ಬೆಳ್ತಂಗಡಿ: ಕೃಷಿಗಾಗಿ ಜೀವನ ಸವೆಸಿದ ರೈತರಿಗೆ ಗೌರವ ಸಲ್ಲಿಸಬೇಕು ಎಂದು ರೈತ ಉದ್ಯಮಿ, ಎಸ್ಕೆಎಫ್ ಎಲಿಕ್ಸರ್ ಸಂಸ್ಥೆಯ ಮುಖ್ಯಸ್ಥರಾದ ಡಾ.ರಾಮಕೃಷ್ಣ ಆಚಾರ್ ಅವರು ರೈತಪೀಠ ಪ್ರಶಸ್ತಿ ಸ್ಥಾಪಿಸಿದ್ದು, ಮೊದಲ ರೈತಪೀಠ ಪ್ರಶಸ್ತಿಯನ್ನು 200ಕ್ಕೂ ಹೆಚ್ಚು ಅಪರೂಪದ ಭತ್ತದ ತಳಿಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಿರುವ ಅಪರೂಪದ ತಳಿ ಸಂರಕ್ಷಕ ಬೆಳ್ತಂಗಡಿ ತಾಲೂಕಿನ ಬಿ.ಕೆ. ದೇವರಾಯ ಮಿತ್ತಬಾಗಿಲು ಅವರಿಗೆ ನೀಡಲಾಗುತ್ತಿದೆ.

ಫೆ.20ರಂದು ಕಾರ್ಕಳ ತಾಲೂಕು ಮುನಿಯಾಲಿನಲ್ಲಿರುವ ಗೋ-ಧಾಮ ತೋಟದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ ಪ್ರಶಸ್ತಿ ನೀಡುತ್ತಿರುವ ಡಾ.ರಾಮಕೃಷ್ಣ ಆಚಾರ್ ಅವರು ಬಿ.ಕೆ. ದೇವರಾಯ ಮಿತ್ತಬಾಗಿಲು ಮತ್ತು ಅವರ ಕುಟುಂಬವನ್ನು ಅಧಿಕೃತವಾಗಿ ಆಹ್ವಾನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ರಾಮಕೃಷ್ಣ ಅಚಾರ್ ಅವರು, ‘ಕೃಷಿಯ ಮಹತ್ವ ಇಂದಿನ ಪೀಳಿಗೆಗೆ ತಿಳಿಯದಾಗುತ್ತಿದೆ. ಸಂದರ್ಭ ಹೀಗಿರುವಾಗ ಬಿ.ಕೆ. ದೇವರಾಯರು ಕಳೆದ ಆರು ದಶಕಗಳಿಂದ ಭತ್ತದ ತಳಿಗಳನ್ನು ಉಳಿಸಿ ರಕ್ಷಿಸುತ್ತಾ ನಮ್ಮ ಮಾನವ ಕುಲಕ್ಕೆ, ಭೂಮಿಗೆ ಸಹಾಯ ಮಾಡಿದ್ದಾರೆ. ಅವರ ಈ ಕೊಡುಗೆ ಬೆಲೆಕಟ್ಟಲಾರದು. ಅಂಥಾ ಹಿರಿಯರಿಗೆ ಗೌರವ ಸಲ್ಲಿಸುವ ಅವಕಾಶ ದೊರೆತಿರುವುದು ನಮಗೆ ಹೆಮ್ಮೆ ತಂದಿದೆ’ ಎಂದು ಹೇಳಿದರು.
ಕಾಲದ ಹೊಡೆತಕ್ಕೆ ಮರೆಯಾಗಿ ಹೋಗಬಹುದಾಗಿದ್ದ ಅಪರೂಪದ ತಳಿಗಳನ್ನು ಮುಂದಿನ ಪೀಳಿಗೆಗೆ ಉಳಿಸಿರುವುದಲ್ಲದೇ, ಕೃಷಿಯಲ್ಲಿ ಇತರರಿಗೂ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿ.ಕೆ. ದೇವರಾಯರಿಗೆ ಮತ್ತು ಅವರ ಶ್ರೇಷ್ಠ ಬದುಕಿಗೆ ಗೌರವ ನೀಡುವ ಸಲುವಾಗಿ ಮೊದಲ ವರ್ಷದ ರೈತಪೀಠ ಪ್ರಶಸ್ತಿಯನ್ನು ಅವರಿಗೆ ಪ್ರದಾನ ಮಾಡುತ್ತಿದ್ದೇವೆ’ ಎಂದು ಡಾ. ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.











