ನಾವೂರು : ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕಳೆದ 10 ವರ್ಷಗಳಿಂದ ಸತತವಾಗಿ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ವಿಷ್ಣು ಸಹಸ್ರನಾಮ ಹಾಗೂ ಭಗವದ್ಗೀತೆಯ ಪಠಣ ಹಾಗೂ ತರಬೇತಿ ನೀಡುತ್ತಾ ಬಂದಿರುವ ಹಾಗೂ ಗೋಪಾಲಕೃಷ್ಣ ದೇವಸ್ಥಾನದ ಅಭಿವೃದ್ಧಿಗೆ ದುಡಿದ ಡಾ. ಪ್ರದೀಪ್ ಆಟಿಕುಕ್ಕೆ ನಾವೂರು ಅವರಿಗೆ ಊರವರು ಸೇರಿ, ಅಧ್ಯಾತ್ಮ ಸಾಧಕಿ, ಬರಹಗಾರ್ತಿ ಡಾ| ವೀಣಾ ಬನ್ನಂಜೆ ಅವರ ಉಪಸ್ಥಿತಿಯಲ್ಲಿ “ಧರ್ಮ ಸಾರಥಿ” ಬಿರುದನ್ನು ನೀಡಿ ಗೌರವಿಸಿದ್ದಾರೆ.


ಶಶಿಧರ ಶೆಟ್ಟಿ ಅವರ ಮುಂದಾಳತ್ವದಲ್ಲಿ ಗ್ರಾಮಸ್ಥರು ಸೇರಿ, ಡಾ. ಪ್ರದೀಪ್ ಆಟಿಕುಕ್ಕೆ ನಾವೂರು ಅವರ ಧಾರ್ಮಿಕ ಸೇವೆಯನ್ನು ಗುರುತಿಸಿ ಗೌರವ ಸನ್ಮಾನ ಮಾಡಿದ್ದಾರೆ. ವೈದ್ಯ ವೃತ್ತಿಯಲ್ಲಿದ್ದರೂ, ಸಾಮಾಜಿಕ ಮತ್ತು ಧರ್ಮ ಜಾಗೃತಿ ಮೂಲಕ ಡಾ. ಪ್ರದೀಪ್ ಆಟಿಕುಕ್ಕೆ ನಾವೂರು ಅವರು ಮಾಡಿರುವ ಧರ್ಮಕ್ರಾಂತಿಯ ಕೆಲಸ ಗುರುತಿಸಿ ಈ ಗೌರವ ಸಲ್ಲಿಸಲಾಗಿದೆ. ಜ.31ರಂದು ನಾವೂರು ಜಾತ್ರೆಯ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯ ಸಭಾ ವೇದಿಕೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಡಾ| ಪ್ರದೀಪ್ ಆಟಿಕುಕ್ಕೆ ನಾವೂರು, ಅವರ ಪತ್ನಿ ಡಾ. ಕವಿತಾ ನಾವೂರು ಹಾಗೂ ಕುಟುಂಬಕ್ಕೆ ಶ್ರೀಕೃಷ್ಣನ ಪ್ರತಿಮೆಯನ್ನು ವೀಣಾ ಬನ್ನಂಜೆ ಅವರ ಮೂಲಕ ನೀಡಿ ಸನ್ಮಾನ ಮಾಡಲಾಯಿತು.


ಈ ಸಂದರ್ಭದಲ್ಲಿ ಅಧ್ಯಾತ್ಮ ಸಾಧಕಿ, ಬರಹಗಾರ್ತಿ ಡಾ| ವೀಣಾ ಬನ್ನಂಜೆ , ದಶಮಾನೋತ್ಸವ ಸಮತಿಯ ಅಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡ, ಕಾರ್ಯಾಧ್ಯಕ್ಷರಾದ ಪೂರಣ್ ವರ್ಮ, ಕೆ.ಎಂ.ಎಫ್.ನ ಸುಧಾಕರ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.











