ಕಾಶಿಪಟ್ಣ: ಚಿನ್ನದ ಬೆಲೆ ಗಗನಕ್ಕೇರಿದೆ. ಇದರೊಂದಿಗೆ ಸರ ಕಳ್ಳತನ ಪ್ರಕರಣವು ಚುರುಕುಗೊಂಡಿದೆ. ದಿನದಿಂದ ದಿನಕ್ಕೆ ಚಿನ್ನದ ದರ ಏರಿಕೆಯಾಗುತ್ತಿದ್ದಂತೆ ಕಾಶಿಪಟ್ಣದಲ್ಲಿ ಖದೀಮನೊಬ್ಬ ತನ್ನ ಕೈಚಳಕ ಪ್ರಯೋಗಿಸಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಎಗರಿಸಿ ಪರಾರಿಯಾದ ಬಗ್ಗೆ ವರದಿಯಾಗಿದೆ.

ಕಾಶಿಪಟ್ಣ ಗ್ರಾಮದ ಶಿವಗಿರಿ ಎಂಬಲ್ಲಿ ಮನೆಯೊಂದಕ್ಕೆ ಭೇಟಿ ನೀಡಿದ ಕಳ್ಳ ಚಿನ್ನವನ್ನು ತೊಳೆದುಕೊಡುವುದಾಗಿ ಹೇಳಿದಾಗ ಮಹಿಳೆಯೊಬ್ಬರು ಸರವನ್ನು ಆತನ ಕೈಗೆ ನೀಡುತ್ತಿದ್ದಂತೆ ಅದನ್ನು ಹಿಡಿದುಕೊಂಡು ಆತ ಪರಾರಿಯಾದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅದೇ ಪರಿಸರ ಮತ್ತೊಂದು ಮನೆಗೆ ಭೇಟಿ ನೀಡುತ್ತಿರುವ ಖದೀಮನ ದೃಷ್ಯ ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಈತ ಕಂಡುಬಂದಲ್ಲಿ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.











