ಮಚ್ಚಿನ: ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಇದರ ವತಿಯಿಂದ ನಡೆಯುವ ಉಚಿತ ಯಕ್ಷ ಶಿಕ್ಷಣವು ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಚಾಲನೆ ನೀಡಲಾಯಿತು.
ಟ್ರಸ್ಟಿ ಭುಜಬಲಿ ಧರ್ಮಸ್ಥಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮುಂದಿನ ಪೀಳಿಗೆಗೂ ಯಕ್ಷಗಾನ ಕಲೆ ಉಳಿಯಬೇಕು, ಜೊತೆಗೆ ಮಕ್ಕಳಲ್ಲಿ ಯಕ್ಷಗಾನ ಕಲೆಯ ಬಗ್ಗೆ ಅರಿವು ಮೂಡಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಫೌಂಡೇಶನಿನ ವಿವಿಧ ಯೋಜನೆಗಳು ಮತ್ತು ಕಾರ್ಯಗಳ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮುಖ್ಯ ಅತಿಥಿ ಬೆಳ್ತಂಗಡಿ ಘಟಕದ ಕಾರ್ಯದರ್ಶಿ ಶಿತಿಕಂಠ ಭಟ್ ಉಜಿರೆ ಮಾತನಾಡಿ, ಯಕ್ಷಗಾನ ಯಾಕೆ ಕಲಿಯಬೇಕು ಅದರಿಂದ ಬದುಕಿಗೆ ಏನು ಪ್ರಯೋಜನಗಳಿವೆ ಎನ್ನುವ ವೇಳೆ ವಿಚಾರಗಳನ್ನು ತಿಳಿಸಿದರು.
ಯಕ್ಷಶಿಕ್ಷಕ ದೇವಿಪ್ರಸಾದ್ ಆಚಾರ್ಯ ಗುರುವಾಯನಕೆರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯ ಗುರು ಅಕ್ಷತಾ ಪ್ರಾಸ್ತಾವಿಸಿ, ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಮೌಲ್ಯ ನಿರೂಪಿಸಿದರು. ಅದ್ವಿತ್ ವಂದಿಸಿದರು. ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.













