ಬೆಳ್ತಂಗಡಿ: 2024 – 25 ನೇ ಸಾಲಿನ ಫಸಲು ಭೀಮಾ ಯೋಜನೆಯಡಿಯಲ್ಲಿ ಬೆಳೆ ವಿಮೆಯನ್ನು ಕೃಷಿಕರಿಗೆ ನೀಡುವಂತೆ ಆಗ್ರಹಿಸಿ ಕೊಕ್ಕಡ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ನವೀನ್ ಕೆ. ರವರ ಮೂಲಕ ಬೆಂಗಳೂರು ಟಾಟಾ ಎಐಜಿ ಜನರಲ್ ವಿಮಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ಕೊಕ್ಕಡ ಗ್ರಾಮದ ಕೃಷಿಕರಿಂದ ಫೆ.23ರಂದು ಮನವಿ ನೀಡಲಾಯಿತು.
ಕೊಕ್ಕಡ ಗ್ರಾಮದ ಕೃಷಿಕರು ಕೊಕ್ಕಡ ಪ್ರಾಥಮಿಕ ಸೇವಾ ಸಹಕಾರಿ ಸಂಘದ ಮೂಲಕ ಟಾಟಾ ಐಜಿ ಎಂಬ ಸಂಸ್ಥೆಯಲ್ಲಿ ಬೆಳೆ ವಿಮೆ ಹಣವನ್ನು ಪಾವತಿಸಿದ್ದು 2025 ನೇ ವರ್ಷ ವಿಪರೀತ ಮಳೆಯಿಂದಾಗಿ ಅಪಾರ ಪ್ರಮಾಣದ ಕೃಷಿ ಹಾನಿಯಾಗಿದ್ದು, ಸೆಪ್ಟೆಂಬರ್/ ಅಕ್ಟೋಬರ್ ನಲ್ಲಿ ಬರಬೇಕಾಗಿದ್ದ ವಿಮಾ ಹಣ ಇನ್ನೂ ಕೂಡ ಬಂದಿರುವುದಿಲ್ಲ. ರೈತರು ತಮ್ಮ ಸಾಲ ಮರುಪಾವತಿಗಾಗಿ ಈ ಹಣವನ್ನು ನಂಬಿದ್ದು ಬೆಳೆ ವಿಮೆ ಬಾರದಿರುವುದರಿಂದ ಕೃಷಿಕರಿಗೆ ಆತ್ಮಹತ್ಯೆಯೇ ದಾರಿಯಂತಾಗಿದೆ. ತಾಲೂಕು ಹಂತದ ವಿಮಾ ಅಧಿಕಾರಿಗಳಲ್ಲಿ ದೂರವಾಣಿ ಮೂಲಕ ಸಂಪರ್ಕಿಸಿದಾಗ ಸರ್ಕಾರ ಬೆಳೆವಿಮೆ ಹಣವನ್ನು ತಡೆ ಹಿಡಿದಿದೆ ಎಂದು ಹೇಳುತ್ತಾರೆ. ಕೂಡಲೇ ಈ ಕುರಿತು ತಾವುಗಳು ಸೂಕ್ತ ಗಮನಹರಿಸಿ ಒಂದು ವಾರದೊಳಗೆ ಕೊಕ್ಕಡ ಗ್ರಾಮದ ಎಲ್ಲಾ ಕೃಷಿಕರ ಬೆಳೆವಿಮೆ ಯನ್ನು ನೀಡುವಂತೆ ಹಾಗೂ ಒಂದು ವೇಳೆ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ಮಾ.8 ರಂದು ಕೊಕ್ಕಡದಿಂದ ಹಾದು ಹೋಗುವ ಧರ್ಮಸ್ಥಳ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಸ್ವಯಂ ಪ್ರೇರಿತವಾಗಿ ರಸ್ತೆ ತಡೆ ನಡೆಸಲಿದ್ದೇವೆ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.











