ಬೆಳ್ತಂಗಡಿ: ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ಸರಕಾರದ ಸುತ್ತೋಲೆಯಂತೆ ಕುವೆಟ್ಟು ಗ್ರಾಮ ಪಂಚಾಯತ್ನಲ್ಲಿ ವಿಶೇಷ ಚೇತನರ ಸಮನ್ವಯ ಗ್ರಾಮ ಸಭೆಯು ಇತ್ತೀಚೆಗೆ ನಡೆಯಿತು. ಈ ವೇಳೆ ಶೇ.5 ರ ಮೀಸಲು ನಿಧಿಯಿಂದ ಗ್ರಾಮದ ಆಯ್ದ 85 ಮಂದಿ ವಿಕಲಚೇತನರಿಗೆ ತಲಾ 2500 ರಂತೆ 2,12,500 ರೂ ಗಳ ವೈಯಕ್ತಿಕ ಚೆಕ್ ಹಸ್ತಾಂತರಿಸಲಾಯಿತು.
ಸಭಾಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಭಾರತಿ ಶೆಟ್ಟಿ ವಹಿಸಿದ್ದು, ವಿಕಲಚೇತನರ ಸಮಗ್ರ ಏಳಿಗೆಗಾಗಿ ನಮ್ಮ ಅವಧಿಯುದ್ದಕ್ಕೂ ಅನೇಕ ಕಾರ್ಯಕ್ರಮಗಳನ್ನು, ಸೇವಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿರುವ ತೃಪ್ತಿ ಇದೆ ಎಂದರು.
ವೇದಿಕೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಝ್, ಉಪಾಧ್ಯಕ್ಷ ಗಣೇಶ್ ಕೆ, ಸದಸ್ಯರಾದ ಮಂಜುನಾಥ ಕುಂಬ್ಳೆ , ರಿಯಾಝ್ ಅಹಮ್ಮದ್ ಉಪಸ್ಥಿತರಿದ್ದರು.
ತಾಲೂಕು ವಿಕಲಚೇತನರ ವಿವಿದೋದ್ದೇಶ ಪುನರ್ವಸತಿ ಸಂಯೋಜಕ ಜೋನ್ ಬ್ಯಾಪ್ಟಿಸ್ಟ್ ಡಿಸೋಜಾ ಮಾರ್ಗದರ್ಶಿ ಅಧಿಕಾರಿಯಾಗಿದ್ದು ಸರಕಾರಿ ಇಲಾಖೆಯ ಮಾಹಿತಿ ನೀಡಿದರು.
ಸೌಭಾಗ್ಯ ವಿಕಲಚೇತನರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಅಶ್ರಫ್ ಆಲಿಕುಂಞಿ ಮುಂಡಾಜೆ ಯವರು ಸಹಕಾರಿ ಸಂಘದ ಸೇವೆಯ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾ.ಪಂ ಕಾರ್ಯದರ್ಶಿ ಸೇವಂತಿ , ಗ್ರಂಥಪಾಲಕಿ ವಸಂತಿ , ಉದ್ಯೋಗ ಖಾತರಿ ಸಿಬ್ಬಂದಿ ದಿಲೀಪ್ ಕುಮಾರ್ , ಪಂಚಾಯತಿ ಸಿಬ್ಬಂದಿಗಳು, ಮತ್ತು ಸೌಭಾಗ್ಯ ವಿಕಲಚೇತನರ ಸಹಕಾರಿ ಸಂಘದ ವ್ಯವಸ್ಥಾಪಕ ಸಹನ್ ಕುಮಾರ್ ಉಪಸ್ಥಿತರಿದ್ದರು .
ಬಿಲ್ ಕಲೆಕ್ಟರ್ ಆನಂದ್ ಕೋಟ್ಯಾನ್ ಸ್ವಾಗತಿಸಿದರು. ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಸುಲೋಚನಾ ವಿ ವರದಿ ಮಂಡಿಸಿದರು .











