ಬೆಳ್ತಂಗಡಿ: ಫಾತಿಮಾ ಹೆಲ್ತ್ ಫೌಂಡೇಶನ್ ಮಂಗಳೂರು, ಇಂಡಿಯಾನಾ ಆಸ್ಪತ್ರೆ ಮಂಗಳೂರು ಇದರ ವತಿಯಿಂದ ಪ್ರಖ್ಯಾತ ಹೃದಯರೋಗ ತಜ್ಞರಾದ ಡಾ. ಯೂಸುಫ್ ಕುಂಬ್ಲೆ ಅವರ ಸಹಯೋಗದೊಂದಿಗೆ 68 ಕುಟುಂಬಗಳಿಗೆ 1.50 ಲಕ್ಷ ರೂ. ವೆಚ್ಚದಲ್ಲಿ ರಂಝಾನ್ ಆಹಾರದ ಕಿಟ್ ವಿತರಣೆ ಫೆ.17 ರಂದು ಮದ್ದಡ್ಕದಲ್ಲಿ ನಡೆಯಿತು.
ಮದ್ದಡ್ಕ ನೂರುಲ್ ಹುದಾ ಜುಮ್ಮಾ ಮಸ್ಜಿದ್ ಖತೀಬ್ ಹಾಫಿಲ್ ಮುಈನುದ್ದೀನ್ ಅಮ್ಜದಿ ಉದ್ಘಾಟನೆ ನೆರವೇರಿಸಿ, ಪವಿತ್ರ ಇಸ್ಲಾಂ ಧರ್ಮದ ಸಂದೇಶ ಹಾಗೂ ದಾನ ಧರ್ಮಕ್ಕೆ ಇಸ್ಲಾಂನಲ್ಲಿರುವ ಮಹತ್ವವನ್ನು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಜಮೀಯತುಲ್ ಫಲಾಹ್ ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ ಸಾಹೆಬ್, ಮದ್ದಡ್ಕ ತಾಜುಲ್ ಉಲಮಾ ರಿಲೀಫ್ ಟ್ರಸ್ಟ್ ಕೋಶಾಧಿಕಾರಿ ಉಸ್ಮಾನ್ ಹಾಜಿ ಆಲಂದಿಲ, ಕೆಎಮ್ಜೆ ಸರ್ಕಲ್ ಅಧ್ಯಕ್ಷ ಹಮೀದ್ ಮುಸ್ಲಿಯಾರ್ ಗುರುವಾಯನಕರೆ ಶುಭ ಕೋರಿದರು. ಕಾರ್ಯಕ್ರಮವನ್ನು ಕಳೆದ 5 ವರ್ಷಗಳಿಂದ ಪ್ರಧಾನವಾಗಿ ಸಂಯೋಜಿಸುತ್ತಿರುವ ಸಮಾಜ ಸೇವಕ, ಕೆಎಂಜೆ ರಾಜ್ಯ ಸಮಿತಿ ಸದಸ್ಯ ಅಬ್ಬೋನು ಮದ್ದಡ್ಕ ಸ್ವಾಗತಿಸಿ ಪ್ರಸ್ತಾವನೆಗೈದರು. ಜಮಾಅತ್ ಉಪಾಧ್ಯಕ್ಷ ಹೆಚ್ ಎಂ ಹಸನಬ್ಬ ಮದ್ದಡ್ಕ, ಶಂಶುಲ್ ಉಲಮಾ ಕ್ರಿಯಾ ಸಮಿತಿಯ ಅಧ್ಯಕ್ಷ ಶಾಕಿರ್, ಎಸ್ಕೆಎಸ್ಸೆಸ್ಸೆಫ್ ಮದ್ದಡ್ಕ ಶಾಖೆಯ ಅಧ್ಯಕ್ಷ ಇಲ್ಯಾಸ್ ಮದ್ದಡ್ಕ, ಹಿರಿಯರಾದ ಅಚ್ಚಬ್ಬ ಮದ್ದಡ್ಕ, ಹಾಜಿ ಶಮೀಮ್ ಯೂಸುಫ್, ಅಬ್ಬಾಸ್ ಮದ್ದಡ್ಕ ಮೊದಲಾದವರು ಉಪಸ್ಥಿತರಿದ್ದರು.
ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಅಬ್ಬೋನು ಮದ್ದಡ್ಕ ಅವರ ಕುಟುಂಬದ ಸೇವಾ ಸಂಸ್ಥೆ ‘ಎ.ಆರ್ ಫ್ಯಾಮಿಲಿ’ ವತಿಯಿಂದ ಅರ್ಹ ಕುಟುಂಬದ ಫಲಾನುಭವಿಗಳಿಗೆ ಶೈಕ್ಷಣಿಕ ಸಹಾಯಧನ ವಿತರಿಸಲಾಗುತ್ತಿದ್ದು, ಇದೇ ಸಮಾರಂಭದಲ್ಲಿ ಒಟ್ಟು 10 ಕುಟುಂಬಗಳಿಗೆ ನಿಧಿ ಹಸ್ತಾಂತರಿಸಲಾಯಿತು.











