ವೇಣೂರು: ನಾಡಿನೆಲ್ಲೆಡೆಲೆ ಸುಗ್ಗಿ ಹಬ್ಬವಾದ ಮಕರ ಸಂಕ್ರಾಂತಿಯ ಸಂಭ್ರಮ. ಈ ಹಬ್ಬದಲ್ಲಿ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ತಟ್ಟೆಯಲ್ಲಿ ಎಳ್ಳು ಬೆಲ್ಲ, ಕಬ್ಬು ಅರಶಿನ ಕುಂಕುಮ ಇಟ್ಟುಕೊಂಡು ಪ್ರೀತಿ ಪಾತ್ರರಿಗೆ ಎಳ್ಳು ಬೆಲ್ಲವನ್ನು ಜೊತೆಗೆ ಪ್ರೀತಿಯನ್ನು ಹಂಚುವ ದಿನ. ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರು ಈ ಬಾರಿ ಬೆಳ್ತಂಗಡಿ ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಬೆಳ್ತಂಗಡಿ ತಾಲೂಕಿನ ಎಲ್ಲಾ ಪರಿಶಿಷ್ಟ ಜಾತಿಯ ಬಂಧುಗಳ ಕಾಲನಿಗಳಲ್ಲಿ ಜ.೧೪ರಂದು ಸಂಕ್ರಾಂತಿ ಹಬ್ಬವನ್ನು ‘ಸಾಮರಸ್ಯದ ಸಂಕ್ರಾಂತಿ’ ಎಂಬ ವಿಶಿಷ್ಟ ಕಲ್ಪನೆಯಲ್ಲಿ ಆಚರಿಸಿದರು. ನಾರಾವಿ ಮಹಾಶಕ್ತಿಕೇಂದ್ರದ ವ್ಯಾಪ್ತಿಯ ಪ.ಜಾತಿ ಬಂಧುಗಳ ಕಾಲೋನಿಗಳಿಗೆ ತೆರಳಿದ ಶಾಸಕ ಹರೀಶ್ ಪೂಂಜ ಅವರು ಉಡುಗೊರೆ ಸಹಿತ ಸಾಮರಸ್ಯದ ಸಂಕ್ರಮಣದ ಶುಭ ಹಾರೈಸಿದರು. ಈ ಸರಣಿ ಕಾರ್ಯಕ್ರಮಕ್ಕೆ ವೇಣೂರು ಆದಿಶಕ್ತಿ ಭಜನಾ ಮಂದಿರದಲ್ಲಿ ಚಾಲನೆ ನೀಡಲಾಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ೧೦೦ ವರ್ಷ ಆದ ಸಂಭ್ರಮದ ಪ್ರೇರಣೆ ಪಡೆದು ಸರ್ವರನ್ನೂ ಬಂಧುಭಾವದಿಂದ ಅಭಿವೃದ್ಧಿಯೆಡೆಗೆ ಜೊತೆಗೆ ಕರೆದೊಯ್ಯುವ ಸಂಕಲ್ಪದೊಂದಿಗೆ ಈ ವಿಶಿಷ್ಟ ಕಾರ್ಯಕ್ರಮ ನಡೆಸಿದರು. ಪರಿಶಿಷ್ಟ ಬಂಧುಗಳು ತಯಾರಿಸಿ ಬಡಿಸಿದ ಉಪಹಾರಾದಿ ಆತಿಥ್ಯ ಸ್ವೀಕರಿಸಲಾಯಿತು. ಕಾರ್ಯಕ್ರಮದ ಚಾಲನೆ ವೇಳೆ ಸ್ಥಳೀಯ ಹಿರಿಯರು, ಜನಪ್ರತಿನಿಧಿಗಳು ಹಾಗೂ ಕಾಲನಿ ನಿವಾಸಿಗಳು ಉಪಸ್ಥಿತರಿದ್ದರು.











