ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿಗೆ ಜಪಾನ್ ದೇಶದ ಟೋಕಿಯೋದಲ್ಲಿರುವ ಹಿರಿಯ ಪ್ರೋ. ಮಾಸ ಕಟಾಒಕ ಮತ್ತು ಕಾಂಬೋಡಿಯಾ ದೇಶದ ಸಂಸ್ಕೃತಿ ಸಚಿವಾಲಯದ ಸಂಸ್ಕೃತಿ ಮತು ಫೈನ್ ಆರ್ಟ್ಸ್ ಡೆಪ್ಯುಟಿ ಮಿನಿಸ್ಟರ್ ಇಕೆ ಬುಂತ ಭೇಟಿ ನೀಡಿದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಸಹಕಾರದಲ್ಲಿ ಕಂಬೋಡಿಯ ಮತ್ತು ಜಪಾನ್ ದೇಶದ ವಿದ್ಯಾರ್ಥಿಗಳು ಆಗಮಿಸಿ 7 ದಿನಗಳ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಈ ವರ್ಷವೂ ಎಸ್.ಡಿ.ಎಂ ಸಂಸ್ಥೆಯೊಂದಿಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಬಹುದಾದ ಸಾಧ್ಯತೆಯನ್ನು ಅನ್ವೇಷಿಸಲು ತಂಡವು ಆಗಮಿಸಿದೆ.
ಭೇಟಿಯ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರ ಸಂಪರ್ಕ, ಸಂಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳ ಸಾಧ್ಯತೆಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಾಸ್ತಾವಿಕ ಚರ್ಚೆಗಳು ಇತ್ಯಾದಿ ವಿಷಯಗಳನ್ನು ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಬರಮಾಡಿಕೊಂಡರು. ಈ ವೇಳೆ ಉಪ ಪ್ರಾಂಶುಪಾಲರಾದ ನಂದ ಕುಮಾರಿ, ಆಡಳಿತ ವಿಭಾಗದ ರಿಜಿಸ್ಟ್ರಾರ್ ಡಾ. ಶ್ರೀಧರ ಭಟ್, ಪರೀಕ್ಷಾಂಗ ಕುಲಸಚಿವ ಗಣೇಶ್ ನಾಯಕ್, ಐಕ್ಯುಎಸ್ ಸಂಯೋಜಕ ಗಜಾನನ ಭಟ್ ಸೇರಿದಂತೆ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಪೂರ್ವಭಾವಿ ಭೇಟಿಯನ್ನು ಸಿಡ್ಲ್ಯುಸಿ ಅಂತಾರಾಷ್ಟ್ರೀಯ ಸಂಸ್ಥೆಯ ಸಲಹೆಗಾರ್ತಿ ಮನೋರಮಾ ಭಟ್ ಸಂಯೋಜಿಸಿದರು.
ಮಲ್ಟಿಮೀಡಿಯಾ ಸ್ಟುಡಿಯೋ ಮತ್ತು ಕಲಾಕೇಂದ್ರಕ್ಕೆ ಭೇಟಿ :
ಕಾಲೇಜಿನ ಕೇಂದ್ರ ಕಛೇರಿ ಭೇಟಿಯ ಬಳಿಕ ತಂಡವು ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಲ್ಟಿಮೀಡಿಯಾ ಸ್ಟುಡಿಯೋಗೆ ಭೇಟಿ ನೀಡಿದರು. ವಿದ್ಯಾರ್ಥಿಗಳ ಪ್ರಾಯೋಗಿಕ ಚಟುವಟಿಕೆಗಳಾದ ಚಿಗುರು, ನಮ್ಮೂರ ವಾರ್ತೆ ಇತ್ಯಾದಿಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಕಮ್ಯುನಿಟಿ ರೇಡಿಯೋ ನಿನಾದಕ್ಕೆ ಭೇಟಿ ನೀಡಿ ಒಂದು ಗಂಟೆಯ ಅಂತಾರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಮತ್ತು ಶಿಕ್ಷಣದ ಕುರಿತು ಸಂದರ್ಶನವನ್ನು ನೀಡಿದರು. ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗಡೆ ಸೇರಿದಂತೆ ಸುನಿಲ್ ಹೆಗ್ಡೆ, ವಿ.ಕೆ ಕಡಬ ಮತ್ತು ಸಂಹಿತ ಮೈಸೂರೆ ಉಪಸ್ಥಿತರಿದ್ದರು. ಬಳಿಕ ಕಾಲೇಜಿನ ಕಲಾ ಕೇಂದ್ರ ವಿಭಾಗಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ವೀಕ್ಷಿಸಿದರು. ವಿದ್ಯಾರ್ಥಿಗಳ ವಿವಿಧ ಪ್ರಕಾರಗಳ ನೃತ್ಯ, ನಾಟಕ , ಯಕ್ಷಗಾನ ಸಾಂಸ್ಕೃತಿಕ ಅಭ್ಯಾಸ ಮತ್ತು ತರಬೇತಿಯನ್ನು ಕಂಡು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಕಲಾ ಕೇಂದ್ರ ವಿಭಾಗದ ಸಂಯೋಜಕ ತೃಪ್ತ ಕುಮಾರ್ ಜೈನ್ ಸೇರಿದಂತೆ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.











