ಬೆಳ್ತಂಗಡಿ: ತಾಲೂಕಿನಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದು, ಜನರು ಪರಿತಪಿಸುತ್ತಿರುವ ನಡುವೆ ತಾಲೂಕಿನ ನಾನಾ ಕಡೆಗಳಲ್ಲಿ ಫೆ.೨೫ರಂದು ಮಳೆಯಾಗುವ ಮೂಲಕ ಇಳೆಗೆ ತಂಪೆರೆದಿದೆ. ಬಹುತೇಕ ಕಡೆಗಳಲ್ಲಿ ಮಧ್ಯಾಹ್ನದ ವೇಳೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ ಸಿಡಿಲು,ಗಾಳಿಯೊಂದಿಗೆ ಸಾಧಾರಣದಿಂದ ಉತ್ತಮ ಮಳೆ ಸುರಿದಿದೆ. ಬೆಳಿಗ್ಗೆಯಿಂದ ಬಿಸಿಲಿನೊಂದಿಗೆ ಕೊಂಚ ಮೋಡ ಕವಿದ ವಾತಾವರಣವಿತ್ತು. ಹಠಾತ್ ಸುರಿದ ಈ ಮಳೆಯಿಂದಾಗಿ ವಾತಾವರಣದಲ್ಲಿ ಕೊಂಚ ತಂಪಿನ ಅನುಭವವಾಗಿದೆ.

ಬೆಳ್ತಂಗಡಿ ಪಟ್ಟಣ, ಚಾರ್ಮಾಡಿ ಘಾಟಿ ಸಹಿತ ಅಳದಂಗಡಿ, ತಣ್ಣೀರುಪಂತ, ಮುಂಡಾಜೆ,ಬ0ದಾರು, ಮೊಗ್ರು, ಉರುವಾಲು, ಕಣಿಯೂರು, ಮಚ್ಚಿನ, ಕಳಿಯ, ನ್ಯಾಯತರ್ಪು, ಸವಣಾಲು, ಹುಣ್ಸೆಕಟ್ಟೆ, ಮಡಂತ್ಯಾರು, ಕೊಕ್ಕಡ, ನಾವೂರು, ಬೆಳಾಲು, ತೆಕ್ಕಾರು, ಇಳಂತಿಲ, ಕಲ್ಮಂಜ ಸಹಿತ ನಾನಾ ಕಡೆಗಳಲ್ಲಿ ಮಳೆಯಾಗಿದೆ. ವಿಪರೀತ ಸೆಕೆಯಿಂದ ಕಂಗಾಲಾಗಿದ್ದ ಮಂದಿಗೆ ಈ ಬೇಸಿಗೆ ಮಳೆ ಕೊಂಚ ಸಮಾಧಾನ ತಂದಿದೆ.

ಫೆ.21ರಂದು ತಾಲೂಕಿನ ಕೆಲವು ಕಡೆಗಳಲ್ಲಿ ಮೊದಲ ಮಳೆಯಾಗಿತ್ತು. ಬಳಿಕ ಹೆಚ್ಚಿನ ಭಾಗದಲ್ಲಿ ಬುಧವಾರ ಎರಡನೇ ಬೇಸಿಗೆ ಮಳೆಯಾಗಿದೆ. ಪುಂಜಾಲಕಟ್ಟೆ-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ತಾಲೂಕಿನ ನಗರದ ಪ್ರದೇಶಗಳಲ್ಲಿ ಹೆದ್ದಾರಿ ಕಾಮಗಾರಿಯಿಂದ ಕೆಲವೊಂದು ಕಡೆಗಳಲ್ಲಿ ಅಂಗಡಿಗಳ ಮುಂಭಾಗದವರೆಗೆ ಮಳೆ ನೀರು ಬಂದಿತ್ತು. ಮಳೆ ಹೆಚ್ಚು ಸುರಿಯುತ್ತಿದ್ದರೆ ಮಳೆ ನೀರು ಅಂಗಡಿಯೊಳಗೆ ಹೋಗುತ್ತಿತ್ತು.ಇನ್ನು ಕೆಲವು ಕಡೆಗಳಲ್ಲಿ ಹನಿ ಮಳೆ ಸುರಿದಿದೆ. ಹಲವೆಡೆ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಕೆ ಮಳೆಗೆ ಒದ್ದೆಯಾಗಿದೆ. ತಾಲೂಕಿನ ಹಲವು ಕಡೆಗಳಲ್ಲಿ ಬ್ರಹ್ಮಕಲಶೋತ್ಸವ, ಜಾತ್ರೆ, ನೇಮೋತ್ಸವ ಶುಭ ಸಮಾರಂಭಗಳು ಜರಗಲಿದ್ದು ಇದರ ಪೂರ್ವ ತಯಾರಿಗೆ ಮಳೆ ಅಡ್ಡಿ ನೀಡಿದೆ. ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಪೂರೈಕೆ ಹಾಗೂ ಅಂತರ್ಜಾಲ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ.











