ವೇಣೂರು: ಕಸ್ತೂರ ಬಾ ಮೆಡಿಕಲ್ ಕಾಲೇಜು, ಜ್ಯೋತಿ ಮಂಗಳೂರು (ಕೆಎಂಸಿ) ಇವರ ನುರಿತ ವೈದ್ಯರ ತಂಡದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಗುಂಡೂರಿಯ ಶ್ರೀ ಸತ್ಯನಾರಾಯಣ ಭಜನಾ ಮಂದಿರದಲ್ಲಿ ಫೆ. 15 ರಂದು ಉದ್ಘಾಟನೆಗೊಂಡಿತು.
ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘ , ಶ್ರೀ ಸತ್ಯನಾರಾಯಣ ಭಜನಾ ಮಂದಿರ ಗುಂಡೂರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು ಒಕ್ಕೂಟ ಗುಂಡೂರಿ, ಗಾ.ಪಂ. ಆರಂಬೋಡಿ, ಲಯನ್ಸ್ ಕ್ಲಬ್ ವೇಣೂರು, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಹಾಗೂ ಯುವಸೇವಾ ಸಂಗಮ ಸೇವಾ ಟ್ರಸ್ಟ್ (ರಿ.) ವೇಣೂರು ಇವರ ಜಂಟಿ ಆಶ್ರಯದಲ್ಲಿ ಈ ಆರೋಗ್ಯ ಶಿಬಿರ ನಡೆಯಿತು.
ವೇಣೂರಿನ ವೈದ್ಯ ಡಾ. ಶಾಂತಿಪ್ರಸಾದ್ ಅವರು ಶಿಬಿರವನ್ನು ಉದ್ಘಾಟಿಸಿ, ಇದೊಂದು ಸಮಾಜಮುಖಿ ಕಾರ್ಯವಾಗಿದ್ದು, ಗ್ರಾಮೀಣ ಭಾಗದ ಜನತೆಗೆ ವರದಾನವಾಗಿದೆ. ಯೋಗ, ಪ್ರಾಣಾಯಾಮಗಳ ಹವ್ಯಾಸದಿಂದ ರೋಗಗಳನ್ನು ನಿಯಂತ್ರಿಸಲು ಸಾಧ್ಯವಿದೆ ಎಂದರು.
ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ.) ಹಾಗೂ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಅಧ್ಯಕ್ಷರಾಗಿರುವ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು ಉದ್ಘಾಟನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದ ಜನತೆಗೆ ಅನುಕೂಲವಾಗಬೇಕೆಂಬ ನಿಟ್ಟಿನಲ್ಲಿ ಶಿಬಿರವನ್ನು ಆಯೋಜನೆ ಮಾಡಿದ್ದೇವೆ. ಹಾಲು ಉತ್ಪಾದಕರ ಸಹಕಾರಿ ಸಂಘದ ಗೋದಾಮು ಕಟ್ಟಡ ಉದ್ಘಾಟನೆ ವೇಳೆ ಹೈನುಗಾರಿಕೆಯ ಮಾಹಿತಿ ಶಿಬಿರವನ್ನು ಆಯೋಜಿಸುವ ಇರಾದೆ ಇದೆ ಎಂದರು.
ಸಮಾರಂಭದಲ್ಲಿ ಆರಂಬೋಡಿ ಗ್ರಾ.ಪಂ. ಅಧ್ಯಕ್ಷ ಪ್ರವೀಣ್ಚಂದ್ರ ಜೈನ್, ಯುವ ಸೇವಾ ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷ ಕೆ. ವಿಜಯ ಗೌಡ, ವೇಣೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸುಂಧೀರ್ ಭಂಡಾರಿ, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಇದರ ಅಧ್ಯಕ್ಷರಾದ ದುರ್ಗಾದಾಸ್ ಶೆಟ್ಟಿ, ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಕುಮಾರು ಹೆಗ್ಡೆ, ಒಕ್ಕೂಟದ ಅಧ್ಯಕ್ಷ ಸದಾನಂದ ಪೂಜಾರಿ, ಕೆಎಂಸಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅರ್ಬರ್ಟ್ ಡಿಸೋಜ, ಸೇವಾಪ್ರತಿನಿಧಿ ಹರೀಶ್ ಪೂಜಾರಿ ಬಾಡಾರು, ಗುಂಡೂರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಕಾರ್ಯದರ್ಶಿ ರಾಜು ಪೂಜಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಹರೀಶ್ ಕುಮಾರ್ ಪೊಕ್ಕಿ ಸ್ವಾಗತಿಸಿ, ಪಿಡಿಒ ಗಣೇಶ್ ಶೆಟ್ಟಿ ನಿರೂಪಿಸಿ, ವಂದಿಸಿದರು.
ಶಿಬಿರದಲ್ಲಿ ವಿಶೇಷವಾಗಿ ಕಣ್ಣು ಪರೀಕ್ಷೆ, ಕಿವಿ, ಮೂಗು, ಗಂಟಲು ಪರೀಕ್ಷೆ (ಇಎನ್ಟಿ), ಮೂಳೆ ಸಂಬಂಧಿತ ರೋಗ ತಪಾಸಣೆ ಹಾಗೂ ಸಾಮಾನ್ಯ ರೋಗಗಳ ಜೊತೆ ಬಿಪಿ, ಶುಗರ್ ತಪಾಸಣೆ ನಡೆಸಿದರು.











