ಬೆಳ್ತಂಗಡಿ : ನಾಗರಿಕ ಸೇವಾ ಟ್ರಸ್ಟ್ ಪ್ರಾರಂಭದಿಂದಲೇ ದಲಿತರ ನಡುವೆ ಪ್ರಾಮಾಣಿಕವಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದೆ. ಸ್ವಾಮಿ ವಿವೇಕಾನಂದರ ಆದರ್ಶದೊಂದಿಗೆ ದೀನ ದಲಿತರ ಜೊತೆ ಕೆಲಸ ಮಾಡುತ್ತಾ ಬಂದಿದೆ ಎಂದು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಹೇಳಿದರು.

ಅವರು ಫೆ.1 ರಂದು ಗುರುವಾಯನಕೆರೆಯಲ್ಲಿ ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಇದರ ಪ್ರಥಮ ವರ್ಷದ ಮಹಾಸಭೆ , ನೂತನ ಕಚೇರಿ ಹಾಗೂ ವಿದ್ಯಾಜ್ಯೋತಿ ಸಾವಿತ್ರಿಭಾಯಿ ಫುಲೆ ಮತ್ತು ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾಗರಿಕ ಸೇವಾ ಟ್ರಸ್ಟ್ ದಲಿತರ ಶಿಕ್ಷಣಕ್ಕೆ ಸದಾ ಒತ್ತು ನೀಡುತ್ತಿದ್ದು ದಲಿತರ ಉನ್ನತ ಶಿಕ್ಷಣಕ್ಕೂ ನಿಜಾರ್ಥದಲ್ಲಿ ಗಣನೀಯ ಪ್ರೋತ್ಸಾಹ ನೀಡಿದೆ. ದಲಿತರ ಸ್ಥಿತಿಗತಿ ಅಧ್ಯಯನ ನಡೆಸಿದೆ. ಇದರಲ್ಲಿ ದಲಿತ ಕುಟುಂಬಗಳು ಭೂಹಕ್ಕಿನಿಂದ ವಂಚಿತರಾಗಿರುವ ಮಹತ್ವದ ಚಾರಿತ್ರಿಕ ಚಿತ್ರಣ ಸಿಕ್ಕಿತು ಎಂದ ಸೋಮನಾಥ ನಾಯಕ್ ತಿಳಿಸಿದರು.
ಮುಖ್ಯ ಅತಿಥಿ ಪತ್ರಕರ್ತ ಅಚುಶ್ರೀ ಬಾಂಗೇರು ಮಾತನಾಡಿ, ಸತ್ಯಶೋಧ ವೇದಿಕೆಯು ಪ್ರಾರಂಭದಲ್ಲೇ ವಿಭಿನ್ನ, ವಿಶಿಷ್ಟ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಗುರುತಿಸಿಕೊಳ್ಳುತ್ತಿದೆ. ಶೋಷಿತರ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ಸಮಾಜ ಸುಧಾರಕರ, ಸಮಾಜ ಪರಿವರ್ತನಾ ಚಳುವಳಿಯ ಮಹಾನ್ ನಾಯಕರ ಆದರ್ಶದೊಂದಿಗೆ ವೈಚಾರಿಕ, ಸೈದ್ಧಾಂತಿಕ ಜಾಗೃತಿ ಮೂಡಿಸುವ ಮೂಲಕ ಸಮಾಜದಲ್ಲಿ ನಾಯಕತ್ವವನ್ನು ಪ್ರತಿಭಾವಂತರನ್ನು ಹುಟ್ಟು ಹಾಕುವ ಕಾರ್ಯವನ್ನು ಮಾಡುವಂತಾಗಲಿ ಎಂದು ಆಶಿಸಿದರು.
ದಲಿತರ ಭೂಹೋರಾಟ ಸಮಿತಿ ಸಂಚಾಲಕ ಎಂ.ಬಿ.ಕರಿಯ ಮಾತನಾಡಿ ದಲಿತರ ಸ್ಥಿತಿಗತಿಗಳನ್ನು ವಿವರಿಸುತ್ತಾ ಭೂಹೋರಾಟದ ಮೂಲಕ ಭೂವಂಚಿತ ದಲಿತರು ಸಂಘಟಿತರಾಗಿ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷ ಸುಕೇಶ್ ಕೆ ಮಾಲಾಡಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ವೇದಿಕೆ ಒಂದು ವರ್ಷದಲ್ಲಿ ಸಮುದಾಯಗಳ ನಡುವೆ ಕೈಗೊಂಡಿರುವ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮೆಲುಕು ಹಾಕಿದರು.
ವಿವಿಧ ಸಾಂಸ್ಕೃತಿಕ, ಪ್ರತಿಭಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯದರ್ಶಿ ಗಿರೀಶ್ ಪಣಕಜೆ, ಕೋಶಾಧಿಕಾರಿ ಯೋಗೀಶ್ ಪಣಕಜೆ, ವಿಶ್ವನಾಥ ಕಳೆಂಜ, ಸತೀಶ್ ಉಜಿರೆ, ಹರೀಶ್ ಕುಕ್ಕಳ, ಸತೀಶ್ ಮಾರಿಗುಡಿ, ಹರೀಶ್ ಪಣಕಜೆ, ಉಮೇಶ್ ಬೆಳಾಲ್ ಇದ್ದರು. ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ ಅಧ್ಯಕ್ಷ ಚೆನ್ನಕೇಶವ, ಮುಖಂಡರಾದ ಸಂಜೀವ ಆರ್, ಕರ್ನಾಟಕ ದ.ಸಂ.ಸ. (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್, ಸಾಮಾಜಿಕ ಹೋರಾಟಗಾರ ಶೇಖರ್ ಎಲ್, ಬಾಬಿ ಎಂ ಮಾಲಾಡಿ, ಶೇಖರ್ ಬಿ.ಕೆ. ಶೀನ ಪಿಲ್ಯ ಮತ್ತಿತರರು ಉಪಸ್ಥಿತರಿದ್ದರು.
ಕು.ರೀಮಾ ಕಳೆಂಜ ನಿರೂಪಿಸಿ ಕು.ಸುಷ್ಮಿತಾ ಮಾಲಾಡಿ ಸ್ವಾಗತಿಸಿದರು. ಕು.ರಮ್ಯಾ ಮುದ್ದಿಗೆ ವಂದಿಸಿದರು. ಪ್ರಾರಂಭದಲ್ಲಿ ಕು.ಮಂಗಳಾ ನಾಡಗೀತೆ ಹಾಡಿದರು.











