ಅಳದಂಗಡಿ: ಆಮಂತ್ರಣ ಸೇವಾ ಪ್ರತಿಷ್ಠಾನ ಅಳದಂಗಡಿ ಇದರ ದಶಮಾನೋತ್ಸವ ಸಾಂಸ್ಕೃತಿಕ, ಸಾಹಿತ್ಯಿಕ, ಜಾನಪದ, ಹಾಡು, ಯಕ್ಷಗಾನ, ನೃತ್ಯ, ಚಿತ್ರ ಸೇರಿದ ದ.ಕ ಜಾನಪದ ಜಾತ್ರೆ ಅಳದಂಗಡಿ ಅರಮನೆ ನಗರಿಯಲ್ಲಿ ಜ.17 ರಂದು ವಿದ್ಯುಕ್ತವಾಗಿ ಆರಂಭಗೊಂಡಿತು.
ಸಂಸದ ಕ್ಯಾ| ಬ್ರಿಜೇಶ್ ಚೌಟ ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ ಸಾಹಿತ್ಯ, ಸಂಸ್ಕೃತಿ, ಕಲೆಯನ್ನು ಉಳಿಸಿ ಬೆಳೆಸುವ ಹಾಗೂ ಮಕ್ಕಳ ಕನಸು ಮತ್ತು ಭಾವನೆಗೆ ಪ್ರೇರಣೆ ನೀಡುವ ಆಮಂತ್ರಣದ ಇಂದಿನ ಕಾರ್ಯಕ್ರಮ ದೇವರು ಮೆಚ್ಚುವ ಕೆಲಸ, ರಾಷ್ಟ್ರ ನಿರ್ಮಾಣದ ದೊಡ್ಡ ಕಾಯ೯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆಯನ್ನು ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶಿವಪ್ರಸಾದ್ ಅಜಿಲ ವಹಿಸಿದ್ದರು. ವೇದಿಕೆಯಲ್ಲಿ ಮಕ್ಕಳ ಸಾಹಿತಿ ಪ.ರಾ.ಶಾಸ್ತ್ರಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ಸದಾನಂದ ಪೂಜಾರಿ ಉಂಗಿಲಬೈಲು, ಹಿರಿಯರಾದ ಭುಜಬಲಿ, ನಿತ್ಯಾನಂದ ನಾವರ, ಸುಧೀರ್ ಆರ್.ಸುವಣ೯, ದ.ಕ ಜಿಲ್ಲಾ ಜಾನಪದ ಸಾಹಿತ್ಯ ಸಂಸ್ಥೆ ಅಧ್ಯಕ್ಷ ಪ್ರವೀಣ್ ಕೊಡಿಯಾಲ್ ಬೈಲ್, ಅಳದಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸರಸ್ವತಿ, ಯೋಜನೆ ಮೇಲ್ವಿಚಾರಕಿ ಯಶೋದಾ, ಎಕ್ಸಾಲೆಂಟ್ ಕಾಲೇಜಿನ ಉಪನ್ಯಾಸಕ ವಾದಿರಾಜ ಕಲ್ಲೂರಾಯ, ಟ್ರಸ್ಟ್ರಿಗಳಾದ ಅರುಣ್ ಅವ೯ ಹಾಗೂ ಸದಾನಂದ ಬಿ. ಕುದ್ಯಾಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅನಿತಾ ಶೆಟ್ಟಿ ಮೂಡಬಿದ್ರೆ ಇವರ ಕವನ ಸಂಕಲನ ‘ಕೆಂಪು ಬೊಟ್ಟಿನ ಹುಡುಗಿ ‘ ಹಾಗೂ ಶಾಲಿನಿ ಕೆಮ್ಮಣ್ಣು ಇವರ ಕವನ ಸಂಕಲನ ‘ಅಮೃತಾಧಾರೆ’ ಕೃತಿಯನ್ನು ಸಂಸದರು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಪೋಟೋ ಸ್ಪರ್ಧೆಯ ವಿಜೇತರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ‘ಅರುವ ಶ್ರೀ ಮತ್ತು ಸತ್ಯ ಶ್ರೀ’ ಪ್ರಶಸ್ತಿಯನ್ನು ಗಣ್ಯರು ವಿತರಿಸಿದರು.
ಆಮಂತ್ರಣ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಜಯ ಕುಮಾರ್ ಜೈನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.











