27.1 C
ಪುತ್ತೂರು, ಬೆಳ್ತಂಗಡಿ
May 30, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ: ಬರ್ಗುಳ ಕಿಂಡಿ ಅಣೆಕಟ್ಟು ಬಳಿ ಸಾವಿರಾರು ಮೀನುಗಳ ಮಾರಣ ಹೋಮ: ಮೈಲುತುತ್ತು ಬಳಸಿ ಮೀನು ಹಿಡಿಯಲು ಯತ್ನಿಸಿದ ಕಿಡಿಗೇಡಿಗಳು

ಶಿಶಿಲ: ಮತ್ಸ್ಯ ತೀರ್ಥ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಶಿಶಿಲೇಶ್ವರ ದೇವಸ್ಥಾನದ ಸಮೀಪದ ಬರ್ಗುಳ ಕಿಂಡಿ ಅಣೆಕಟ್ಟು ಬಳಿ ಕಿಡಿಗೇಡಿಗಳು ಕಾಪರ್ ಸಲ್ಫೇಟ್ (ಮೈಲುತುತ್ತು) ಬಳಸಿ ಮೀನು ಹಿಡಿಯಲು ಯತ್ನಿಸಿದ ಪರಿಣಾಮ ಸಾವಿರಾರು ಮೀನುಗಳು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.

ಕಳೆದ ರಾತ್ರಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯರು ನದಿ ತೀರದಲ್ಲಿ ಸಂಚರಿಸುವ ವೇಳೆ ಸತ್ತು ಬಿದ್ದ ಹಾಗೂ ತೇಲುತ್ತಿದ್ದ ಮೀನುಗಳನ್ನು ಗಮನಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ.

ಮೀನು ಹಿಡಿಯಲು ಬಳಸಿದ ವಿಷಕಾರಿ ರಾಸಾಯನಿಕದ ಪರಿಣಾಮವಾಗಿ ಸಣ್ಣಪುಟ್ಟ ಮೀನುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದು ಅವುಗಳನ್ನು ಅಲ್ಲಿಯೇ ಬಿಟ್ಟು ಹೋಗಿರುವುದು ಕಂಡುಬಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸ್ಥಳೀಯ ಪ್ರಮುಖರಾದ ಕರುಣಾಕರ ಶಿಶಿಲ, ಮನೋಜ್, ಉಮೇಶ್, ಲೋಕೇಶ್ ಅಡ್ಡಹಳ್ಳ ಹಾಗೂ ಪುರುಷೋತ್ತಮ್ ಅಡ್ಡಹಳ್ಳ ಅವರು ಪರಿಸ್ಥಿತಿಯನ್ನು ಪರಿಶೀಲಿಸಿದರು. ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುವುದು ಎಂದು ತಿಳಿಸಿದ್ದಾರೆ. ಶಿಶಿಲೇಶ್ವರ ದೇವಸ್ಥಾನದ ಸುತ್ತಮುತ್ತ ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಅವಕಾಶವಿಲ್ಲ.

ಈ ಹಿಂದೆ ಇದೇ ಪ್ರದೇಶದಲ್ಲಿ ನಡೆದಿದ್ದ ಮೀನುಗಳ ಮಾರಣಹೋಮದ ಘಟನೆ ಜನರ ಮನಸ್ಸಿನಲ್ಲಿ ಇನ್ನೂ ಹಸಿರಾಗಿರುವಾಗ ಮತ್ತೊಮ್ಮೆ ಇಂತಹ ದುರ್ಘಟನೆ ಸಂಭವಿಸಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಪರಿಸರ ಹಾಗೂ ಜಲಚರ ಜೀವಸಂಕುಲಕ್ಕೆ ಹಾನಿಯುಂಟುಮಾಡುವ ಇಂತಹ ಕೃತ್ಯಗಳನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ತಕ್ಷಣ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದುಷ್ಕರ್ಮಿಗಳ ಕೃತ್ಯಕ್ಕೆ ಖಂಡನೆ:
ಹಲವಾರು ಬಾರಿ ದೇವರ ಮೀನುಗಳಿಗೆ ಈ ರೀತಿಯ ನಿರಂತರ ದಾಳಿಗಳು ಮುಂದುವರಿಯುತ್ತಿರುವುದು ಆತಂಕದ ವಿಚಾರ. ಗ್ರಾಮದಲ್ಲಿ‌ ಭಕ್ತಾಧಿಗಳಲ್ಲಿ ಇನ್ನೂ ಜಾಗೃತಿ ಮೂಡಿಸುವ ಅಗತ್ಯವಿದೆ. ಮುಜರಾಯಿ ಇಲಾಖೆ, ಮೀನುಗಾರಿಕೆ ಇಲಾಖೆ ದೇವರ ಮೀನುಗಳ ಕುರಿತು ಬೇಜವಾಬ್ದಾರಿ ವರ್ತನೆ ಸಲ್ಲದು. ಈ ಕುರಿತು ಕರಪತ್ರ, ಸೂಚನಾ ಫಲಕ, ಭಕ್ತಾಧಿಗಳ ಸಭೆ ಮೊದಲಾದುವುದನ್ನು ನಿರಂತರ ಮಾಡುತ್ತಿರಬೇಕು. ಇಲ್ಲದಿದ್ದಲ್ಲಿ ಮುಂದೆ ಹಿಂದೂ ಸಂಘಟನೆ ತೀರ ಪ್ರತಿಭಟನೆ ಮಾಡುವುದು ಅನಿವಾರ್ಯವಾದೀತು ಎಂದು ಜಿಲ್ಲಾ ಧರ್ಮ ಪ್ರಸಾರ ಪ್ರಮುಖರಾದ ಶಿಶಿಲ ಬಿ. ಜಯರಾಮ ನೆಲ್ಲಿತ್ತಾಯರು ತಿಳಿಸಿದ್ದಾರೆ.

ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯ:
ಶಿಶಿಲದಲ್ಲಿ ಮೀನುಗಳ ಮಾರಣಹೋಮ ಆಗಿರುವುದು ತುಂಬಾನೇ ಬೇಸರ ತಂದಿದೆ. ಈ ಬಗ್ಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಜರಗಿಸಿ ಮುಂದೆ ಈ ರೀತಿಯ ಕೃತ್ಯಗಳು ನಡೆಯದಂತೆ ಕ್ರಮವಹಿಸಬೇಕು ಎಂದು ರಾಧಾಕೃಷ್ಣ ಗೌಡ ಗುತ್ತು ಶಿಶಿಲ ತಿಳಿಸಿದ್ದಾರೆ.

Related posts

ಪೆರೋಡಿತ್ತಾಯಕಟ್ಟೆ ಸ. ಉ. ಪ್ರಾ. ಶಾಲಾ ಮೂವರು ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ :

Suddi Udaya

ವಾಣಿ ಕಾಲೇಜು: ಎನ್‌ಎಸ್‌ಎಸ್ ನಲ್ಲಿ ತೇಜಸ್ ಅವರಿಗೆ ಬೆಸ್ಟ್ ಪರ್ಫಾರ್ಮರ್ ಅವಾರ್ಡ್

Suddi Udaya

ಸಿ.ವಿ.ಸಿ ಹಾಲ್ ವಸತಿ ವಿದ್ಯಾರ್ಥಿನಿ ನಿಲಯದ ಸಮಸ್ಯೆಗೆ ಸಿಕ್ಕಿತು ವಾರ್ಡನ್ ನಿಯೋಜನೆ ಬಳಿಕ ಪರಿಹಾರ

Suddi Udaya

ಫೆ.11 : ಬೆಳ್ತಂಗಡಿ ಧರ್ಮಪ್ರಾಂತ್ಯ ಸ್ಥಾಪನೆಯ ಬೆಳ್ಳಿ ಹಬ್ಬದ ಸಂಭ್ರಮ : ಶ್ರೇಷ್ಠ ಮಹಾಧರ್ಮಾಧ್ಯಕ್ಷರುಗಳು ಭಾಗಿ -ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು, ಡಾ.ಹೆಗ್ಗಡೆ ಆಗಮನ

Suddi Udaya

ಮುಂಡಾಜೆ: ಚಿತ್ಪಾವನ ಸಂಘಟನೆಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸುಶ್ಮಾ ಶಶಾಂಕ ಭಿಡೆ

Suddi Udaya
error: Content is protected !!