ಗುರುವಾಯನಕೆರೆ: ಕುವೆಟ್ಟು ಗ್ರಾಮದ ಸರ್ವೇ ನಂ.130/2ರಲ್ಲಿ 0.85 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಕಾಲೇಜಿಗೆ ಸಂಬಂಧಿಸಿದ ಕಟ್ಟಡವೊಂದರ ನಿರ್ಮಾಣಕ್ಕೆ ಸಂಬಂಧಿಸಿದ ಪರವಾನಗಿ ಪ್ರಕ್ರಿಯೆ ಪೂರ್ಣಗೊಳಿಸಿ,ಅನುಮತಿ ಪಡೆದುಕೊಂಡ ನಂತರ ಕಾಮಗಾರಿ ಮುಂದುವರಿಸುವುದಾಗಿ ಗುರುವಾಯನಕೆರೆಯ ವಿದ್ವತ್ ಕಾಲೇಜಿನ ಸ್ಥಾಪಕರಾದ ಸುಭಾಶ್ಚಂದ್ರ ಶೆಟ್ಟಿಯವರು ಕುವೆಟ್ಟು ಪಂಚಾಯತ್ ಅಧಿಕಾರಿಗೆ ಪತ್ರ ಮುಖೇನ ತಿಳಿಸಿದ್ದಾರೆ.
ಜ.5 ಮತ್ತು 7ರಂದು ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಶಂಕರ್ ಅವರು ವಿದ್ವತ್ ಕಾಲೇಜಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದ ವೇಳೆ, ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ಅಗತ್ಯ ಅನುಮೋದನೆಗಳನ್ನು ಪಡೆದುಕೊಂಡು ಕಾಮಗಾರಿ ಮುಂದುವರೆಸಿ ಎಂದು ಕಾಲೇಜು ಆಡಳಿತ ಮಂಡಳಿಗೆ ನಿರ್ದೇಶನ ನೀಡಿದ್ದರು.
ಜ.6ರಂದು ಕುವೆಟ್ಟು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಇಮ್ತಿಯಾಸ್ ಅವರು ತಿಳುವಳಿಕೆ ಪತ್ರವೊಂದನ್ನು ಕಾಲೇಜಿಗೆ ನೀಡಿ, ಕಾಮಗಾರಿಗೆ ತಡೆ ನೀಡಿ ಎಂದು ಸೂಚಿಸಿದ್ದರು.
ಈ ತಿಳುವಳಿಕೆ ಪತ್ರಕ್ಕೆ ಜ.7ರಂದು ಪತ್ರದ ಮೂಲಕ ಪ್ರತಿಕ್ರಿಯೆ ಸಲ್ಲಿಸಿರುವ ವಿದ್ವತ್ ಕಾಲೇಜಿನ ಸ್ಥಾಪಕರಾದ ಸುಭಾಶ್ಚಂದ್ರ ಶೆಟ್ಟಿಯವರು, ತಿಳುವಳಿಕೆ ಪತ್ರ ಮುಖೇನ ನೀಡಿರುವ ಸೂಚನೆಗಳನ್ನು ಗೌರವಪೂರಕವಾಗಿ ಅಂಗೀಕರಿಸಲಾಗುವುದು. ಕಟ್ಟಡ ನಿರ್ಮಾಣದ ಪರವಾನಗಿ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಈಗಾಗಲೇ ಸಂಬಂಧಪಟ್ಟ ಇಲಾಖೆಗಳಿಗೆ ಸಲ್ಲಿಸಿದ್ದು, ಅಧಿಕೃತ ಅನುಮತಿ ದೊರಕುವವರೆಗೆ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತೇವೆ. ಮುಂದಿನ ದಿನಗಳಲ್ಲಿ ನಿಯಮಾನುಸಾರ ಅಗತ್ಯ ಅನುಮತಿಗಳನ್ನು ಪಡೆದುಕೊಂಡು ಕಾಮಗಾರಿ ಮರು ಪ್ರಾರಂಭಿಸುತ್ತೇವೆ ಎಂದು ತಿಳಿಸಿದ್ದಾರೆ.











