
ಬೆಳ್ತಂಗಡಿ: ತಾಲೂಕಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದು ಸರ್ವಿಸ್ ರಸ್ತೆಗಳಲ್ಲಿ ದಾರಿದೀಪಗಳಿಗಾಗಿ ಪಿಲ್ಲರ್ ಗಳನ್ನೂ ಅಳವಡಿಸಿದ್ದ ಕುರಿತು ಸುದ್ದಿ ಉದಯ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ ಬೆನ್ನಲ್ಲೇ ಇದೀಗ ಪಿಲ್ಲರ್ ಗಳ ತೆರವು ಕಾರ್ಯ ನಡೆಯುತ್ತಿದೆ.


ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ದಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ಉಜಿರೆಯಿಂದ ಚಾರ್ಮಾಡಿ ರಸ್ತೆಯ ಅನುಗ್ರಹ ಶಾಲೆಯ ತನಕ ಸರ್ವಿಸ್ ರಸ್ತೆ ಆಗಬೇಕು ಎಂಬ ವಿಚಾರಗಳಲ್ಲಿ ಹಲವು ಚರ್ಚೆಗಳು ನಡೆದು ಕೊನೆಗೂ ಉಜಿರೆ-ಚಾರ್ಮಾಡಿ ರಸ್ತೆಯ ಎಡ ಭಾಗದಲ್ಲಿ ಸರ್ವೀಸ್ ರಸ್ತೆಯ ನಿರ್ಮಾಣದ ದೃಷ್ಟಿಯಿಂದ ಅಭಿವೃದ್ಧಿ ಕಾಮಗಾರಿ ಪ್ರಾರಂಭಗೊಂಡಿದೆ.

ಈ ಸರ್ವಿಸ್ ರಸ್ತೆ ಸ್ಥಳೀಯ ನಾಗರಿಕರಿಗೆ ಹಾಗೂ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ, ಪ್ರಾರ್ಥನಾ ಮಂದಿರಕ್ಕೆ ಬರುವಂತವರಿಗೆ ಅನುಕೂಲವಾದರೂ ಸಹ ಈ ರಸ್ತೆಯಲ್ಲಿ ದಾರಿದೀಪಗಳ ನಿರ್ಮಾಣಕ್ಕೆ ಎಂದು ಅಳವಡಿಸಿದ ಪಿಲ್ಲರ್ಗಳು ಅಪಘಾತಕ್ಕೆ ಎಡೆಮಾಡಿಕೊಡಬಹುದು ಎಂಬ ಮುನ್ಸೂಚನೆಯನ್ನು ಸುದ್ದಿ ಉದಯ ವರದಿಯಲ್ಲಿ ಪ್ರಕಟಿಸಿತ್ತು. ಇದೀಗ ವರದಿಯ ಫಲಶ್ರುತಿಯಾಗಿ ಪಿಲ್ಲರ್ ಗಳ ತೆರವು ಕಾರ್ಯ ನಡೆಯುತ್ತಿದ್ದು, ಈ ರಸ್ತೆಯಲ್ಲಿ ಮುಂಬರುವ ದಿನಗಳಲ್ಲಿ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದಂತಾಗಿದೆ.













