ಧರ್ಮಸ್ಥಳ: ಲಡ್ಡು ಮತ್ತು ಜ್ಯೂಸ್ ನೀಡಿ ವೃದ್ಧೆಯನ್ನು ಅಸ್ವಸ್ಥರನ್ನಾಗಿಸಿ ಬಳಿಕ ಚಿನ್ನಾಭರಣಗಳನ್ನು ಎಗರಿಸಿ ಅಪರಿಚಿತ ವ್ಯಕ್ತಿಯೊಬ್ಬ ಪರಾರಿಯಾಗಿರುವ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು ಜೆ.ಪಿ.ನಗರ ನಿವಾಸಿಯಾಗಿರುವ ಶ್ರೀಮತಿ ಪ್ರೇಮಾ.ಕೆ (70) ರವರು ಮೇ.23 ರಂದು ಬೆಂಗಳೂರಿನಿಂದ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿರುವ ತನ್ನ ಚಿಕ್ಕಮ್ಮನ ಮಗಳ ಮನೆಗೆ ಪೂಜಾ ಕಾರ್ಯಕ್ರಮಕ್ಕೆ ಬಂದವರು. ಬಳಿಕ ಮೇ.25 ರಂದು ಮಧ್ಯಾಹ್ನ ಬೆಳ್ತಂಗಡಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮುಗಿಸಿ ರಾತ್ರಿ ವಾಪಾಸು ಊರಿಗೆ ಹೋಗುವ ಸಲುವಾಗಿ ರಾತ್ರಿ 9:45 ಗಂಟೆಗೆ ದೇವಸ್ಥಾನದ ಮುಖ್ಯ ದ್ವಾರದ ಮುಂಭಾಗದಲ್ಲಿರುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿದ್ದ ಕಬ್ಬಿಣದ ಬೆಂಚ್ನಲ್ಲಿ ಕುಳಿತುಕೊಂಡಿದ್ದಾಗ ಅಲ್ಲಿಯೇ ಪಕ್ಕದಲ್ಲಿ ಕುಳಿತ್ತಿದ್ದ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಅವರಲ್ಲಿಗೆ ಬಂದು ಪರಿಚಯಿಸಿಕೊಂಡು ಮಾತನಾಡುತ್ತಾ “ನಾನು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪ್ರಸಾದ ತೆಗೆದುಕೊಂಡು ಬಂದು ಇಲ್ಲಿ ದರ್ಶನ ಮಾಡಿ ಊಟ ಮಾಡಿ ಬಂದಿರುತ್ತೇನೆ” ಎಂದು ಹೇಳಿ ಲಡ್ಡು ಪ್ರಸಾದ ಕೊಟ್ಟು ಬಳಿಕ ಜ್ಯೂಸ್ ಬಾಟಲಿಯಿಂದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದಾಗ ಪ್ರೇಮ ಅವರು ಸ್ವಲ್ಪ ಜ್ಯೂಸ್ ಕುಡಿದು ವಾಪಾಸು ಕೊಟ್ಟಿದ್ದು ನಂತರ ರಾತ್ರಿ 10:15 ಗಂಟೆ ಸುಮಾರಿಗೆ ಆತನು ಪ್ರೇಮ ಅವರನ್ನು ದೇವಸ್ಥಾನದ ಮಹಾ ದ್ವಾರದ ಬಳಿ ಇರುವ ಕಟ್ಟೆಯ ಬಳಿ ಕರೆದುಕೊಂಡು ಹೋಗಿ ಕೂರಿಸಿ ಬಸ್ನಲ್ಲಿ ಸೀಟು ಇದೆಯ ಎಂದು ನೋಡಿ ಬರುತ್ತೇನೆ ಎಂದು ಹೇಳಿ ಚಿನ್ನಾಭರಣದೊಂದಿಗೆ ಹೋಗಿದ್ದಾನೆ ಬಳಿಕ ಅಸ್ವಸ್ಥರಾಗಿದ್ದ ಪ್ರೇಮ ಅವರನ್ನು ಯಾರೋ ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರೇಮ ಅವರಿಗೆ ಯಾರೋ ಅಪರಿಚಿತ ವ್ಯಕ್ತಿಯು ಸುಬ್ರಹ್ಮಣ್ಯ ದೇವರ ಪ್ರಸಾದ ಎಂದು ಹೇಳಿ ಲಡ್ಡು ಹಾಗೂ ಜ್ಯೂಸ್ನಲ್ಲಿ ಏನೋ ಸೇರಿಸಿ ಪ್ರೇಮ ಅವರನ್ನು ಅಸ್ವಸ್ಥರನ್ನಾಗಿಸಿ ಅವರ ಅರಿವಿಗೆ ಬಾರದೇ ಕೊರಳಲ್ಲಿದ್ದ 80 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ, ಹಾಗೂ ಪರ್ಸಿನಲ್ಲಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ಮುತ್ತಿನ ಸರ, ಹಾಗೂ ಸುಮಾರು 20 ಗ್ರಾಂ ತೂಕದ ಚಿನ್ನದ ಕೈಬಳೆ ಮತ್ತು ನಗದು 7000 ರೂಪಾಯಿಯನ್ನು ಕಳವು ಮಾಡಿಕೊಂಡು ಹೋಗಿರುತ್ತಾನೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ ನಗದು ಸೇರಿ ರೂ 10 ಲಕ್ಷದ 7000 ಸಾವಿರ ರೂಪಾಯಿ ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಪ್ರೇಮ ಅವರು ನೀಡಿ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಮೇ.26 ರಂದು BNS -307 ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ. ಲಡ್ಡು ಮತ್ತು ಜ್ಯೂಸ್ ಕುಡಿದ ನೊಂದ ವೃದ್ಧೆ ಪ್ರೇಮ ಉಜಿರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮೇ.27 ರಂದು ವಾಪಸ್ ಬೆಂಗಳೂರು ಮನೆಗೆ ತೆರಳಿದ್ದಾರೆ.












