
ಬೆಳ್ತಂಗಡಿ: ಅಪ್ರತಿಮ ದೇಶ ಭಕ್ತ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರ ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದ ಉಪ್ಪಿನಂಗಡಿಯ ಮಂಜ ಬೈದ್ಯರ “ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ, ದಕ್ಷಿಣ ಕನ್ನಡ ಜಿಲ್ಲೆ” ರಚಿಸಲಾಗಿದ್ದು, ಈ ಮೂಲಕ ಮಂಜ ಬೈದ್ಯರ ಸ್ವಾತಂತ್ರ್ಯ ಹೋರಾಟವನ್ನು ದೇಶದ ಮೂಲೆ ಮೂಲೆಗೂ ತಲುಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ದಕ್ಷಿಣ ಕನ್ನಡ ಜಿಲ್ಲೆ ಇದರ ಅಧ್ಯಕ್ಷ ಸಂಪತ್ ಬಿ. ಸುವರ್ಣರವರು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಬಾರ್ ಮಂಜ ಬೈದ್ಯ ಎಂದು ಕರೆಸಿಕೊಳ್ಳುತ್ತಿದ್ದ ಉಪ್ಪಿನಂಗಡಿಯ ಮಂಜಯ್ಯ ಬೈದ್ಯ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಕರ್ನಾಟಕದ ಕರಾವಳಿಯ ಅಗ್ರಗಣ್ಯ ಸ್ವಾತಂತ್ರ್ಯ ಹೋರಾಟಗಾರರು. ಕ್ರಾಂತಿಕಾರಿ ರೈತ ನಾಯಕರೂ, ಬ್ರಿಟಿಷ್ ಸರಕಾರದಲ್ಲಿ ಉದ್ಯೋಗಿಯೂ ಆಗಿದ್ದ ಮಂಜಯ್ಯ ಬೈದ್ಯರ ಕ್ರಾಂತಿಯ ಹೋರಾಟದ ವಿಚಾರಗಳನ್ನು ಜನರಿಗೆ ಇನ್ನಷ್ಟು ತಿಳಿಸುವ ಉದ್ದೇಶದಿಂದ ಅವರ ವಂಶಸ್ಥರನ್ನು ಒಳಗೊಂಡ ಕ್ರಾಂತಿಕಾರಿ ಮಂಜಯ್ಯ ಬೈದ್ಯ ಸಂಸ್ಮರಣಾ ಸಮಿತಿಯನ್ನು ರಚಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸಮಾಜದ ಎಲ್ಲಾ ಸಮುದಾಯದವರನ್ನು ಒಳಗೊಂಡು ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ತಾಲೂಕಿನಲ್ಲಿ ಸಮಿತಿ ರಚಿಸಲಾಗುವುದು. ದೇಶದ ಸ್ವಾತಂತ್ರ್ಯಕ್ಕಾಗಿ ಕೆಚ್ಚೆದೆಯಿಂದ ಹೋರಾಡಿ ಅಮರರಾದ ಮಂಜ ಬೈದ್ಯರ ಜೀವನ, ಹೋರಾಟ ಹಾಗೂ ವಿಚಾರಧಾರೆಗಳನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಸಮಿತಿಯ ನೇತೃತ್ವದಲ್ಲಿ ಪ್ರಚಾರ ಅಭಿಯಾನ ಕೈಗೊಳ್ಳಲಾಗಿದೆ.

ಮಂಜಯ್ಯ ಬೈದ್ಯ ಅವರ ಸ್ಮಾರಕವನ್ನು ಹಾಗೂ ಕಂಚಿನ ಪುತ್ಥಳಿಯನ್ನು ಉಪ್ಪಿನಂಗಡಿಯಲ್ಲಿ ನಿರ್ಮಾಣ ಮಾಡಬೇಕು. ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಬಳಿ ಅಥವಾ ನಗರದ ಪ್ರಮುಖ ಜಾಗದಲ್ಲಿ ಮಂಜ ಬೈದ್ಯರ ಪ್ರತಿಮೆ ಸ್ಥಾಪಿಸಬೇಕು. ಸರಕಾರಿ ಉದ್ಯೋಗಿಯಾಗಿದ್ದ ಮಂಜ ಬೈದ್ಯರ ನೆನಪಿಗೆ ಅವಿಭಜಿತ ಪುತ್ತೂರು ತಾಲೂಕಿನ(ಬೆಳ್ತಂಗಡಿ, ಬಂಟ್ವಾಳ, ಸುಳ್ಳ, ಪುತ್ತೂರು) ಯಾವುದಾದರೂ ಮಿನಿ ವಿಧಾನ ಸೌಧಕ್ಕೆ ಸರಕಾರಿ ಕಾಲೇಜಿಗೆ ಮಂಜ ಬೈದ್ಯರ ಹೆಸರನ್ನು ಇಡಬೇಕು. ಉಪ್ಪಿನಂಗಡಿ-ಗುರುವಾಯನಕೆರೆ ಮುಖ್ಯ ರಸ್ತೆಗೆ ಉಪ್ಪಿನಂಗಡಿ ಮಂಜ ಬೈದ್ಯರ ಹೆಸರು ಇಡಬೇಕು. ಬೆಳ್ತಂಗಡಿ ಉಪ್ಪಿನಂಗಡಿ ಮಧ್ಯ ಭಾಗ ಕಲ್ಲೇರಿಯಲ್ಲಿ ಮಂಜ ಬೈದ್ಯರ ಹೆಸರಿನಲ್ಲಿ ವೃತ್ತ ನಿರ್ಮಿಸಬೇಕು. ಶಾಲಾ ಪಠ್ಯ ಪುಸ್ತಕಗಳಲ್ಲಿ ಮಂಜ ಬೈದ್ಯರ ಸ್ವಾತಂತ್ರ್ಯ ಹೋರಾಟದ ವಿಚಾರ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಕರಾವಳಿಯ ಯೋಧರ ದೇಶ ಪ್ರೇಮದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಸರಕಾರಿ ಆಚರಣೆಗಳಲ್ಲಿ ಮಂಜ ಬೈದ್ಯರ ಹುಟ್ಟು ಹಬ್ಬವನ್ನೂ ವೀರ ಹುತಾತ್ಮ ದಿನವನ್ನು ಆಚರಿಸಬೇಕು. ಮಂಜ ಬೈದ್ಯರನ್ನು ಗಲ್ಲಿಗೇರಿಸಿದ ಮಂಗಳೂರಿನ ಬಿಕರ್ನಕಟ್ಟೆಯ ಬಳಿ ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಿಸಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸಮಿತಿಯ ನೇತೃತ್ವದಲ್ಲಿ ಅಭಿಯಾನ ಕೈಗೊಳ್ಳಲಾಗುವುದು ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಮನವಿಯನ್ನೂ ಸಲ್ಲಿಸಲಾಗುವುದು ಎಂದ ಅವರು, ಉಬಾರ್ ಮಂಜ ಬೈದ್ಯರ ಇತಿಹಾಸವನ್ನು ಮೆಲುಕು ಹಾಕಿದರು.
ಪತ್ರಿಕಾಗೋಷ್ಠಿಯಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ದ.ಕ ಜಿಲ್ಲಾ ಗೌರವ ಸಲಹೆಗಾರರಾದ ಹಿರಿಯ ಮುತ್ಸದ್ದಿ ಭುಜಬಲಿ ಧರ್ಮಸ್ಥಳ, ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ್ ಕಲ್ಲಾಪು, ಮಂಜಬೈದ್ಯ ವಂಶಸ್ಥರಾದ ವೆಂಕಪ್ಪ ಪೂಜಾರಿ ಕುಕ್ಕಾಜೆ, ಜನಾರ್ಧನ ಪೂಜಾರಿ ಕುಕ್ಕಾಜೆ, ಸಲಹೆಗಾರರಾದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ವಿಜಯ ಗೌಡ ವೇಣೂರು, ನಿತ್ಯಾನಂದ ನಾವರ, ರಾಘವ ಕಲ್ಮಂಜ, ರಾಮಚಂದ್ರ ಪೂಜಾರಿ ಉಪ್ಪಿನಂಗಡಿ, ಉದಯ ಬಂದಾರು, ವಸಂತ ಕುಕ್ಕಾಜೆ ಉಪಸ್ಥಿತರಿದ್ದರು.












