ವೇಣೂರು: ಮಕ್ಕಳ ಜೊತೆ ಸಮಯ ಕಳೆಯುವ ಅಭ್ಯಾಸವನ್ನು ಪೋಷಕರು ರೂಢಿಸಿಕೊಳ್ಳಬೇಕು. ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರದ ಜೊತೆಗೆ ದೇಶಪ್ರೇಮ, ದೇಶಭಕ್ತಿ ಮೂಡಿಸಬೇಕು. ಶಿಶು ಮಂದಿರ, ಬಾಲಗೋಕುಲಗಳು ಸಂಸ್ಕಾರವನ್ನು ಬಿತ್ತರಿಸುವಲ್ಲಿ ಶ್ರಮಿಸುತ್ತಿದ್ದು, ಇದು ಸಂಸ್ಕಾರಯುತ ಸಮಾಜ ನಿರ್ಮಾಣದ ಬಹುದೊಡ್ಡ ಯಶಸ್ಸು ಆಗಿದೆ. ನಮ್ಮ ಭಾಷೆ, ಆಚರಣೆಗಳ ಜೊತೆಗೆ ಭಾರತವನ್ನು ವಿಶ್ವಗುರುವನ್ನಾಗಿ ನಿರ್ಮಾಣ ಮಾಡುವಲ್ಲಿ ನಾವೆಲ್ಲ ಶ್ರಮಿಸೋಣ ಕರ್ನಾಟಕ ಸೇವಾಭಾರತಿ ಕಾರ್ಯದರ್ಶಿ ಕೆ. ಚೆನ್ನಯ್ಯ ಸ್ವಾಮಿ ಹೇಳಿದರು.
ಅವರು ವೇಣೂರು ಸೇವಾ ಶರಧಿ ವಿಶ್ವಸ್ತ ಮಂಡಳಿ ಇದರ ರಜತ ಸಂಭ್ರಮ ಸವಿನೆನಪಿಗಾಗಿ ದಾನಿಗಳ ನೆರವಿನಲ್ಲಿ ನಿರ್ಮಿಸಲಾದ ಭಾರತೀ ಕಲಾ ಮಂಟಪದ ಲೋಕಾರ್ಪಣೆ ಹಾಗೂ ಭಾರತೀ ಶಿಶು ಮಂದಿರ, ಮಹಿಳಾ ಹಾಗೂ ಯುವತಿ ಮಂಡಲದ ಸಂಯುಕ್ತ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.
ನಿವೃತ್ತ ಅಧ್ಯಾಪಕ ಕುಂಞಡಿ ಸುಂದರ್ ರಾವ್ ಅವರು ಭಾರತೀ ಕಲಾ ಮಂಟಪದ ಲೋಕಾರ್ಪಣೆ ನೆರವೇರಿಸಿ, ಶುಭ ಹಾರೈಸಿದರು. ಸೇವಾ ಶರಧಿ ವಿಶ್ವಸ್ತ ಮಂಡಳಿ ಅಧ್ಯಕ್ಷ ಕೆ. ಭಾಸ್ಕರ ಪೈ ಅಧ್ಯಕ್ಷತೆ ವಹಿಸಿ, ದಾನಿಗಳ ಸಹಕಾರವನ್ನು ಸ್ಮರಿಸಿದರು. ಸೇವಾ ಶರಧಿ ವಿಶ್ವಸ್ತ ಮಂಡಳಿ ಸಂಚಾಲಕಿ ಶೈಲಜಾ ಎಸ್. ಭಟ್ ಪ್ರಾಸ್ತಾವಿಸಿ, ನಮ್ಮ ಆಶ್ರಯದಂತೆ ಅಧ್ಯಕ್ಷರ ಪ್ರೋತ್ಸಾಹದಿಂದ ಅತ್ಯುತ್ತಮ ಮಂಟಪ ನಿರ್ಮಾಣವಾಗಿದೆ. ಸೇವೆಗಾಗಿ ಸಂಘಟನೆಗಳೇ ಇಲ್ಲದೇ ಸಮಯದಲ್ಲಿ ಸಂಘದ ಪ್ರೇರಣೆಯಂತೆ ಸಂಸ್ಥೆಯನ್ನು ಸ್ಥಾಪಿಸಿದೆವು. ದಾನಿಗಳ ನೆರವಿನಿಂದ ಶಿಶು ಮಂದಿರ ಸ್ಥಾಪಿಸಿದ್ದು, ಬಳಿಕ ಅಭೂತಪೂರ್ವ ಪ್ರೋತ್ಸಾಹ ಲಭಿಸಿತು. ಸಂಘದ ಬಂಧುಗಳು ಹಾಗೂ ಊರ ಮಹನೀಯರ ಸಹಕಾರದಿಂದ ಗಾಂಧಿನಗರದಲ್ಲಿ ಸಾಂದೀಪನಿ ಶಿಶು ಮಂದಿರ ಸ್ಥಾಪನೆಯಾಯಿತು. ಸಮುದ್ರದ ಅಲೆಯಂತೆ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದರು. ಗುರುವಾಯನಕೆರೆ ಹಂಸಗಿರಿ ರೈಸ್ಮಿಲ್ನ ಶಶಿಕಾಂತ್ ನಾಯಕ್, ಸುಮತಿ ಸುಂದರ್ ರಾವ್ ಉಪಸ್ಥಿತರಿದ್ದರು. ಶೈಲಜಾ ಭಟ್ ಸ್ವಾಗತಿಸಿದರು. ರವಿ ಭಟ್ ನಿರ್ವಹಿಸಿದರು. ಸೇವಾ ಶರಧಿ ವಿಶ್ವಸ್ತ ಮಂಡಳಿ ಟ್ರಸ್ಟಿ ದಯಾನಂದ ಭಂಡಾರಿ ವಂದಿಸಿದರು.
ಸನ್ಮಾನ-ಗೌರವಾರ್ಪಣೆ
ಎಸ್ಎಸ್ಎಲ್ಸಿ ಸಾಧಕರಾದ ಶಿಶು ಮಂದಿರದ ಹಿರಿಯ ವಿದ್ಯಾರ್ಥಿ ವೃಥ್ವಿ ಹಾಗೂ ಸವಾರ್ಥ್ ಎಸ್. ಜೈನ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಪತ್ರವನ್ನು ನಿವೃತ್ತ ಶಿಕ್ಷಕ ರತ್ನಾಕರ ಶೇರುಗಾರ ಹಾಗೂ ಮಾತೃ ಮಂಡಳಿ ಅಧ್ಯಕ್ಷೆ ಪದ್ಮ ಹರೀಶ್ ವಾಚಿಸಿದರು. ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಕಲಾ ಮಂಟಪ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳಿಗೆ ಹಾಗೂ ಮಂಟಪದ ನಿರ್ಮಾಣ ಕೆಲಸ ಮಾಡಿದ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಯುಕ್ತ ವಾರ್ಷಿಕೋತ್ಸವ
ಸಂಯುಕ್ತ ವಾರ್ಷಿಕೋತ್ಸವನಮ್ಮ ಧರ್ಮ, ಸಂಸ್ಕಾರ-ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವುದು ಪೋಷಕರ ಕರ್ತವ್ಯ ಎಂದು ಉಪನ್ಯಾಸಕಿ ಕು. ಅಕ್ಷಯಾ ಗೋಖಲೆ ಕಾರ್ಕಳ ಹೇಳಿದರು.
ಅವರು ಸಂಯುಕ್ತ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು. ವೇಣೂರು ಶ್ರೀ ಧ.ಮಂ.ಕೈಗಾರಿಕ ತರಬೇತಿ ಸಂಸ್ಥೆದ ಸಹ ಪ್ರಾಧ್ಯಾಪಕ ಅಧಿಕಾರಿ ನಾಗೇಶ್ ಉಡುಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂಡುಬಿದಿರೆ ಧನಲಕ್ಷ್ಮೀ ಸಮೂಹ ಸಂಸ್ಥೆಗಳ ಮಾಲಕರಾದ ಶ್ರೀಪತಿ ಭಟ್, ರಾಜೇಶ್ವರಿ ವಿ. ಅಧಿಕಾರಿ ಮಾರಗುತ್ತು, ಮಹಿಳಾ ಮಂಡಲದ ಅಧ್ಯಕ್ಷೆ ಅಮಿತಾ ಶೇಖರ್, ಯುವತಿ ಮಂಡಲದ ಅಧ್ಯಕ್ಷೆ ಜಯಶ್ರೀ ದಿನೇಶ್, ಭಾರತೀ ಶಿಶು ಮಂದಿರದ ವ್ಯವಸ್ಥಾಪಕಿ ರೋಹಿಣಿ ಪ್ರಕಾಶ್ ಉಪಸ್ಥಿತರಿದ್ದರು. ಸೇವಾ ಶರಧಿ ವಿಶ್ವಸ್ತ ಮಂಡಳಿ ಸ್ಥಾಪಕಾಧ್ಯಕ್ಷರಾದ ಶೈಲಜಾ ಭಟ್ ಕಾಮೆಟ್ಟು ಪ್ರಾಸ್ತಾವಿಸಿದರು. ಪೃಥ್ವಿಕ್ ರಾಜ್ ಸೇವಾಗೀತೆ ಹಾಡಿದರು. ಕು. ಸ್ಫೂರ್ತಿ ಭಟ್ ಪ್ರಾರ್ಥಿಸಿದರು. ಸೇವಾ ಶರಧಿ ವಿಶ್ವಸ್ತ ಮಂಡಳಿ ಅಧ್ಯಕ್ಷರಾದ ಕೆ. ಭಾಸ್ಕರ ಪೈ ಸ್ವಾಗತಿಸಿದರು. ಮಹಿಳಾ ಮಂಡಲದ ಅಧ್ಯಕ್ಷೆ ಅಮಿತಾ ಶೇಖರ್ ವರದಿ ವಾಚಿಸಿದರು. ಶಿಕ್ಷಕಿ ರೋಹಿಣಿ ನಿರೂಪಿಸಿದರು. ಮಮತಾ ಗಿರೀಶ್ ಮಹಿಳಾ ಮಂಡಲದ ಕಾರ್ಯದರ್ಶಿ ವಂದಿಸಿದರು.
ಶಿಶು ಮಂದಿರದ ಪುಟಾಣಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಯಕ್ಷಸಿರಿ ಪುರಸ್ಕೃತ ಸದಾಶಿವ ಕುಲಾಲ್ ಅವರ ಮಾರ್ಗದರ್ಶನದಲ್ಲಿ ಯಕ್ಷ ಶಿಕ್ಷಣ ಕಲಾಕೇಂದ್ರ ವೇಣೂರು ಇವರಿಂದ ಶ್ವೇತಾ ಕುಮಾರ ಚರಿತ್ರೆ ಪೌರಾಣಿಕ ಯಕ್ಷಗಾನ ನಡೆಯಿತು.











