September 6, 2026
ಚಿತ್ರ ವರದಿವರದಿಶಿಕ್ಷಣ ಸಂಸ್ಥೆ

ಆಳ್ವಾಸ್‌ನಲ್ಲಿ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವ

ಮೂಡುಬಿದಿರೆ: ಕರಾವಳಿ ಹಾಗೂ ಮಲೆನಾಡಿನ ಸಮಸ್ತ ಜೈನ ಬಾಂಧವರ ಸಹಯೋಗದೊಂದಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಭಗವಾನ್ ಶ್ರೀ ಮಹಾವೀರ ಸ್ವಾಮಿ ಜನ್ಮ ಕಲ್ಯಾಣ ಮಹೋತ್ಸವವನ್ನು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಆದಿತ್ಯವಾರ ಹಮ್ಮಿಕೊಳ್ಳಲಾಯಿತು.

ಸಂಜೆ 4ಕ್ಕೆ ಆರಂಭಗೊಡ ಕಾರ್ಯಕ್ರಮದಲ್ಲಿ ಮೊದಲಿಗೆ ಆಳ್ವಾಸ್ ವಿದ್ಯಾರ್ಥಿಗಳಿಂದ ಜಿನಭಜನೆ ನಡೆಯಿತು.  ಕೊಂಬು ವಾದ್ಯ, ನಾದಸ್ವರ, ಪೂರ್ಣಕುಂಭದೊಂದಿಗೆ ಮಹಾವೀರ ಸ್ವಾಮಿ ಜಿನಬಿಂಬದ ಮೆರವಣಿಗೆ, ತೋರಣ ಮುಹೂರ್ತ, ದ್ರವ್ಯಾಭಿಷೇಕ, ಅಷ್ಟವಿಧಾರ್ಚನೆ ಪೂಜೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಯಿತು. ಹೊರನಾಡಿನ ಜಯಶ್ರೀ ಧರಣೇಂದ್ರ ಜೈನ್ ಮತ್ತು ಬಳಗದವರಿಂದ ಜಿನಭಕ್ತಿ ಗಾಯನ ನಡೆಯಿತು.

ಸುತ್ತಮುತ್ತಲಿನ ವಾತಾವರಣಕ್ಕೆ ಧಾರ್ಮಿಕ ವೈಭವದ ಸ್ಪರ್ಶ ನೀಡುವ ಉದ್ದೇಶದಿಂದ 24 ತೀರ್ಥಂಕರರ ವಿಗ್ರಹಗಳನ್ನುಇಡಲಾಗಿತ್ತು. ಸಭಾಂಗಣದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಲು ಬೃಹತ್ ಆಕಾರದ 20 ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು.

ಜಲಾಭಿಷೇಕದಿಂದ ಆರಂಭಗೊಂಡ ಪೂಜಾ ವಿಧಿಗಳು ಏಳನೀರು, ಇಕ್ಷುರಸ, ಕ್ಷೀರ, ಕಷಾಯ, ಕಾಶ್ಮೀರಿ ಕೇಸರಿ, ಕಲ್ಕಚೂರ್ಣ, ಅರಿಶಿನ, ಚತುಷ್ಕೋನ ಕಳಶ, ಚಂದನ ಹಾಗೂ ಅಷ್ಟಗಂಧದ ದ್ರವ್ಯಗಳಿಂದ ಭಕ್ತಿಭಾವದಿಂದ ನೆರವೇರಿಸಲ್ಪಟ್ಟವು. ಬಳಿಕ ಕನಕ ಪುಷ್ಪವೃಷ್ಠಿಯೊಂದಿಗೆ ವಿಶೇಷ ಅಭಿಷೇಕ ನಡೆಯಿತು. ಶಾಂತಿ ಮಂತ್ರಗಳ ಮಂಗಳಧ್ವನಿಯ ನಡುವೆ ಪೂರ್ಣಕುಂಭ ಮತ್ತು ಮಹಾಮಂಗಳಾರತಿ ನಡೆಯಿತು.  ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಸಭಾ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ರಾಣಿ ಅಬ್ಬಕ್ಕಳ ವಂಶಸ್ಥರಾದ ಮೂಡುಬಿದಿರೆಯ ಚೌಟರ ಅರಮನೆಯ ಅನಿತಾ ಸುರೇಂದ್ರ ಕುಮಾರ್‌ರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ, ಅನಿತಾ ಸುರೇಂದ್ರ ಕುಮಾರ್, ಮೋಹನ ಆಳ್ವರ ಸಾಧನೆಯಿಂದ ಮೂಡುಬಿದಿರೆ ರಾಷ್ಟ್ರೀಯ ಭೂಪಟದಲ್ಲಿ ಗುರುತಿಸುವಂತಾಗಿದೆ. ಕಳೆದ 14 ವರ್ಷಗಳಿಂದ ಅವರು ಈ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರು ನಮ್ಮ ಊರಿನ ಅಪ್ಪಟ ರತ್ನ. ಸತ್ಯ ಮತ್ತು ಅಹಿಂಸೆಯೇ ಮಾನವ ಸಮಾಜವನ್ನು ಉನ್ನತಿಗೇರಿಸುವ ಶ್ರೇಷ್ಠ ಮೌಲ್ಯಗಳು. ಈ ಮಾರ್ಗವನ್ನು ಅಚಲವಾಗಿ ಅನುಸರಿಸಿದ ಮಹಾತ್ಮ ಗಾಂಧೀಜಿ, ಹಿಂಸೆಯಿಲ್ಲದೆ ದೇಶಕ್ಕೆ ಸ್ವಾತಂತ್ರ‍್ಯ ತಂದುಕೊಟ್ಟು ಜಗತ್ತಿಗೆ ಆದರ್ಶವಾಗಿದ್ದಾರೆ ಎಂದರು.

ಆಳ್ವರು ಸಮಾಜದ ವಿವಿಧ ವರ್ಗಗಳನ್ನು ಒಂದೇ ವೇದಿಕೆಯಲ್ಲಿ ಸಮನ್ವಯದಿಂದ ಒಂದಾಗಿಸುವ ಅಪೂರ್ವ ಸಾಮರ್ಥ್ಯ ಹೊಂದಿದ್ದಾರೆ.  ಅವರ ಕಾರ್ಯವು ಏಕತೆ, ಸಹಬಾಳ್ವೆ ಮತ್ತು ಸೌಹಾರ್ದತೆಯ ನೈಜ ಕಾಯಕವಾಗಿದೆ.  ಜೈನಕಾಶಿಯಾಗಿ ಪ್ರಸಿದ್ಧಿಯಾಗಿದ್ದ ಮೂಡುಬಿದಿರೆಯನ್ನು ವಿದ್ಯಾಕಾಶಿಯಾಗಿ ರೂಪಿಸಿದವರು ಅವರು. ಇಂತಹ ಸಣ್ಣ ಊರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸಿರುವುದು ಊರಿನ ಭಾಗ್ಯ ಎಂದು ಅಭಿಪ್ರಾಯಪಟ್ಟರು.

ಶ್ರೇಷ್ಠತೆ ಎಂದರೆ ಹೊರಗಿನ ಮೆಚ್ಚುಗೆಯನ್ನು ಗಳಿಸುವುದಲ್ಲ, ಅದು ತಮ್ಮ ಕಾರ್ಯದ ಗುಣಮಟ್ಟ ಮತ್ತು ನಿಷ್ಠೆಯಿಂದ ಸ್ವತಃ ಹೊರಹೊಮ್ಮುವ ಮೌಲ್ಯ. ಪ್ರತಿಯೊಬ್ಬರಿಗೂ ಅವರ ಕೆಲಸವೇ ನಿಜವಾದ ಪರಿಚಯಪತ್ರವಾಗಿದ್ದು, ಅದಕ್ಕಾಗಿ ಪ್ರತ್ಯೇಕ ಗುರುತುಗಳ ಅಗತ್ಯವಿಲ್ಲ. ನಾವು ಮಾಡುವ ಕೆಲಸ ಸಣ್ಣದಾಗಲಿ ದೊಡ್ಡದಾಗಲಿ, ಅದು ನಮ್ಮ ಮನಸ್ಸಿಗೆ ತೃಪ್ತಿಯನ್ನು ನೀಡಬೇಕು ಮತ್ತು ಸಮಾಜಕ್ಕೂ ಮೌಲ್ಯವನ್ನುಂಟು ಮಾಡಬೇಕು. ಈ  ನೆಲೆಯಲ್ಲಿ ಮೋಹನ್ ಆಳ್ವ ಇಂದಿನ ಯುವಕರಿಗೆ ಪ್ರೇರಣೆಯ ಶ್ರೇಷ್ಠ ಮಾದರಿಯಾಗಿದ್ದಾರೆ ಎಂದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮಾತನಾಡಿ, ಜೈನ ಧರ್ಮದ ಮೂಲ ತತ್ವಗಳು ನಮ್ಮ ಆತ್ಮಸ್ಥೆöÊರ್ಯವನ್ನು ಬಲಪಡಿಸುತ್ತವೆ. ಸ್ವಾಭಿಮಾನದಿಂದ ಬದುಕುವುದು ಜೈನ ಧರ್ಮ ನನಗೆ ಕಲಿಸಿದ ಮಹತ್ವದ ಪಾಠ. ಈ ಮೌಲ್ಯಗಳು ವ್ಯಕ್ತಿತ್ವವನ್ನು ದೃಢಗೊಳಿಸಿ, ಸತ್ಯನಿಷ್ಠೆ ಹಾಗೂ ಆತ್ಮಗೌರವಯುತ ಜೀವನಕ್ಕೆ ದಾರಿ ತೋರಿಸುತ್ತದೆ ಎಂದರು. ಆಳ್ವಾಸ್ ಸಂಸ್ಥೆಯ ಒಳಂಗಣ ಕ್ರೀಡಾಂಗಣಕ್ಕೆ  ನನ್ನ ತಂದೆಯ ಹೆಸರು ಇಟ್ಟಿರುವುದು ಮೋಹನ್ ಆಳ್ವರಿಗೆ ನಮ್ಮ  ಕುಟುಂಬದ ಮೇಲಿರುವ ಗೌರವವನ್ನು ಸೂಚಿಸುತ್ತದೆ ಎಂದರು.  

ಕಾರ‍್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಪಟ್ನಶೆಟ್ಟಿ ಸುದೇಶ್ ಕುಮಾರ್,  ಚೌಟರ ಅರಮನೆಯ ಕುಲದೀಪ್ ಎಂ,  ಆದರ್ಶ್ ಜೈನ್, ಏರ್ಮಾಳ ಬೀಡು ಸೂರಜ್ ಕುಮಾರ್, ಕುತ್ಯಾರು ಅರಮನೆ ಜಿನೇಶ್ ಬಲ್ಲಾಳ್,  ರತ್ನಾಕರ್ ಜೈನ್, ಪಡುಬಿದ್ರಿ ಅರಮನೆಯ ಅರಸರು, ಕೂಳೂರಿನ ಆಶಿಕ್‌ಕುಮಾರ್,  ದುಗ್ಗಣ್ಣ ಸಾವಂತ್‌ರು ಪಡ್ಯಾರ್‌ಬೆಟ್ಟಿನ ಜೀವಂಧರ ಕುಮಾರ್, ಉದ್ಯಮಿ ಶ್ರೀಪತಿ ಭಟ್, ಟ್ರಸ್ಟಿ ವಿವೇಕ್ ಆಳ್ವ, ಅವಿಭಜಿತ ದ.ಕ ಹಾಗೂ ಉಡುಪಿ ಜಿಲ್ಲೆಯ ವಿವಿಧ ಅರಸು ಮನೆತನದ ಅರಸರು, ಬೀಡುಮನೆತನದ ಯಜಮಾನರು  ಇದ್ದರು.   ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಹಾಗೂ ಶಿಕ್ಷಕ ನವೀನಚಂದ್ರ ಅಂಬೂರಿ ಕಾರ್ಯಕ್ರಮ ನಿರೂಪಿಸಿದರು.

Related posts

ಪಡಂಗಡಿ: ಕಾಂಗ್ರೆಸ್ ಕಾರ್ಯಕರ್ತ ನಝೀರ್ ಬಿಜೆಪಿ ಸೇರ್ಪಡೆ

Suddi Udaya

ಬಳಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ಕಾಣಿಸಿಕೊಂಡ ಗಜರಾಜ

Suddi Udaya

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸಂಘ ಉಜಿರೆಯ ವಾರ್ಷಿಕ ಮಹಾಸಭೆ

Suddi Udaya

ರಕ್ತೇಶ್ವರಿ ಪದವು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಆರ್ ಟಿ ಇ ದಾಖಲಾತಿಗೆ ಅರ್ಜಿ ಆಹ್ವಾನ: ಮೇ.20 ಕೊನೆಯ ದಿನ

Suddi Udaya
error: Content is protected !!