22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಡಿಕೆ ಕ್ಷೇತ್ರದ ದಿಗ್ಗಜರಿಂದ ನಿಡ್ಲೆಯ ಅಗ್ರಿಲೀಫ್ ಗೆ ಭೇಟಿ: ಎಐ ಆಧಾರಿತ ಅಡಿಕೆ ಗ್ರೇಡಿಂಗ್ ತಂತ್ರಜ್ಞಾನಕ್ಕೆ ಮೆಚ್ಚುಗೆ

ನಿಡ್ಲೆ: ಅಡಿಕೆ ಮಹಾಮಂಡಳದ ಅಧ್ಯಕ್ಷರಾಗಿರುವ ತೀರ್ಥಹಳ್ಳಿ ಶಾಸಕ ಹಾಗೂ ರಾಜ್ಯದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಅಡಿಕೆ ಕ್ಷೇತ್ರದ ಪ್ರಮುಖ ನಾಯಕರು, ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಮತ್ತು ತಜ್ಞರು ಜ.5ರಂದು ನಿಡ್ಲೆಯ ಅಗ್ರಿಲೀಫ್ ಎಕ್ಸ್‌‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್‌ನ ಕೇಂದ್ರ ಕಚೇರಿ ಹಾಗೂ ಕಾರ್ಖಾನೆಗೆ ಭೇಟಿ ನೀಡಿ, ಇಲ್ಲಿರುವ ಅಡಿಕೆ ಹಾಳೆ ಉತ್ಪನ್ನಗಳು ಹಾಗೂ ಬಳಸಲಾಗಿರುವ ನವೀನ ತಂತ್ರಜ್ಞಾನಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭೇಟಿಯ ವೇಳೆ ಅಗ್ರಿಲೀಫ್ ಸಂಸ್ಥೆಯ ಸಂಪೂರ್ಣ ಕಾರ್ಖಾನೆ ವ್ಯವಸ್ಥೆ, ಉತ್ಪಾದನಾ ಪ್ರಕ್ರಿಯೆ ಮತ್ತು ತಾಂತ್ರಿಕ ಅನುಷ್ಠಾನಗಳ ಬಗ್ಗೆ ನಿಯೋಗಕ್ಕೆ ವಿವರಣೆ ನೀಡಲಾಯಿತು. ವಿಶೇಷವಾಗಿ ಎಐ ಆಧಾರಿತ ಕಂಪ್ಯೂಟರ್ ತಂತ್ರಜ್ಞಾನ ಬಳಸಿ ಅಡಿಕೆಯನ್ನು ಗ್ರೇಡಿಂಗ್ ಮಾಡುವ ಹೊಸ ಆವಿಷ್ಕಾರಗಳ ಬಗ್ಗೆ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿತು. ಅಗ್ರಿಲೀಫ್ ಅಳವಡಿಸಿಕೊಂಡಿರುವ ಸ್ವಯಂಚಾಲಿತ ತಾಂತ್ರಿಕ ವ್ಯವಸ್ಥೆ, ಗುಣಮಟ್ಟದ ನಿಯಂತ್ರಣ ಕ್ರಮಗಳು, ಹಾಗೂ ಕಾರ್ಯಕ್ಷಮತೆಯನ್ನು ವೀಕ್ಷಿಸಿದ ತಜ್ಞರ ತಂಡ, ತಂತ್ರಜ್ಞಾನವನ್ನು ಅಳವಡಿಸಿ ಅಂತಾರಾಷ್ಟ್ರೀಯ ಮಾರುಕಟ್ಟೆ ತಲುಪುವ ಬಗೆ , ಉತ್ಪಾದನಾ ವೆಚ್ಚ ಕಡಿತಗೊಳಿಸುವ ತಂತ್ರಗಾರಿಕೆಯನ್ನು ಹೊಂದಿರುವ ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ ಅವರು, “ನಾನೂ ಹಾಳೆತಟ್ಟೆಗಳನ್ನು ಮಾಡಿದ್ದೇನೆ. ಆದರೆ ಈ ರೀತಿಯ ತಂತ್ರಜ್ಞಾನ ಆಧಾರಿತ ಉತ್ಪಾದನೆಯನ್ನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ. ಇದು ಈ ಕಾಲದ ಅಗತ್ಯವೂ ಹೌದು. ಅಗ್ರಿಲೀಫ್ ಕೈಗೊಂಡಿರುವ ಈ ಹೊಸ ಪ್ರಯತ್ನಗಳಿಗೆ ನಮ್ಮ ಸಂಪೂರ್ಣ ಬೆಂಬಲ ಇದೆ” ಎಂದು ಹೇಳಿದರು.

ಭೇಟಿಯ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಗಳು ಮತ್ತು ಖಾಸಗಿ ಸಂಸ್ಥೆಗಳು ಒಟ್ಟಾಗಿ ಬೆಳೆಯಬೇಕು ಎಂಬ ವಿಚಾರಕ್ಕೆ ಹೆಚ್ಚಿನ ಒತ್ತಡ ನೀಡಲಾಯಿತು. ಇಂದಿನ ಅಗತ್ಯಗಳಿಗೆ ತಕ್ಕಂತೆ ಹೊಸ ಒಡಂಬಡಿಕೆಗಳು, ಸಹಕಾರದ ಮಾದರಿಗಳು ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ಅಭಿವೃದ್ಧಿ ಕುರಿತು ವಿಸ್ತೃತ ಚರ್ಚೆ ನಡೆಯಿತು. ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ, ಕಾರ್ಖಾನೆ ವೀಕ್ಷಣೆ ಮತ್ತು ತಂತ್ರಜ್ಞಾನ ಪ್ರಾತ್ಯಕ್ಷಿಕೆ ನಡೆಯಿತು.

ಅಡಿಕೆ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರಿತ ಹೊಸ ದಿಕ್ಕು ತೋರಿಸುತ್ತಿರುವ ಅಗ್ರಿಲೀಫ್ ಸಂಸ್ಥೆಯ ಈ ಪ್ರಯತ್ನಗಳು ರೈತರು, ಸಹಕಾರಿ ಸಂಸ್ಥೆಗಳು ಹಾಗೂ ಖಾಸಗಿ ಉದ್ಯಮಗಳ ನಡುವೆ ಬಲವಾದ ಸಹಕಾರಕ್ಕೆ ವೇದಿಕೆ ಸೃಷ್ಟಿಸುತ್ತಿವೆ ಎಂದು ನಿಯೋಗದಲ್ಲಿದ್ದ ಗಣ್ಯರು ಅಭಿಪ್ರಾಯಪಟ್ಟರು.

ಭೇಟಿ ಸಂದರ್ಭದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಕಿಶೋರ್ ಕುಮಾರ್ ಕೊಡಗಿ, ಶಿರಸಿಯ ತೋಟಗಾರ್ಸ್‌ ಸಹಕಾರಿ ಮಾರಾಟ ಸಂಘದ (TSS) ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ತೋಟ ಉತ್ಪನ್ನಗಳ ಮಾರಾಟ ಸಹಕಾರ ಸಂಘದ (TUMCOS) ಅಧ್ಯಕ್ಷ ಶಿವಕುಮಾರ್, ಮಲ್ನಾಡ್ ಅಡಿಕೆ ಮಾರಾಟ ಸಹಕಾರಿ ಸಂಘ (ಮಾಮ್ಕೋಸ್) ಉಪಾಧ್ಯಕ್ಷ ವಿ.ಪಿ. ಮಹೇಶ್, ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ, ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪಾಡಿ, ಎಆರ್‌ಡಿಎಫ್ ಮಂಗಳೂರಿನ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ವಿಜ್ಞಾನಿ ಡಾ. ಎಸ್. ಕೇಶವ ಭಟ್, ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ. ವಿಘ್ನೇಶ್ವರ ವರ್ಮುಡಿ, ವಿಟ್ಲದ ರೈತ ವಿಜ್ಞಾನಿ ಬದನಾಜೆ ಶಂಕರ ಭಟ್ ಉಪಸ್ಥಿತರಿದ್ದರು.

“ನಮ್ಮ ಅಗ್ರಿಲೀಫ್ ಫ್ಯಾಕ್ಟರಿಯಲ್ಲಿ ಅಡಿಕೆ ಗ್ರೇಡಿಂಗ್ ತಂತ್ರಜ್ಞಾನವನ್ನು ತಯಾರಿಸಿ ಅಡಿಕೆ ಬೆಳೆಗಾರರ ಸಮಸ್ಯೆಗೆ ಪರಿಹಾರ ರೂಪದಲ್ಲಿ ಸಮಾಜಕ್ಕೆ ಕೊಡಲಾಗಿದ್ದು ಅಡಿಕೆ ಕ್ಷೇತ್ರದ ದಿಗ್ಗಜರು ಹಾಳೆ ಮತ್ತು ತ್ಯಾಜ್ಯಗಳನ್ನು ಉಪಯೋಗಿಸಿ ಅಗ್ರಿಲೀಫ್ ನವೀನ ಆವಿಷ್ಕಾರಗಳನ್ನು ಕಂಡು ಶ್ಲಾಘಿಸಿದ್ದು ನಮಗೆ ಇನ್ನಷ್ಟು ಪ್ರೇರಣೆ ನೀಡಿದೆ” -ಅವಿನಾಶ್ ರಾವ್, ಸ್ಥಾಪಕರು, ಅಗ್ರಿಲೀಫ್

Related posts

ಪುಂಜಾಲಕಟ್ಟೆ -ಚಾರ್ಮಾಡಿ ಅವೈಜ್ಞಾನಿಕ ಕಾಮಗಾರಿಯಿಂದ ಬೇಸತ್ತ ನಾಗರಿಕರು

Suddi Udaya

ಗೇರುಕಟ್ಟೆಯಲ್ಲಿ ಅಪೂರ್ವವಾಗಿ ನಡೆದ ಮಾತೃ ವಂದನಾ ಕಾರ್ಯಕ್ರಮ

Suddi Udaya

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ಸೌಜನ್ಯ ಮಾವ ವಿಠಲ್ ಗೌಡ ಪ್ರಕರಣದ ಆರೋಪಿ; ಸ್ಪೋಟಕ ತಿರುವು ನೀಡಿದ ಹೋರಾಟಗಾರ ಸ್ನೇಹಮಯಿ ಕೃಷ್ಣ

Suddi Udaya

ಬರೆಂಗಾಯ : ಮುಳಂಪಾಯ ಎಂಬಲ್ಲಿ ಏರ್‌ಟೆಲ್ ನೆಟ್ ವರ್ಕ್ ಸಮಸ್ಯೆ: ಬಗೆಹರಿಸುವಂತೆ ಸ್ಥಳೀಯರ ಆಗ್ರಹ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ವಿದ್ಯಾರ್ಥಿ ಅಭಿಷೇಕ್ ರಿಗೆ ಡಿಪ್ಲೋಮ ಸಿಇಟಿ ಯಲ್ಲಿ ರಾಜ್ಯಕ್ಕೆ 20ನೇ ರ್‍ಯಾಂಕ್

Suddi Udaya

ಡಾ. ಮನಮೋಹನ್ ಸಿಂಗ್ ಅವರ ಸಾಧನೆ, ಕೊಡುಗೆಗಳು ದೇಶಕ್ಕೆ ಎಂದಿಗೂ ಅಜರಾಮರ: ರಕ್ಷಿತ್ ಶಿವರಾಂ

Suddi Udaya
error: Content is protected !!