ಬೆಳ್ತಂಗಡಿ: ದ.ಕ.ಜಿಲ್ಲಾ ಪಂಚಾಯತ್, ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಬೆಳ್ತಂಗಡಿ ಪಶು ಆಸ್ಪತ್ರೆ ಹಾಗೂ ಮಂಗಳೂರು ದ.ಕ.ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಸಹಭಾಗಿತ್ವದಲ್ಲಿ ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ ಮತ್ತು ಮಾಹಿತಿ ಶಿಬಿರ ಫೆ.7 ರಂದು ಬೆಳ್ತಂಗಡಿ ಪಶು ಆಸ್ಪತ್ರೆ ಆವರಣದಲ್ಲಿ ನಡೆಯಿತು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರೇರಣೆದಾಯಿ ಕಾರ್ಯಕ್ರಮ ತಾಲೂಕು ಕೇಂದ್ರದಲ್ಲಿ ನಡೆದಿದ್ದು ಪ್ರತಿ ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಯಲಿ ಜಿಲ್ಲೆಗೆ ಶೇ.40 ರಷ್ಟು ಹಾಲು ದೊರೆಯುತ್ತದೆ ಆದ್ದರಿಂದ ಹೈನುಗಾರಿಕೆಯಲ್ಲಿ ಪ್ರಫುಲ್ಲ ಅವಕಾಶಗಳಿದ್ದು, ಬಜೆಟ್ ನಲ್ಲಿ ಹೈನುಗಾರಿಕೆಗೆ ಒತ್ತು ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಮಂಗಳೂರು ದ.ಕ. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಪ್ರಭಾಕರ ಆರಂಬೋಡಿ ಮಾತನಾಡಿ ಸರ್ಕಾರ ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಹೆಚ್ಚು ತರಬೇಕು. ಇಲಾಖೆಯಲ್ಲಿ ವೈದ್ಯರ ಕೊರತೆಯಿದೆ ಆದ್ದರಿಂದ ಹೈನುಗಾರಿಕ ರೈತ ಮಕ್ಕಳಿಗೆ ಪಶುವೈದ್ಯಕೀಯ ಸೇವೆಯ ಬಗ್ಗೆ ಮಾಹಿತಿ ಕಾರ್ಯಾಗಾರ ವಾಗಬೇಕು ಎಂದು ಆಶಿಸಿದರು.
ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಅರುಣ್ ಶೆಟ್ಟಿ ಮಾತನಾಡಿ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಅಧಿಕ ಹಸುಗಳಿವೆ. 2 ಲಕ್ಷ 80 ಸಾವಿರ ಲೀಟರ್ ಹಾಲು ಉತ್ಪಾದನೆ ದಿನದಲ್ಲಿ ಆಗುತ್ತಿದೆ. ಸರ್ಕಾರದ ಲೀಟರ್ ಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದ್ದು ರಾಜ್ಯದಲ್ಲಿ ಹಾಲು ಖರೀದಿಗೆ ಅಧಿಕ ಪ್ರೋತ್ಸಾಹ ಧನ ನೀಡುತ್ತಿರುವುದು ಕೆಎಂಎಫ್ ಆಗಾಗಿ ಅಧಿಕ ಹಾಲು ಉತ್ಪಾದನೆಗೆ ರೈತರು ಪ್ರಾಶಸ್ತ್ಯ ನೀಡಬೇಕು ಆದ್ದರಿಂದ ಯುವಕರು ಹೈನುಗಾರಿಕೆ ಮೇಲೆ ಆಸಕ್ತಿ ತೋರಬೇಕು ಎಂದು ತಿಳಿಸಿದರು.

ತಾ.ಪಂ. ಇಓ ಭವಾನಿ ಶಂಕರ್ ಮಾತನಾಡಿ, ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಬೇಕು.ಇದರಿಂದ ಅನೇಕ ರೀತಿಯಲ್ಲಿ ಕೃಷಿ ಚಟುವಟಿಕೆಗೆ ಅನುಕೂಲವಾಗಲಿದೆ ಹಾಗೂ ಸಾವಯ ಕೃಷಿಗೆ ಆದ್ಯತೆ ನೀಡಿದ್ದಂತೆ ಆಗಲಿದ್ದು ದನದ ಹಟ್ಟಿ, ಗೋಬಾರ್ ಗ್ಯಾಸ್ ನಿರ್ಮಾಣಕ್ಕೆ ಉದ್ಯೋಗ ಖಾತ್ರಿ ಯೋಜನೆ ಮೂಲಕ ಸೌಲಭ್ಯವಿದ್ದು , ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಜೀವನಕ್ಕೆ ಶಕ್ತಿಯಾಗಬೇಕು. ಜೀವನೋಪಾಯ ಇಲಾಖೆಯ ಮೂಲಕ ಪಶು ಸಖಿಯರು ತಳ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ಫಾರ್ಮ್ ನಲ್ಲಿ ಪಶು ವೈದ್ಯಕೀಯ ಮಹಾ ವಿದ್ಯಾಲಯ ಶೀಘ್ರವೇ ಪ್ರಾರಂಭವಾಗಲಿದೆ ಎಂದು ಹೇಳಿದರು.
ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ರೊನಾಲ್ಡ್ ಸಿಕ್ವೇರಾ ಸೋಣಂದೂರು, ದ್ವಿತೀಯ ವಾಲ್ಟರ್ ಸಿಕ್ವೇರಾ ಮೇಲಂತಬೆಟ್ಟು ಹಾಗೂ ತೃತೀಯ ಸುಮಾ ಪಿಲಿಗೂಡು ಬಹುಮಾನ ಪಡೆದುಕೊಂಡರು. ಹೈನುಗಾರಿಕೆಗೆ ಸಂಬಂಧಿತ ಸವಲತ್ತುಗಳ ವಿತರಣೆ ಮಾಡಲಾಯಿತು.
ಪ.ಪಂ.ಮುಖ್ಯಾಧಿಕಾರಿ ರಾಜೇಶ್ ಕೆ, ದ.ಕ.ಹಾಲು ಒಕ್ಕೂಟದ ಪುತ್ತೂರು ವಿಭಾಗದ ಉಪ ವ್ಯವಸ್ಥಾಪಕ ಡಾ.ಸತೀಶ್ ರಾವ್, ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜ್ಯೋತಿರಾಜ್, ಮದ್ದಡ್ಕ ಗೋಮಿತ್ರ ಡೈರಿ ಫಾರ್ಮ್ ಪ್ರಗತಿಪರ ಹೈನುಗಾರ ರೊನಾಲ್ಡ್ ಸಿಕ್ವೇರಾ, ವಿವಿಧ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರಾದ ಹುಣೆಸಕಟ್ಟೆ ರಮಾದೇವಿ, ಮದ್ದಡ್ಕ ಗೋಪಾಲ ಶೆಟ್ಟಿ, ಗೇರುಕಟ್ಟೆ ಜನಾರ್ದನ ಗೌಡ, ನಾಳ ಕೇಶವ ಪೂಜಾರಿ, ಓಡಿಲ್ನಾಳ ಗಿರೀಶ್ ಕುಲಾಲ್, ಸವಣಾಲು ದಿನೇಶ್ ಶೆಟ್ಟಿ, ಮುಂಡೂರಾ ದುರ್ಗಾನಗರ ಯಾದವ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ತಂಗಡಿ ಮುಖ್ಯ ಪಶು ವೈದ್ಯಾಧಿಕಾರಿ ಡಾ.ರವಿ ಕುಮಾರ್ ಮಾತನಾಡಿ, ಹಾಲು ಉತ್ಪಾದನೆ ಹಾಗೂ ರೈತರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮ ಸರ್ಕಾರ ನಡೆಸುತ್ತಿದೆ. ಜಿಲ್ಲೆಯಲ್ಲಿ ಕೆ.ಎಂ.ಎಫ್ ನಲ್ಲಿ 3.6ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದ್ದು ಬೆಳ್ತಂಗಡಿ ತಾಲೂಕಿನಲ್ಲಿ 1 ಲಕ್ಷಕ್ಕೂ ಅಧಿಕ ಹಾಲು ಉತ್ಪಾದನೆ ಆಗುತ್ತಿದೆ ಎಂದು ಪ್ರಾಸ್ತಾವಿಸಿ ಸ್ವಾಗತಿಸಿದರು. ಬೆಳ್ತಂಗಡಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಜಾನುವಾರು ಅಭಿವೃದ್ಧಿ ಅಧಿಕಾರಿ ನಾಗಾಶಯನ ರಾವ್ ವಂದಿಸಿ, ಸಿಬ್ಬಂದಿ ರಾಜಶ್ರೀ ಶಿರ್ಲಾಲ್ ನಿರೂಪಿಸಿದರು.











