ಬೆಳ್ತಂಗಡಿ: ಬೆಳ್ತಂಗಡಿ ಸಂಚಾರ ಠಾಣಾ ಪೊಲೀಸರಿಂದ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸವಣಾಲುವಿನಲ್ಲಿ ಠಾಣಾಧಿಕಾರಿ ಕಿಶೋರ್ ಅವರ ನೇತೃತ್ವದಲ್ಲಿ ವಾಹನ ತಪಾಸಣೆ ಹಾಗೂ ಜಾಗೃತಿ ಅಭಿಯಾನ ಜೂ.22 ರಂದು ಹಮ್ಮಿಕೊಳ್ಳಲಾಯಿತು.

ಸಂಚಾರ ಪೊಲೀಸರು, ಸಂಚರಿಸುತ್ತಿದ್ದ ವಾಹನಗಳನ್ನು ತಪಾಸಣೆ ನಡೆಸಿ, ವಾಹನ ಸವಾರರಿಗೆ ಸುರಕ್ಷಿತ ಚಾಲನೆಯ ಮಹತ್ವ ತಿಳಿಸಿದರು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವುದು ಹಾಗೂ ಕಾರು ಚಾಲಕರು ಸೀಟ್-ಬೆಲ್ಟ್ ಬಳಕೆ ಮಾಡುವುದರ ಅಗತ್ಯವನ್ನು ವಿವರಿಸಿದರು. ಅಪಘಾತ ಸಂಭವಿಸಿದ ಸಂದರ್ಭಗಳಲ್ಲಿ ಹೆಲ್ಮೆಟ್ ಮತ್ತು ಸೀಟ್-ಬೆಲ್ಟ್ ಜೀವ ರಕ್ಷಕವಾಗಿರುವುದರಿಂದ ಯಾವುದೇ ಕಾರಣಕ್ಕೂ ಇವುಗಳ ಬಳಕೆಯನ್ನು ನಿರ್ಲಕ್ಷಿಸಬಾರದು ಎಂದು ಸೂಚಿಸಲಾಯಿತು.
ಅತಿ ಪ್ರಕಾಶಮಾನ ಲೈಟ್ಗಳ ಎಚ್ಚರಿಕೆ:
ಕೆಲ ದ್ವಿಚಕ್ರ ವಾಹನಗಳಲ್ಲಿ ಕಾನೂನುಬಾಹಿರವಾಗಿ ಅಳವಡಿಸಲಾಗಿರುವ ಅತಿ ಪ್ರಕಾಶಮಾನವಾದ ಎಲ್ಇಡಿ (ಐಇಆ) ಲೈಟ್ಗಳ ಬಳಕೆಯಿಂದ ಎದುರುಗಡೆಯ ವಾಹನ ಚಾಲಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇರುವುದರಿಂದ ಅಂತಹ ಲೈಟ್ಗಳ ಬಳಕೆ ತಪ್ಪಿಸುವಂತೆ ಎಚ್ಚರಿಕೆ ನೀಡಲಾಯಿತು. ಅಂತಹ ಲೈಟ್ ಬಳಕೆ ಮಾಡಿದರಲ್ಲಿಯೇ ಲೈಟ್ಗಳ ತೆಗೆಸಿ, ಅಂತವರಿಗೆ ಸ್ಥಳದಲ್ಲೇ ದಂಡ ವಿಧಿಸಿ, ಎಚ್ಚರಿಸಿದರು. ಜೊತೆಗೆ ಕರ್ಕಶ ರೀತಿಯ ಹಾರನ್ ಬಳಸಿದವರ ವಿರುದ್ದವೂ ಕಾನೂನು ಕ್ರಮ ತೆಗೆದುಕೊಳ್ಳಲಾಯಿತು.
ಎಚ್ಚರಿಕೆಯಿಂದ ಚಲಾಯಿಸಿ:
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಜಾರುವಿಕೆ ಹೆಚ್ಚಾಗಿರುವುದರಿಂದ ವಾಹನ ಚಾಲಕರು ಹೆಚ್ಚಿನ ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ಮಳೆಯ ಸಮಯದಲ್ಲಿ ವೇಗ ನಿಯಂತ್ರಣ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ವಾಹನಗಳ ಬ್ರೇಕ್ ಹಾಗೂ ಲೈಟ್ಗಳ ಸ್ಥಿತಿಯನ್ನು ಪರಿಶೀಲಿಸುವುದು ಅಗತ್ಯ ಎಂದು ಸಲಹೆ ನೀಡಲಾಯಿತು. ಸಂಚಾರ ನಿಯಮಗಳ ಪಾಲನೆಯಿಂದ ಅಪಘಾತಗಳನ್ನು ತಡೆಯಲು ಸಾಧ್ಯವಾಗಿದ್ದು, ಪ್ರತಿಯೊಬ್ಬರೂ ಜವಾಬ್ದಾರಿಯುತ ವಾಹನ ಚಾಲಕರಾಗುವ ಮೂಲಕ ಸುರಕ್ಷಿತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದರು.












