ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ನಿವಾಸಿ ಪರಿಶಿಷ್ಟ ಜಾತಿಯ ಬಡ ಕುಟುಂಬದ ಸುಂದರ ಎಂಬವರ ನೂತನ ಮನೆಯ ಭೂಮಿ ಪೂಜೆ ಕಾರ್ಯಕ್ರಮವು ಏ.೨೧ ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೆರವೇರಿಸಿದರು.
ಇಸ್ರೇಲ್ನಲ್ಲಿ ಉದ್ಯೋಗದಲ್ಲಿರುವ ಅನಿವಾಸಿ ಭಾರತೀಯ ಕನ್ನಡಿಗರು ಹಾಗೂ ಮರೋಡಿ ಬಿಜೆಪಿ ಗ್ರಾಮ ಸಮಿತಿಯ ಜಂಟಿ ಸಹಕಾರ ಮತ್ತು ದಾನಿಗಳ ಉದಾರ ದೇಣಿಗೆಯಿಂದ ಈ ಸುಸಜ್ಜಿತ ಮನೆಯ ನಿರ್ಮಾಣದ ಭೂಮಿ ಪೂಜೆ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೂತನ ಮನೆಯ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿ, ರಾಷ್ಟೀಯ ಸ್ವಯಂ ಸೇವಕ ಸಂಘವು ನೂರರ ಸಂಭ್ರಮದಲ್ಲಿದ್ದು ಇದರ ನೆನಪಿಗಾಗಿ ಬಡ ಕುಟುಂಬಕ್ಕೆ ಸೂರು ನಿರ್ಮಾಣವಾಗುತ್ತಿರುವುದು ಸಂತೋಷದ ಸಂಗತಿ. ಈ ಮನೆಯ ಗೃಹಪ್ರವೇಶ ಆಗುವವರೆಗೂ ನಿಮ್ಮ ಜೊತೆ ಸದಾ ಇರುತ್ತೇನೆ ಎಂದು ಭರವಸೆ ನೀಡಿದರು.
ಬಿಜೆಪಿ ಮಂಗಳೂರು ಸಹಪ್ರಭಾರಿಗಳಾದ ಜಯಂತ್ ಕೋಟ್ಯಾನ್, ಇಸ್ರೇಲ್ನ ಅನಿವಾಸಿ ಕನ್ನಡಿಗರ ಪರವಾಗಿ ಸುಧೀರ್ ಕೋಟ್ಯಾನ್, ಮರೋಡಿ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ರತ್ನಾಕರ ಬುಣ್ಣನ್, ಮಾಜಿ ಅಧ್ಯಕ್ಷ ಬಾಲಕೃಷ್ಣ ಬಂಗೇರ, ಪದ್ಮಶ್ರೀ ಜೈನ್ ಪಂಚಾಯತ್ ನಿಕಟಪೂರ್ವ ಸದಸ್ಯ ಉಮೇಶ್ ಸಾಲ್ಯಾನ್ ಹಾಗೂ ಸುನಂದ, ಅಂಗಡಿಬೆಟ್ಟು ಗುತ್ತುವಿನ ಭರತ್ ಕುಮಾರ್ ಜೈನ್, ನಿವೃತ್ತ ಮುಖ್ಯೋಪಾಧ್ಯಾಯರಾದ ಟಿ.ಕೆ. ವೆಂಕಟರಮಣ ಹಾಗೂ ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷರು ಭಾಗವಹಿಸಿ ಸುಂದರ ಅವರ ಕುಟುಂಬಕ್ಕೆ ಶುಭಹಾರೈಸಿದರು.












