ಧರ್ಮಸ್ಥಳ : ಯಕ್ಷಗಾನ ಕಲಾವಿದ ಒಂದೇ ಮೇಳದಲ್ಲಿ 5೦ಕ್ಕೂ ಹೆಚ್ಚು ವರ್ಷ ವ್ಯವಸಾಯ ಮಾಡುತ್ತಿರುವುದು ಸುಲಭದ ಮಾತಲ್ಲ. ಮೇಳ ಹಾಗು ಯಜಮಾನರಿಗೆ ಬದ್ಧರಾಗಿ ನಿಷ್ಠೆಯಿಂದ ಯಕ್ಷ ಕಲಾ ಜೀವನ ನಡೆಸುತ್ತಿರುವ ವಸಂತ ಗೌಡ ಕಾಯರ್ತಡ್ಕ ಅವರ ಕಲಾಯಾನದ ಸ್ವರ್ಣ ಸಂಭ್ರಮ ಔಚಿತ್ಯಪೂರ್ಣ. ಯುವ ಕಲಾವಿದರು ಅವರಿಂದ ಕಲಿಯಬೇಕಾದ ಬಹಳಷ್ಟು ವಿಷಯಗಳಿವೆ. ಮುಂದಿನ ವ್ಯವಸಾಯಿ ಕಲಾವಿದರಿಗೆ ಅವರ ಆದರ್ಶ ಅನುಕರಣೀಯ,ಅನುಸರಣೀಯ. ತೆಂಕುತಿಟ್ಟು ಯಕ್ಷಗಾನಕ್ಕೆ ಎರಡು ಶತಮಾ ನಗಳ ಸುದೀರ್ಘ ಇತಿಹಾಸವಿದ್ದು ,ಧರ್ಮಸ್ಥಳ ಮೇಳ ಹೆಗ್ಗಡೆಯವರ ದೂರದರ್ಶಿತ್ವದಿಂದ ವ್ಯವಸ್ಥಿತ,ಅಚ್ಚುಕಟ್ಟುತನದಿಂದ ಪ್ರವರ್ಧಮಾನಕ್ಕೆ ಬರುತ್ತಿದೆ. ಯಾರ ಬಳಿಯೂ ನಿಷ್ಟುರವಿಲ್ಲದೆ ಎಲ್ಲರೊಂದಿಗೆ ಬೆರೆತು ಯಾವುದೇ ಪಾತ್ರ ನಿರ್ವಹಣೆ ಮಾಡುವುದರಲ್ಲಿ ವಸಂತ ಗೌಡ ರ ಮುಂದಿನ ಕಲಾ ಜೀವನ ಯಶಸ್ವಿಯಾಗಿ ಮುನ್ನಡೆಯಲಿ. ಯುವ ಜನಾಂಗ ಅನ್ಯಪ್ರಭಾವಗಳಿಗೊಳಗಾಗದೆ ಯಕ್ಷಗಾನ ಕಲೆಯಲ್ಲಿ ಆಸಕ್ತಿ ಬೆಳೆಸಿ,ಸಂಸ್ಕಾರ ಪಡೆದರೆ ಒಳ್ಳೆಯ ಪ್ರಜೆಯಾಗಿ ಬೆಳೆಯಲು ಸಾಧ್ಯವೆಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳವರು ನುಡಿದರು.

ಅವರು ಮೇ 28ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ವಸಂತ ಗೌಡ ಕಾಯರ್ತಡ್ಕ ಅವರ ಕಲಾಯಾನದ ಸ್ವರ್ಣ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಅವರು ಶ್ರೀ ಮಠದ ಪರವಾಗಿ ವಸಂತ ಗೌಡ ಕಾಯರ್ತಡ್ಕ ದಂಪತಿಯನ್ನು ಸನ್ಮಾನಿಸಿ, ಗೌರವಿಸಿದರು. ಧರ್ಮಸ್ಥಳ ಮೇಳದ ಯಜಮಾನ ಡಿ.ಹರ್ಷೇಂದ್ರ ಕುಮಾರ್ ಮಾತನಾಡಿ ಕಲಾವಿದರು ಮೇಳದ ಅಸ್ತಿ. ಕಲಾವಿದರಿಗೆ ಜವಾಬ್ದಾರಿ ಬೇಕು. ಯಕ್ಷಗಾನ ಮೇಳ ಬೆಳೆಸಲು ಕಲಾವಿದರ ಪರಿಶ್ರಮ ,ಕೊಡುಗೆ ಅಪಾರ. ವೇಷಗಾರಿಕೆಯಲ್ಲಿ ಸುಧಾರಿಸುವ ಪ್ರವೃತ್ತಿ ಕಡಿಮೆಯಾಗಿದೆ. ವಸಂತ ಗೌಡ ಯಾವ ವೇಷ ಮಾಡಲೂ ಸಿದ್ಧ. ಮೇಳದಲ್ಲಿ ಕಲಾವಿದರನ್ನು ಸುಧಾರಿಸುವುದು ಬಹಳ ಕಷ್ಟದ ಕೆಲಸ. ಯಕ್ಷಗಾನದ ಅಭಿಮಾನಿಯಾಗಿ ಬಹಳಷ್ಟು ಸವಾಲುಗಳನ್ನು ಸ್ವೀಕರಿಸಿ ಎದುರಿಸಿದ್ದೇನೆ. ವಸಂತ ಗೌಡ ಮೇಳದಲ್ಲಿ ಇನ್ನಷ್ಟು ವರ್ಷ ಕಲಾ ಸೇವೆ ಮಾಡಲು ದೇವರು ಶಕ್ತಿ ನೀಡಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ| ಟಿ.ಶ್ಯಾಮ ಭಟ್ ಮಾತನಾಡಿ ಧರ್ಮಸ್ಥಳ ಮೇಳ ಅತ್ಯಂತ ಬಲಿಷ್ಠ,ಶಿಸ್ತುಬದ್ಧ ತಂಡದ ಮೇಳ. ವಸಂತ ಗೌಡ ಮೇಳದ ಪುಂಡುವೇಷಕ್ಕೆ ಕೊರತೆಯಾಗದಂತೆ ನಿಗರ್ವಿಯಾಗಿ,ಉತ್ತಮ ಕಲಾವಿದನಾಗಿ ಯಾವುದೇ ಪಾತ್ರ ನಿರ್ವಹಿಸಬಲ್ಲವರು. ಯಕ್ಷಗಾನಕ್ಕೆ ಉಜ್ವಲ ಭವಿಷ್ಯವಿದೆ. ಕಲಾವಿದರು ಶಿಸ್ತು ರೂಢಿಸಿಕೊಂಡರೆ ಯಕ್ಷಗಾನ ಪ್ರದರ್ಶನ ಉತ್ತಮ ರೀತಿಯಲ್ಲಿ ಪ್ರದರ್ಶನಗೊಳ್ಳುತ್ತದೆ ಎಂದು ನುಡಿದರು. ಹೈದರಾಬಾದಿನ ಸುಪ್ರಭಾತ ಹೋಟೆಲ್ ಸಮೂಹದ ಕೃಷ್ಣಮೂರ್ತಿ ಮಂಜ ಮಾತನಾಡಿ ಸಂಪ್ರದಾಯ,ಹೆಜ್ಜೆಗಾರಿಕೆ ತಪ್ಪದೆ ಪ್ರದರ್ಶನ ನೀಡುತ್ತಿರುವ ಧರ್ಮಸ್ಥಳ ಮೇಳ ತೆಂಕಳಾಯಿ ಮೇಳವೆಂದು ಕುಂದಾಪುರ ಕಡೆ ಹೆಚ್ಚು ಸೇವೆ ಬಯಲಾಟ ನಡೆಯುತ್ತಿದೆ. ಧರ್ಮಸ್ಥಳ ಮತ್ತು ಮಾರಣಕಟ್ಟೆ ಎರಡು ಹುಯಿಲುಕೊಡು ವ ಕ್ಷೇತ್ರಗಳೆನಿಸಿವೆ . 5೦ ವರ್ಷ ಒಂದೇ ಮೇಳದಲ್ಲಿ ಕಲಾ ಸೇವೆ ಮಾಡುತ್ತಿರುವ ವಸಂತ ಗೌಡರ ಸಾಧನೆ ವಿಶೇಷವಾದುದು. ರಂಗಸ್ಥಳದಲ್ಲಿ ಯಕ್ಷಗಾನ ನೋಡುವ ಕಲಾ ಪ್ರೀತಿ ಬೇರೆಲ್ಲೂ ಸಿಗದು. ಯಕ್ಷಗಾನವನ್ನು ಲೈವ್ ಮತ್ತು ಮೊಬೈಲ್ ಗಳಲ್ಲಿ ನೀಡದೆ ರಂಗಸ್ಥಳದಲ್ಲೇ ನೋಡುವಂತಾ ಗಬೇಕು ಎಂದರು. ಸನ್ಮಾನ : ಇದೇ ಸಂದರ್ಭದಲ್ಲಿ ಕಲಾವಿದ ವಸಂತ ಗೌಡ ಮತ್ತು ಶ್ರೀಮತಿ ಗೀತಾ ದಂಪತಿಯನ್ನು ಧರ್ಮಸ್ಥಳ ಮೇಳ ಹಾಗೂ ಸರ್ವ ಕಲಾವಿದರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಮೇಳದ ಹಿರಿಯ ಭಾಗವತರಾಗಿದ್ದ ಪುತ್ತಿಗೆ ರಘುರಾಮ ಹೊಳ್ಳ,ನಿಡ್ಲೆ ಗೋವಿಂದ ಭಟ್ ಮತ್ತು ಉಷಾ ಶ್ರೀಧರ ಭಂಡಾರಿ ಅವರಿಗೆ ವಸಂತ ಗೌಡ ದಂಪತಿಗಳು ಕಲಾಗೌರವ ಸಮರ್ಪಿಸಿದರು. ವಸಂತ ಗೌಡ ಅವರ ಶಿಷ್ಯವೃಂದ ,ಸಾಧನ ಕಲಾ ತಂಡ,ಲಾಯಿಲ, ಸಂಗಮೇಶ್ವರ ಯಕ್ಷ ಕಲಾ ತಂಡ ಹಾಗೂ ಕನ್ಯಾಡಿಯ ಯಕ್ಷಭಾರತಿ ವತಿಯಿಂದ ವಸಂತ ಗೌಡ ದಂಪತಿಯನ್ನು ಗೌರವಿಸಲಾಯಿತು. ಕಲಾಯಾನದ ಸ್ವರ್ಣ ಸಂಭ್ರಮ ಆಚರಿಸುತ್ತಿರುವ ವಸಂತ ಗೌಡ ಕಾಯರ್ತಡ್ಕ ಸ್ವಾಗತಿಸಿ,ಪ್ರಸ್ತಾವಿಸಿ 12ನೇ ವರ್ಷಕ್ಕೆ ಧರ್ಮಸ್ಥಳ ಮೇಳಕ್ಕೆ ಸೇರ್ಪಡೆಗೊಂಡು 51 ವರ್ಷ ಪೂರೈಸುತ್ತಿರುವ ತನ್ನ ಮೇಳದ ಸ್ವಾನುಭವ,ಕಷ್ಟಗಳಿಗೆ ಸ್ಪಂದಿಸುವ ಯಜಮಾನರು ಹಾಗೂ ಹಿರಿಯ ಕಲಾವಿದರ ಒಡನಾಟ ,ಮೇಳದ ವ್ಯವಸ್ಥೆ,ಶಿಸ್ತು,ಅಚ್ಚುಕಟ್ಟುತನ ಮರೆಯಲಾರದ ಘಟನೆ ಎಂದು ಸ್ಮರಿಸಿಕೊಂಡು ಪೂಜ್ಯ ಹೆಗಡೆಯವರ ಪ್ರೀತಿ, ವಾತ್ಸಲ್ಯ ಸ್ವರ್ಗ ಸಿಕ್ಕಿದ ಅನುಭವ ನೀಡಿದೆ ಎಂದರು.
ಕಲಾವಿದ ಉಜಿರೆ ಅಶೋಕ ಭಟ್ ನಿರೂಪಿಸಿದ ಕಾರ್ಯಕ್ರಮದ ಲ್ಲಿ ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆ ವಂದಿಸಿದರು. ವಸಂತ ಗೌಡರ ಶಿಷ್ಯ ವರ್ಗದವರಿಂದ ಯಕ್ಷಗಾನ ಪ್ರದರ್ಶನ,ಮದ್ಯಾಹ್ನ ಬಾಲ ಕಲಾವಿದರಿಂದ ಶ್ರೀ ಕೃಷ್ಣ ಒಡ್ಡೋಲಗ ಹಾಗು ವಸಂತ ಗೌಡ ಕಾಯರ್ತಡ್ಕ ಅವರಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು.












