ಬೆಳ್ತಂಗಡಿ: ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳ ಒತ್ತಡವಿಲ್ಲದೆ ಅನುಭವಾತ್ಮಕ, ಸೃಜನಾತ್ಮಕ, ಹಾಗೂ ಜೀವನ ಕೌಶಲ್ಯ ಆಧಾರಿತ ಕಲಿಕೆಯನ್ನು ಒದಗಿಸುವ ಸಲುವಾಗಿ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ‘ಸಂಭ್ರಮ ಶನಿವಾರ’ ಕಾರ್ಯಕ್ರಮವನ್ನು ಎಸ್ಡಿಎಂ ಅನುದಾನಿತ ಹಿ.ಪ್ರಾ ಶಾಲೆ ಉಜಿರೆಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವು ಮಕ್ಕಳ ಶಾಲೆಯ ಬ್ಯಾಗ್ ನ ಭಾರವನ್ನು ಕಡಿಮೆ ಮಾಡುವುದು, ಆಟ, ಕಲೆ, ಸಂಗೀತ, ನಾಟಕ, ವಿಜ್ಞಾನ ಇಂತಹ ವಿಷಯಗಳನ್ನು ಚಟುವಟಿಕೆಗಳ ಮೂಲಕ ಕಲಿಸುವುದು, ಮಕ್ಕಳಲ್ಲಿ ಜೀವನ ಕೌಶಲ್ಯ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸುವುದು ಹೀಗೆ ಮುಂತಾದ ಉದ್ದೇಶಗಳನ್ನು ಹೊಂದಿದೆ.
ಕಾರ್ಯಕ್ರಮದ ಪ್ರಯುಕ್ತ ವಿಶೇಷ ಚೇತನ ವುಳ್ಳ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ಗ್ರಾಮೀಣ ವಿಶೇಷ ಚೇತನ ಅಭ್ಯರ್ಥಿಗಳ ಪುನರ್ವಸತಿ ಕಾರ್ಯಕರ್ತರಾಗಿರುವ ವಿಪುಲ ಕುಮಾರ್ ಮಾತನಾಡಿ “ವಿಶೇಷ ಚೇತನ ಮಕ್ಕಳಿಗೆ ಹೆಚ್ಚಿನ ಅವಕಾಶದ ಅಗತ್ಯತೆ ಇದೆ, ಎಲ್ಲ ಕ್ಷೇತ್ರಗಳಲ್ಲೂ ವಿಶೇಷ ಚೇತನರು ಗುರುತಿಸಿಕೊಂಡಿದ್ದಾರೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಬಾಲಕೃಷ್ಣ ವಹಿಸಿದ್ದರು. ವಿಶೇಷ ಚೇತನರಿಗೆ ಸಂಬಂಧಿಸಿದಂತೆ ವಿವಿಧ ಬಿತ್ತಿ ಪತ್ರ ಅನಾವರಣಗೊಳಿಸಲಾಯಿತು. ಸಹ ಶಿಕ್ಷಕಿ ಗೀತಾ ಸ್ವಾಗತಿಸಿದರು, ಶಾಲಾ ಸಹ ಶಿಕ್ಷಕಿ ರೇವತಿ ವಂದನೆಗೈದರು, ಶಾಲಾ ಸಹ ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು.












