ಉಜಿರೆ : ವಿದ್ಯಾರ್ಥಿಗಳಿಗೆ ಪ್ರತಿಯೊಂದು ಅವಕಾಶಗಳು ಹೊಸ ಪಾಠ ಮತ್ತು ಅನುಭವವನ್ನು ನೀಡುತ್ತದೆ. ಆ ಅನುಭವದ ಮೂಲಕ ನಮ್ಮ ಭವಿಷ್ಯದ ದಾರಿಯನ್ನು ಕಂಡುಕೊಳ್ಳಬೇಕು ಹಾಗೂ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಕಾಲೇಜು ಜೀವನ ನೂರಾರು ಸಾಧನೆಗಳನ್ನು ಮಾಡಲು ದಾರಿ ತೋರುತ್ತದೆ. ಗುರು ಹಿರಿಯರ ಮಾರ್ಗದರ್ಶನ ಜೊತೆಗೆ ಸ್ವ ಪ್ರಯತ್ನದಿಂದ ಹೆಜ್ಜೆ ಹಾಕಬೇಕು ಎಂದು ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ್ ಕಮ್ಮಜೆ ಅಭಿಪ್ರಾಯಪಟ್ಟರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರದ ಸಭಾಭವನದಲ್ಲಿ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘ (ರಿ.) ಉಜಿರೆ, ಎಸ್.ಡಿ.ಎಂ ಕಾಲೇಜಿನ ಸಹಕಾರದಲ್ಲಿ ಆಯೋಜಿಸಿದ್ದ 20ನೇ “ಎಸ್.ಡಿ.ಎಂ ನೆನಪಿನಂಗಳ” ಸರಣಿ ಕಾರ್ಯಕ್ರಮದ ಕಾಲೇಜಿನ ಹಿರಿಯ ವಿದ್ಯಾರ್ಥಿಯೊಂದಿಗೆ ಸಂವಾದ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ ಮಾತನಾಡಿ, ಈ ನೆಲದ ಮಹಾನ್ ಸಾಧಕರ ಜೀವನ ಸದಾ ನಮಗೆಲ್ಲರಿಗೂ ಪ್ರೇರಣೆ. ಈ ಪ್ರೇರಣೆ ವಿದ್ಯಾರ್ಥಿಗಳಲ್ಲೂ ಜಾಗರೂಕವಾದಾಗ ನೆನಪಿನಂಗಳದಂತ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬೆಳ್ತಂಗಡಿಯ ಹಿರಿಯ ವಕೀಲ ಹಾಗೂ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿ ಸಂಘ(ರಿ). ಉಜಿರೆ ಇದರ ಕಾರ್ಯದರ್ಶಿ ಬಿ ಕೆ ಧನಂಜಯ ರಾವ್ ಮಾತನಾಡಿ, ಬದುಕಿನಲ್ಲಿ ಸಾಧನೆಯ ಪಥದಲ್ಲಿ ಸಾಗುತ್ತಾ ಹೋದ ಹಾಗೆ ನಾವು ಶ್ರೇಷ್ಠರೆನಿಸಿಕೊಳ್ಳುತ್ತೇವೆ. ಇದಕ್ಕೆಲ್ಲ ಪ್ರೇರಣೆಯಾದ ನಮ್ಮ ಶಾಲೆ ಹಾಗು ಕಾಲೇಜು ದಿನಗಳು ಸದಾ ನೆನಪಿನಲ್ಲಿ ಸ್ಮರಣೀಯ ವಾಗಿರುತ್ತದೆ ಎಂದರು.

ಇದೇ ಸಂದರ್ಭದಲ್ಲಿ ತನ್ನ ವೃತ್ತಿ ಬದುಕಿನಲ್ಲಿ ನಾನ ಹುದ್ದೆಗಳಲ್ಲಿ ಹಲವು ದಶಕಗಳಿಂದ ಮಾಡಿಕೊಂಡು ಬಂದಿರುವ ಎಸ್.ಡಿ.ಎಂ ಸಂಸ್ಥೆಯ ಹಿರಿಯ ವಿದ್ಯಾರ್ಥಿಯ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಅತಿಥಿಗಳಾದ ರಾಕೇಶ್ ಕಮ್ಮಜೆ ಯವರಿಗೆ ಪ್ರಾಂಶುಪಾಲ ಪ್ರೊ.ವಿಶ್ವನಾಥ ಪಿ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಸನ್ಮಾನಿಸಿದರು.
ಕಾರ್ಯಕ್ರಮದದಲ್ಲಿ ಪಿಜಿ ವಿಭಾಗದ ಡೀನ್ ಸೌಮ್ಯ ಕುಮಾರಿ ಸೇರಿದಂತೆ ಬೋಧಕ ಮತ್ತು ಬೋಧಕೇತರರ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಎಸ್.ಡಿ.ಎಂ ಕಾಲೇಜಿನ ರಾಜ್ಯಶಾಸ್ತ್ರ ಶಿವಕುಮಾರ್ ನಿರೂಪಿಸಿ, ಉಪನ್ಯಾಸಕ ಅಭಿಲಾಶ್ ವಂದಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗು ಹಿರಿಯ ವಿದ್ಯಾರ್ಥಿ ಸಂಘ ಸಮಿತಿಯ ಸಂಯೋಜಕ ಡಾ. ಎಂ.ಪಿ ಶ್ರೀನಾಥ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಉಪನ್ಯಾಸಕ ಡಾ. ದಿವಾಕರ್ ಕೊಕ್ಕಡ ಮತ್ತು ದೀಕ್ಷಿತ್ ರೈ ಸಹಕರಿಸಿದರು.
ವಿದ್ಯಾರ್ಥಿ ವೇತನ ವಿತರಣೆ :
ನೆನಪಿನಂಗಳ ಕಾರ್ಯಕ್ರಮದ ಆಶಯದಂತೆ ಕಾಲೇಜಿನ ಅರ್ಹ ವಿದ್ಯಾರ್ಥಿಗೆ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಯಿತು. ಈ ಬಾರಿ ಕಾಲೇಜಿನ ಪ್ರಥಮ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿನಿ ಕುಮಾರಿ ಸಿಂಧು ಇವರಿಗೆ ಅತಿಥಿಗಳಾದ ರಾಕೇಶ್ ಕಮ್ಮಜೆ ಚೆಕ್ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, ಡೀನ್ ಸೌಮ್ಯ ಕುಮಾರಿ, ಹಿರಿಯ ವಕೀಲ ಬಿ.ಕೆ ಧನಂಜಯ ರಾವ್, ಸಂಘದ ಸಂಚಾಲಕ ಡಾ. ಎಂ. ಪಿ ಶ್ರೀನಾಥ್, ಸದಸ್ಯ ದಿವಾಕರ್ ಕೊಕ್ಕಡ, ದೀಕ್ಷಿತ್ ರೈ ಮೊದಲಾದವರು ಉಪಸ್ಥಿತರಿದ್ದರು.
ದಿ. ಪ್ರೊ. ಎಸ್. ಪ್ರಭಾಕರ್ ರವರಿಗೆ ಕಾರ್ಯಕ್ರಮ ಅರ್ಪಣೆ :
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಸ್ಥಾಪಕ ಪ್ರಾಚಾರ್ಯರಾಗಿದ್ದ ದಿವಂಗತ ಪ್ರೊ. ಎಸ್. ಪ್ರಭಾಕರವರ ಭಾವಪೂರ್ಣ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿನಮನವನ್ನು ಸಲ್ಲಿಸಲಾಯಿತು. ಬಳಿಕ ಈ ಒಂದು ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ನಡೆಯುವ ಸಂಪೂರ್ಣ ನೆನಪಿನಂಗಳ ಕಾರ್ಯಕ್ರಮವನ್ನು ದಿವಂಗತ ಪ್ರೊ. ಎಸ್. ಪ್ರಭಾಕರವರವರಿಗೆ ಸಮರ್ಪಿಸಲಾಗುವುದು ಎಂದು ಘೋಷಿಸಲಾಯಿತು.
ವೃತ್ತಿ ನಿವೃತ್ತ ಡಾ. ಭಾಸ್ಕರ್ ಹೆಗಡೆಯವರಿಗೆ ಸನ್ಮಾನ :
ಉಜಿರೆಯ ಎಸ್.ಡಿ.ಎಂ ಸ್ವಾಯತ್ತ ಕಾಲೇಜಿನ ಪತ್ರಿಕೋದ್ಯಮ ವಿಭಾಗದಲ್ಲಿ ಮೂವತ್ತಮೂರು ವರ್ಷ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರೊ.ಭಾಸ್ಕರ ಹೆಗಡೆಯವರ ಸರಳ ವ್ಯಕ್ತಿತ್ವ, ಪ್ರಾಯೋಗಿಕ ಅನುಭವ, ದಕ್ಷ ನಾಯಕತ್ವ ಮತ್ತು ಮೌಲ್ಯಯುತವಾಗಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ನಿರಂತರವಾಗಿ ಶ್ರವಿಸಿದ ಸೇವೆಯನ್ನು ಗುರುತಿಸಿ ಎಸ್.ಡಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ, ಡೀನ್ ಸೌಮ್ಯ ಕುಮಾರಿ, ಹಿರಿಯ ವಕೀಲ ಬಿ.ಕೆ ಧನಂಜಯ ರಾವ್, ಸಂಘದ ಸಂಚಾಲಕ ಡಾ. ಎಂ. ಪಿ ಶ್ರೀನಾಥ್, ಸದಸ್ಯ ದಿವಾಕರ್ ಕೊಕ್ಕಡ, ದೀಕ್ಷಿತ್ ರೈ ಮೊದಲಾದವರು ಉಪಸ್ಥಿತರಿದ್ದರು.











