ಬೆಳ್ತಂಗಡಿ : ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘ ಇದರ ಸ್ಥಾಪಕಾಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ ಸದಾ ತನ್ನ ಸಮುದಾಯವನ್ನು ಸಂಘಟನೆಯ ಮೂಲಕ ಒಗ್ಗೂಡಿಸಲು ಮತ್ತು ಕುಲದೈವಗಳ ಮೂಲ ಕ್ಷೇತ್ರದ ಜೀರ್ಣೋದ್ದಾರಕ್ಕೆ ಹಾಗೂ ಸಮುದಾಯದ ಏಳಿಗೆಗೆ ಅವಿರತ ಶ್ರಮಿಸಿದ ಶಿವಾನಂದ ಬಳ್ಳಾಲ್ಬಾಗ್ ಜ. 9 ರಂದು ನಿಧನರಾಗಿದ್ದು, ತಾಲೂಕು ಘಟಕದ ವತಿಯಿಂದ ನುಡಿನಮನ ಕಾರ್ಯಕ್ರಮವು ಬೆಳ್ತಂಗಡಿಯ ಡಾ|| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜ.25 ರಂದು ನಡೆಸಲಾಯಿತು.
ಕರ್ನಾಟಕ ರಾಜ್ಯ ಆದಿದ್ರಾವಿಡ ಸಮಾಜ ಸೇವಾ ಸಂಘದ ಹಿರಿಯರು ಮತ್ತು ಮಾರ್ಗದರ್ಶಕರಾದ ರಘು ಧರ್ಮಸೇನಾ ಇವರು ದಿ| ಶಿವಾನಂದ ಬಳ್ಳಾಲ್ಬಾಗ್ ಇವರ ಬಾವಚಿತ್ರಕ್ಕೆ ದೀಪ ಬೆಳಗಿ, ಪುಷ್ಪಾರ್ಚನೆ ಮಾಡಿ, ಸಂಘಟನೆಗೆ ಮತ್ತು ಸಮುದಾಯಕ್ಕೆ ಅವರು ನೀಡಿದ ಕೊಡುಗೆಗಳು ಅಪಾರ. ಅವರ ತತ್ವಾದರ್ಶಗಳನ್ನು ಪ್ರಸ್ತುತ ನಾವು ಅಳವಡಿಸಿಕೊಂಡು ಸಮುದಾಯ ಮತ್ತು ಸಂಘಟನೆಯನ್ನು ಯಾವ ರೀತಿ ಬಲಪಡಿಸಬೇಕು ಎಂದು ವಿವರಿಸುವುದರ ಮೂಲಕ ನುಡಿನಮನ ಸಲ್ಲಿಸಿದರು.
ತಾಲೂಕು ಘಟಕದ ಗೌರವ ಸಲಹೆಗಾರರಾದ ಗೋಪಾಲಕೃಷ್ಣ ಕುಕ್ಕಳ, ಅಧ್ಯಕ್ಷ ದಿನೇಶ್ ಕೆ, ಕೊಕ್ಕಡ, ಪ್ರಧಾನ ಕಾರ್ಯದರ್ಶಿಯಾದ ಶೇಖರ್ ವಿ. ಧರ್ಮಸ್ಥಳ, ಹಾಗೂ ಸಂಘಟನೆಯ ಪ್ರಮುಖರಾದ ಬಾಬು ಬೆಳಾಲು, ಶ್ರೀನಿವಾಸ್ ಪಿ.ಎಸ್. ಇವರುಗಳು ದಿ| ಶಿವಾನಂದ ಬಳ್ಳಾಲ್ಬಾಗ್ ರವರು ಸಾಮಾಜಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಮುದಾಯಕ್ಕೆ ಓರ್ವ ವ್ಯಕಿಯಾಗಿ ಮತ್ತು ಶಕ್ತಿಯಾಗಿ ನೀಡಿದ ಕೊಡುಗೆಗಳನ್ನು ಮನನ ಮಾಡಿಕೊಳ್ಳುವುದರ ಮೂಲಕ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಮತ್ತು ಗ್ರಾಮ ಸಮಿತಿಯ ಪದಾಧಿಕಾರಿಗಳು, ಆದಿದ್ರಾವಿಡ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶೇಖರ್ ವಿ. ಧರ್ಮಸ್ಥಳ ಸ್ವಾಗತಿಸಿ, ಧನ್ಯವಾದವಿತ್ತರು.











