September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್.ಡಿ.ಎಂ ಕಾಲೇಜು : ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಮಹಾವಿದ್ಯಾಲಯ ಹಿಂದಿ ವಿಭಾಗದ ವತಿಯಿಂದ ‘ವರ್ತಮಾನದಲ್ಲಿ ಭಕ್ತಿಕಾಲೀನ ಹಿಂದಿ ಸಾಹಿತ್ಯದ ಪ್ರಸ್ತುತತೆ’ ವಿಚಾರದ ಕುರಿತು ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ ನೀಡಲಾಯಿತು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಮಾರ್ಗದರ್ಶನದಲ್ಲಿ ಎಸ್.ಡಿ.ಎಂ ಪದವಿ ಕಾಲೇಜಿನ ಸಮ್ಯಗ್ದರ್ಶನ ಸಭಾ ಭವನದಲ್ಲಿ ನಡೆದ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜ್ಯುಕೇಷನ್ ಸೊಸೈಟಿಯ ಶೈಕ್ಷಣಿಕ ಸಂಯೋಜಕ ಪ್ರೊ. ಶಶಿಶೇಖರ್ ಎನ್. ಕಾಕತ್ಕರ್ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿವರು. ಬಳಿಕ ಮಾತನಾಡಿ, ಭಕ್ತಿ ಕಾಲಿನ ಹಿಂದಿ ಸಾಹಿತ್ಯವು ಧಾರ್ಮಿಕ ವೈಚಾರಿಕತೆಯನ್ನು ಮೂಡಿಸುವುದರ ಜೊತೆಗೆ ನೈತಿಕ ಮೌಲ್ಯಗಳನ್ನು ತಿಳಿ ಹೇಳುತ್ತದೆ. ಸಾಹಿತ್ಯವು ನಮ್ಮ ಜೀವನವನ್ನು ಶಿಸ್ತಿನ ಚೌಕಟ್ಟಿನಲ್ಲಿ ಬೆಳೆಯುವಂತೆ ಮಾರ್ಗದರ್ಶಿಸುತ್ತದೆ ಎಂದು ವಿಚಾರ ಸಂಕಿರಣಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಗುಜರಾತ್ ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ದಿಲೀಪ್ ಮೆಹ್ರಾ ಮಾತನಾಡಿ, ಭಕ್ತಿ ಕಾಲದ ಕುರಿತಾದ ಸಾಹಿತ್ಯ ಚಿಂತನೆಗಳು ಮಾನವೀಯ ಮೌಲ್ಯಗಳನ್ನು ಬೋಧಿಸಿ, ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ತುಳಸಿ ದಾಸ್, ಸಂತ ಕಬೀರ ರವರಂತಹ ಸಾಹಿತ್ಯಗಳು ಪ್ರಸ್ತುತ ಸಮಾಜಕ್ಕೆ ಅನಿವಾರ್ಯವಾಗಿರುವ ಅಹಿಂಸೆ ಮತ್ತು ದಯೆಯ ನೀತಿ ಪಾಠಗಳನ್ನು ಪ್ರಚುರ ಪಡಿಸುತ್ತದೆ. ಸಾಹಿತ್ಯವು ಮಾನವೀಯ ಜೀವನಕ್ಕೆ ಮಾತ್ರ ಮಹತ್ವ ನೀಡದೆ ಈ ನೆಲದ ಪ್ರತಿಯೊಂದು ಜೀವಿಗೂ ಗೌರವ ಮತ್ತು ಪ್ರಿತಿಯನ್ನು ಹಂಚುವ ಸಂದೇಶವನ್ನು ಸಾರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ಅಭ್ಯಾಗತರಾಗಿ ಪಾಂಡಿಚೇರಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಸಿ. ಜಯಶಂಕರ್ ಬಾಬು ಮಾತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ಸಾಹಿತ್ಯ ಅಧ್ಯಯನ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗ. ಇದು ಹೊಸ ಹೊಸ ಸಕಾರಾತ್ಮಕ ಚಿಂತನೆಗಳನ್ನು ನಮ್ಮೊಳಗೆ ಮೂಡಿಸುತ್ತದೆ. ಮಾನವೀಯ ಪ್ರೀತಿಯನ್ನು ಬೆಳೆಸುವ ಮಹತ್ವದ ಕಾರ್ಯವನ್ನು ಸಾಹಿತ್ಯವು ಮಾಡುತ್ತದೆ ಎಂದರು. ಬಳಿಕ ಈ ವಿಶೇಷ ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ಹಿಂದಿ ವಿಭಾಗಕ್ಕೆ ಅಭಿನಂದಿಸಿದರು.

ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಸ್ವಾಯತ್ತ ಕಾಲೇಜು ಮತ್ತು ಹಿಂದಿ ವಿಭಾಗದ ವತಿಯಿಂದ ಅತಿಥಿಗಳಾದ ಗುಜರಾತ್ ನ ಸರ್ದಾರ್ ಪಟೇಲ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಿಂದಿ ವಿಭಾಗದ ಮುಖ್ಯಸ್ಥ ಪ್ರೊ. ದಿಲೀಪ್ ಮೆಹ್ರಾ, ಪಾಂಡಿಚೇರಿ ವಿಶ್ವವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಸಿ. ಜಯಶಂಕರ್ ಬಾಬು, ಚೆನೈ ನ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು, ಪರೀಕ್ಷಾ ನಿಯಂತ್ರಕ ಡಾ. ಸುಭಾಷ್ ಜಿ. ರಾಣೆ ರವರನ್ನು ಎಸ್.ಡಿ.ಎಂ (ಸ್ವಾಯತ್ತ) ಕಾಲೇಜಿನ ಪ್ರಾಚಾರ್ಯ ಪ್ರೊ. ವಿಶ್ವನಾಥ್ ಪಿ ಶಾಲು ಹೊದಿಸಿ ಗೌರವಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಭಕ್ತಿ ಕಾಲದ ಹಿಂದಿ ಸಾಹಿತ್ಯದ ಪ್ರಸ್ತುತತೆಯ ವಿವಿಧ ವಿಷಯಗಳ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿತ್ತು. ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಜಿಲ್ಲೆಯ ಆಳ್ವಾಸ್, ವಿವೇಕಾನಂದ ಸೇರಿದಂತೆ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಹಾಗು ಮಂಗಳೂರು , ಕಾರ್ಕಳ ಮತ್ತು ಬೆಂಗಳೂರು ಸೇರಿದಂತೆ ವಿವಿಧ ಸಂಸ್ಥೆಗಳ ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ನಂದ ಕುಮಾರಿ, ರಿಜಿಸ್ಟ್ರಾರ್ ಹಾಗೂ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀಧರ ಭಟ್‌, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯ್ಕ್ ಹಾಗು ಐಕ್ಯುಎಸಿ ಸಂಯೋಜಕ ಗಜಾನನ ಭಟ್ ಸೇರಿದಂತೆ ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಎನ್ ಸ್ವಾಗತಿಸಿ, ಉಪನ್ಯಾಸಕಿ ಶೃತಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Related posts

ಪ್ರತಿಭಾ ಕಾರಂಜಿ ಸ್ಪರ್ಧೆ: ಕುಂಭಶ್ರೀ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ಉಜಿರೆ ಪೆರ್ಲ ಪ್ರಹ್ಲಾದ ನಗರದಿಂದ ಕಾಣೆಯಾದ ಪಿ.ಕೆ ಕೃಷ್ಣಪ್ಪರ ಪತ್ತೆಗೆ ಪೊಲೀಸರ ಮನವಿ

Suddi Udaya

ಮಲವಂತಿಗೆ: ಹಿರಿಯ ಕಂಬಳ ಓಟಗಾರ , ಸಾಧಕ ಕುದ್ಮಾನ್ ನಿವಾಸಿ ಲೋಕಯ್ಯ ಗೌಡ ನಿಧನ

Suddi Udaya

ಉಜಿರೆ ಎಸ್‌ಡಿಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ

Suddi Udaya

ಉಜಿರೆ ಎಸ್‌.ಡಿ.ಎಂ ಸಿ.ಬಿ.ಎಸ್.ಇ ಶಾಲೆಯ ಶಿಕ್ಷಕರಿಗೆ “ಕಲಿಕಾ ಫಲಿತಾಂಶ ಮತ್ತು ವಿಧಾನಗಳು” ಕಾರ್ಯಾಗಾರ

Suddi Udaya

ಉಜಿರೆ: ಅಖಿಲ ಭಾರತ ವೃತ್ತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ವೃತ್ತಿ ಪ್ರಮಾಣ ಪತ್ರ ವಿತರಣಾ

Suddi Udaya
error: Content is protected !!