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಖಚಿತ ಮಾಹಿತಿ ಮೇರೆಗೆ ಜ.6 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು ಎಂಬಲ್ಲಿ ಬಂಧಿಸಿ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು. ಆರೋಪಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ತಲೆಮರೆಸಿಕೊಂಡು ಬಿಂದಾಸ್ ಜೀವನ: ಹಲ್ಲೆ ಪ್ರಕರಣ ದಾಖಲಾದ ಬಳಿಕ ಪೊಲೀಸರಿಗೆ ಕೈಗೆ ಸಿಗದೆ ತಲೆಮರೆಸಿಕೊಂಡು ರವೀಂದ್ರ 12 ವರ್ಷಗಳ ಕಾಲ ಪುಣೆಯಲ್ಲಿ ಕೆಲಸ ಮಾಡುತ್ತಿದ್ದ ಬಳಿಕ ಬೆಳಗಾವಿಯಲ್ಲಿ 5 ವರ್ಷ ಕೆಲಸ ಮಾಡಿದ್ದಾನೆ.ಈ ನಡುವೆ ಯುವತಿಯೊಬ್ಬಳ ಜೊತೆಗೆ ಮದುವೆಯಾಗಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವನ್ನು ಕರುಣೆಸಿ ಜೀವನ ಸಾಗಿಸುತ್ತಿದ್ದ. ವಿದ್ಯಾಭ್ಯಾಸ ಮಾಡಿದ ಬಳಿಕ ಮಗಳಿಗೆ ಮದುವೆ ಮಾಡಿಕೊಟ್ಟಿದ್ದು. ಮಗ ವಿದ್ಯಾಭ್ಯಾಸ ಮಾಡಿ ಬೆಂಗಳೂರು ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ ಬಳಿಕ ರವೀಂದ್ರ ಕೊನೆಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರಿಗೆ ಬಂದು ಮನೆ ಕಟ್ಟಿ ಡಿ.5 ಕ್ಕೆ ಗೃಹಪ್ರವೇಶ ಮಾಡಿ ವಾಸವಾಗಿದ್ದ ಎನ್ನಲಾಗಿದೆ.

ಸಣ್ಣ ಕ್ಲೂ ರವೀಂದ್ರ ಲಾಕ್: ಪೊಲೀಸರು ಮತ್ತು ನ್ಯಾಯಾಲಯದ ಕೈಗೆ ಸಿಗದೆ ಬರೋಬ್ಬರಿ 36 ವರ್ಷಗಳ ಕಾಲ ವಿವಿಧ ರಾಜ್ಯಗಳಲ್ಲಿ ತಲೆಮರೆಸಿಕೊಂಡು ಓಡಾಡಿಕೊಂಡಿದ್ದ ಬಿಂದಾಸ್ ಜೀವನ ಮಾಡುತ್ತಿದ್ದ ರವೀಂದ್ರನನ್ನು ಧರ್ಮಸ್ಥಳ ಪೊಲೀಸರು 36 ವರ್ಷಗಳ ಬಳಿಕ ಕಠಿಣ ಪರಿಶ್ರಮಪಟ್ಟು ಸಣ್ಣ ಒಂದು ಮಾಹಿತಿ(ಕ್ಲೂ) ಮೇರೆಗೆ ಬೇಟೆಯಾಡಿ ಕೈಕೊಲ ತೋಡಿಸಿ ಕರೆದುಕೊಂಡು ಬಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆ: ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ಸಿ.ಕೆ.ರೋಹಿಣಿ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ರವಿ.ಬಿ.ಎಸ್ ನೇತೃತ್ವದಲ್ಲಿ ಧರ್ಮಸ್ಥಳ ಸಬ್ ಇನ್ಸ್‌ಪೆಕ್ಟರ್ ಸಮರ್ಥ್ ಆರ್ ಗಾಣಿಗೇರ ತಂಡದ ಸಿಬ್ಬಂದಿ ವೃಷಭ, ಚರಣ್ ರಾಜ್, ಯೋಗರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ

Suddi Udaya

ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಕೇಂದ್ರದ ನ್ಯೂನತೆಗಳನ್ನು ಸರಿಪಡಿಸುವಂತೆ ಉಸ್ತುವಾರಿ ಸಚಿವರಿಗೆ ಕೆ.ವಸಂತ ಬಂಗೇರ ಮನವಿ

Suddi Udaya

ನೆರಿಯ: ಕುವೆತ್ತಿಲ್ ನಲ್ಲಿ ಆಕಸ್ಮಿಕ ಬೆಂಕಿ ಅನಾಹುತ: ಅನಿಲ್ ಎಂಬವರ ಮನೆಗೆ ಸಂಪೂರ್ಣ ಹಾನಿ

Suddi Udaya

ಮಡಂತ್ಯಾರು: ಸ್ವಚ್ಛತಾ ಕಾರ್ಯ ನಡೆಯುವ ವೇಳೆ ಮಾರುತಿ ಕಾರಿನಲ್ಲಿ ಬಂದು ಕಸ ಹಾಕಿದವರಿಗೆ ಪಂಚಾಯತ್ ನಿಂದ ರೂ. 5 ಸಾವಿರ ದಂಡ

Suddi Udaya

ಸುಬ್ರಹ್ಮಣ್ಯ: ಕುಮಾರಧಾರ – ಕುಲ್ಕುಂದ ಕಾಲೋನಿ ರಸ್ತೆ ಬದಿ ಸಮಾಜಸೇವಕ ರವಿ ಪೂಜಾರಿ ಕಕ್ಕೆಪದವು ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನ-ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರ ಸಾನಿಧ್ಯ ಇದೆ: ರಾಜಶೇಖರ ಕೋಟ್ಯಾನ್

Suddi Udaya

ಬೆಳ್ತಂಗಡಿ : ವರ್ಗಾವಣೆಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!