ಉಜಿರೆ: ವಸತಿ ನಿಲಯಗಳು ವಿದ್ಯಾರ್ಥಿಗಳ ಜೀವನ ರೂಪಿಸುವ ತಾಣ. ವಿವಿಧ ಹಿನ್ನಲೆಯಿಂದ ಬಂದಂತಹ ವಿದ್ಯಾರ್ಥಿಗಳು ಒಟ್ಟಿಗೆ ವಾಸಿಸುವುದರಿಂದ ಪರಸ್ಪರ ಗೌರವ ಹಾಗೂ ಹೊಂದಾಣಿಕೆಯ ಮನೋಭಾವವನ್ನು ವಸತಿ ನಿಲಯಗಳು ಕಲ್ಪಿಸುತ್ತವೆ.
ಹೊಸ ವಿಷಯ ತಿಳಿಯುವ ಆಸಕ್ತಿ ಹೊಂದಿದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಹಕಾರಿಯಾಗಿದೆ. ವಸತಿ ನಿಲಯಗಳ ಶಿಸ್ತು ಬದ್ಧ ಜೀವನ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಎಂದು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳ ಕಾರ್ಯ ನಿರ್ವಾಹಕ ಅಧಿಕಾರಿ ಪೂರಣ್ ವರ್ಮ ತಿಳಿಸಿದರು.
ಅವರು ಮೇ 28 ರಂದು ಉಜಿರೆಯ ಇಂದ್ರಪ್ರಸ್ಥ ಸಭಾಂಗಣದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿಗೆ ಪ್ರಥಮ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳ ಪೋಷಕರಿಗೆ ನಡೆದ ಪ್ರವೇಶಂ ನ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಮತ್ತು ಪೋಷಕರನ್ನು ಉದ್ದೇಶಿಸಿ ಮಾತನಾಡಿದರು.
ಉತ್ತಮ ಶಿಕ್ಷಣ ಗಳಿಸಿ ಪೋಷಕರ ಕನಸನ್ನು ನನಸು ಮಾಡುವ ಉದ್ದೇಶ ಇಟ್ಟುಕೊಂಡು ಯಶಸ್ಸು ಗಳಿಸಲು ಪ್ರಯತ್ನ ಪಡಬೇಕು. ಪೋಷಕರಿಗೆ ಹಾಗೂ ಶಿಕ್ಷಕರಿಗೆ ಗೌರವ ನೀಡಬೇಕು. ದೈರ್ಯ ಮತ್ತು ಒತ್ತಡವನ್ನು ಸಹಿಸಲು ಸಾಧ್ಯ ಇರುವ ವಿದ್ಯಾರ್ಥಿಗಳ ಭವಿಷ್ಯ ಚೆನ್ನಾಗಿ ಇರುತ್ತದೆ. ಅಂಕಗಳು ನಿಮ್ಮ ಕನಸಿಗೆ ಕೇವಲ ಮಾಪನ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಒತ್ತು ನೀಡಿದರೆ ಜೀವನ ಸಾರ್ಥಕವಾಗುತ್ತದೆ.
ನಿಲಯಗಳಲ್ಲಿ ನಿಗದಿ ಪಡಿಸಿದ ದಿನಚರಿಯನ್ನು ಪ್ರಯೋಜನಕಾರಿಯಾಗಿ ರೂಢಿಸಿಕೊಂಡಲ್ಲಿ ವಿದ್ಯಾರ್ಥಿಗಳು ಉನ್ನತ ಪ್ರಗತಿ ಸಾಧಿಸಲು ಸಾಧ್ಯ. ನಿಲಯದ ರೀತಿ ನೀತಿಗಳನ್ನು ಪಾಲಿಸುವುದು ಪ್ರತಿ ವಿದ್ಯಾರ್ಥಿಯ ಆದ್ಯ ಕರ್ತವ್ಯ. ವಸತಿನಿಲಯಗಳ ಶಿಸ್ತು ವಿದ್ಯಾರ್ಥಿಗಳನ್ನು ಸಾಮಾಜಿಕ ಜಾಲತಾಣಗಳಿಂದ ದೂರ ಇಡುವಂತೆ ಪ್ರೇರೇಪಿಸಿ, ಅಧ್ಯಯನದಲ್ಲಿ ತೊಡಗಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಬಳಿಕ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ವಸತಿ ನಿಲಯಗಳ ನಿಯಮಗಳ ಕುರಿತು ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ವಸತಿ ನಿಲಯಗಳ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಯುವರಾಜ ಪೂವಣಿ ಮಾಹಿತಿ ನೀಡಿದರು.
ಕನ್ನಡ ಭಾಷಾ ಪ್ರಾಧ್ಯಾಪಕ ಡಾ. ಮಹಾವೀರ ಜೈನ್ ಸ್ವಾಗತಿಸಿ, ಕಾಲೇಜಿನ ಉಪ ಪ್ರಾಂಶುಪಾಲ ಡಾ ರಾಜೇಶ್ ಬಿ ವಂದಿಸಿದರು. ಆಂಗ್ಲ ಭಾಷಾ ಪ್ರಾಧ್ಯಾಪಕಿ ನಿಹಾರಿಕಾ ಜಿ ಎನ್ ಕಾರ್ಯಕ್ರಮ ನಿರೂಪಿಸಿದರು.












