ಬೆಳ್ತಂಗಡಿ: ರಾಜ್ಯದಲ್ಲಿ ಸರಕಾರಿ ನೌಕರರ ಸಂಘಟನೆ ಬಲಿಷ್ಠವಾಗಿದ್ದರಿಂದ ಎಲ್ಲಾ ನೌಕರರಿಗೆ ವೃತ್ತಿ ಒತ್ತಡದ ಬದುಕಿನ ನಡುವೆ ನ್ಯಾಯವೂ ದೊರೆಯುತ್ತಿದೆ ಎಂಬುದು ಆಶಾದಾಯಕ ವಿಚಾರ. ಆದ್ದರಿಂದ ಸಂಘಟನೆ ಎಲ್ಲರಿಗೂ ಬೇಕು ಎಂದು ತಹಶೀಲ್ದಾರ್ ಪೃಥ್ವಿ ಸಾನಿಕಂ ಹೇಳಿದರು.

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಇದರ ವತಿಯಿಂದ ರಾಜ್ಯಾಧ್ಯಕ್ಷ ಷಡಕ್ಷರಿ ಅವರ ಅಪೇಕ್ಷೆಯಂತೆ ರಾಜ್ಯದ ಎಲ್ಲಾ ಸರಕಾರಿ ನೌಕರರಿಗೆ ಕ್ಯಾಲೆಂಡರ್ ತಲುಪಿಸುವ ಗುರಿಯೊಂದಿಗೆ ಬೆಳ್ತಂಗಡಿ ಘಟಕದ ನೇತೃತ್ವದಲ್ಲಿ ಬೆಳ್ತಂಗಡಿ ಏಕತಾಭವನದಲ್ಲಿ ನಡೆದ ಕ್ಯಾಲೆಂಡರ್ ಬಿಡುಗಡೆ ಕಾರ್ಯ ನೆರವೇರಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾ. ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್ ಕರ್ನೋಡಿ ಮಾತನಾಡಿ, 2019 ರ ನಂತರ ಅಧಿಕಾರಕ್ಕೆ ಬಂದ ಈಗಿನ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಅನೇಕ ಯೋಜನೆಗಳು ನೌಕರರಿಗೆ ಲಭಿಸಿದೆ. ವೇತನ ಆಯೋಗ ರಚನೆ, ಮಹಿಳೆಯರಿಗೆ ಋತುಚಕ್ರ ರಜೆ ಸಹಿತ ಪ್ರಮುಖ ಪ್ರಯೋಜನಗಳು ಸ್ಮರಣೀಯವಾದುದು ಎಂದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಬಕ್ಕಪ್ಪನವರ್ ಶುಭ ಕೋರಿದರು.
ವೇದಿಕೆಯಲ್ಲಿ ತಾಲೂಕು ಸಮುದಾಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಮೇಶ್, ತಾ. ಸಂಘದ ಪ್ರಧಾನ ಕಾರ್ಯದರ್ಶಿ ವಿಕಾಸ್, ಕೋಶಾಧಿಕಾರಿ ಶೆಟ್ಟಿ ನಾರಾಯಣ ಸಂಜೀವ, ಸಂಘದ ರಾಜ್ಯ ಪರಿಷತ್ ಸದಸ್ಯ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ಸಂಘದ ಗೌರವಾಧ್ಯಕ್ಷ ಅಮಿತಾನಂದ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಉಪಾಧ್ಯಕ್ಷ ಚಂದ್ರಶೇಖರ ಧನ್ಯವಾದವಿತ್ತರು.
ವೃಂದ ಸಂಘಟನೆಗಳ ಪದಾಧಿಕಾರಿಗಳು, ತಾಲೂಕಿನ ವಿವಿಧ ಇಲಾಖೆಗಳ ಮುಖ್ಯಸ್ಥ ಅಧಿಕಾರಿಗಳು ಉಪಸ್ಥಿತರಿದ್ದರು.
ಬೆಳ್ತಂಗಡಿಗೆ ನೂತನವಾಗಿ ಪೊಲೀಸ್ ಉಪವಿಭಾಗ ಮಂಜೂರುಗೊಂಡು ಪ್ರಥಮ ಡಿವೈಎಸ್ಪಿ ಯಾಗಿ ಅಧಿಕಾರ ಸ್ವೀಕರಿಸಿದ ರೋಹಿಣಿ ಸಿ.ಕೆ ಅವರನ್ನು ಸಂಘದ ವತಿಯಿಂದ ಸ್ವಾಗತಿಸಲಾಗುವುದು. ಹೊಸ ಅಧಿಕಾರಿ ಆಗಮಿಸಿರುವುದು ಸಂಘಕ್ಕೆ ಹೆಮ್ಮೆ ತಂದಿದೆ. -ಜಯರಾಜ್ ಜೈನ್ ಅಧ್ಯಕ್ಷರು, ಸರಕಾರಿ ನೌಕರರ ಸಂಘ ಬೆಳ್ತಂಗಡಿ.











