ಉಜಿರೆ: ಉಜಿರೆಯ ಸಿದ್ಧವನದಲ್ಲಿರುವ ರುಡ್ ಸೆಟ್ ಸಂಸ್ಥೆಯಲ್ಲಿ ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP) ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ 10 ದಿನಗಳ ಕಾಲ ಸಮಗ್ರವಾಗಿ ನೀಡಲಾದ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭವು ಯಶಸ್ವಿಯಾಗಿ ನೆರವೇರಿತು.

ಗ್ರಾಮೀಣ ಯುವಕರು ಮತ್ತು ಮಹಿಳೆಯರಲ್ಲಿ ಸ್ವ ಉದ್ಯೋಗ ಮನೋಭಾವ ಬೆಳೆಸಿ, ಉದ್ಯಮ ಆರಂಭಿಸಲು ಅಗತ್ಯವಾದ ಜ್ಞಾನ, ಕೌಶಲ್ಯ ಹಾಗೂ ಆತ್ಮವಿಶ್ವಾಸವನ್ನು ರೂಪಿಸುವ ಉದ್ದೇಶದಿಂದ ಈ ತರಬೇತಿಯನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ “ಉದ್ಯಮ ಆರಂಭಿಸಲು ದೊಡ್ಡ ಬಂಡವಾಳಕ್ಕಿಂತ ದೊಡ್ಡ ಮನಸ್ಸು ಮತ್ತು ದೃಢ ಸಂಕಲ್ಪ ಮುಖ್ಯ. ಪರಿಶ್ರಮ, ಶಿಸ್ತಿನ ಜೀವನ ಹಾಗೂ ನವೀನ ಆಲೋಚನೆಗಳಿಂದ ಪ್ರತಿಯೊಬ್ಬರೂ ಯಶಸ್ವಿ ಉದ್ಯಮಿಗಳಾಗಬಹುದು” ಎಂದು ತಿಳಿಸಿದರು. ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಗ್ರಾಮೀಣ ಭಾಗದಲ್ಲೇ ಉದ್ಯೋಗ ಸೃಷ್ಟಿಸಿ ಸಮಾಜದ ಆರ್ಥಿಕ ಪ್ರಗತಿಗೆ ಕೈಜೋಡಿಸಬೇಕು ಎಂದು ಅವರು ಸಲಹೆ ನೀಡಿದರು. ನಂತರ ತರಬೇತಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಶಿಭಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಜಯಕುಮಾರ್ ಬಿ.ಪಿ, ರುಡ್ ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರು ವಹಿಸಿ ಮಾತನಾಡಿ, “ಉದ್ಯಮಶೀಲತೆ ಗ್ರಾಮೀಣ ಅಭಿವೃದ್ಧಿಗೆ ಬಲವಾದ ಅಸ್ತ್ರ. ತರಬೇತಿಯಲ್ಲಿ ಪಡೆದ ಜ್ಞಾನವನ್ನು ಕಾರ್ಯರೂಪಕ್ಕೆ ತಂದು ಆತ್ಮನಿರ್ಭರರಾಗಬೇಕು” ಎಂದು ಹೇಳಿದರು. ರುಡ್ ಸೆಟ್ ಸಂಸ್ಥೆ ನಿರುದ್ಯೋಗಿಗಳಿಗೆ ಉದ್ಯೋಗಮುಖಿ ತರಬೇತಿ ನೀಡಿ ಸಾವಿರಾರು ಕುಟುಂಬಗಳ ಬದುಕು ರೂಪಿಸಿರುವುದಾಗಿ ತಿಳಿಸಿದರು.
ಉಜಿರೆ ರುಡ್ ಸೆಟ್ ಸಂಸ್ಥೆಯ ನಿರ್ದೇಶಕ ಅಜೇಯ ಸ್ವಾಗತಿಸಿ, ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಧನ್ಯವಾದವಿತ್ತರು. ಕಾರ್ಯಕ್ರಮವನ್ನು ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಕೆ. ಕರುಣಾಕರ ಜೈನ್ ನಿರೂಪಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾಶ್ರೀ ಅವರು ಪ್ರಾರ್ಥನೆ ನೆರವೇರಿಸಿದರು. ಬಳಿಕ ಗ್ರಾಯತ್ರಿ, ಗೌತಮ್, ಶೋಭಾ ಹಾಗೂ ನಿತಿನ್ ಅವರು ತಮ್ಮ ತರಬೇತಿಯ ಅನುಭವಗಳನ್ನು ಹಂಚಿಕೊಂಡರು.
10 ದಿನಗಳ ತರಬೇತಿಯಲ್ಲಿ ವ್ಯವಹಾರ ಯೋಜನೆ ತಯಾರಿ, ಬ್ಯಾಂಕ್ ಸಾಲ ಪ್ರಕ್ರಿಯೆ, ಮಾರುಕಟ್ಟೆ ವ್ಯವಸ್ಥೆ, ಲಾಭ-ನಷ್ಟ ಲೆಕ್ಕಾಚಾರ, ಸಂವಹನ ಕೌಶಲ್ಯ, ನಾಯಕತ್ವ ಗುಣಗಳು ಹಾಗೂ ಡಿಜಿಟಲ್ ಉಪಯೋಗಗಳ ಕುರಿತು ಪ್ರಾಯೋಗಿಕ ಮತ್ತು ತಾತ್ವಿಕವಾಗಿ ತರಬೇತಿ ನೀಡಲಾಯಿತು.











