ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಕೋರ್ಟ್ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಆರೋಪದಡಿ ಧರ್ಮಸ್ಥಳ ಪಾಂಗಾಳ ನಿವಾಸಿ ವಿಠಲ ಗೌಡ ವಿರುದ್ಧ ಬಂಧನ ಆದೇಶ ಜಾರಿಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡದಂತೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಆದರೆ ನ್ಯಾಯಾಲಯವು ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯ ಆದೇಶಕ್ಕೆ ವಿಠಲ ಗೌಡ ಅಗೌರವ ತೋರಿಸಿದ್ದರು. ತಡೆಯಾಜ್ಞೆಯನ್ನು ಅವರು ಉಲ್ಲಂಘಿಸಿದ ಕಾರಣ, ನ್ಯಾಯಾಂಗ ನಿಂದನೆ ಪ್ರಕರಣದಡಿ ನ್ಯಾಯಾಲಯವು ಇದೀಗ ಬಂಧನಕ್ಕೆ ಆದೇಶಿಸಿದೆ. ಜೂನ್ 8ರಂದು ಬಂಧನ ಆದೇಶ ಜಾರಿಯಾಗಿದ್ದು, ಜೂನ್ 30ರೊಳಗೆ ಬಂಧಿಸಬೇಕು ಎಂದು ಕೋರ್ಟ್ ಸೂಚಿಸಿತ್ತು.

ಅಧಿಕಾರಿಗಳು ಬೆಳ್ತಂಗಡಿಯ ವಿಠಲ್ ಗೌಡ ನಿವಾಸಕ್ಕೆ ತೆರಳಿದ್ದು, ಈ ವೇಳೆ ಅವರು ಪತ್ತೆಯಾಗಿಲ್ಲ. ವಿಠಲ್ ಗೌಡ ಇತ್ತೀಚೆಗೆ ಮನೆಗೆ ಬಂದಿಲ್ಲ ಎಂದು ಹೇಳಿದ್ದಾರೆಂದು ವರದಿಯಾಗಿದೆ.
ವಿಠಲ್ ಗೌಡ ಕಳೆದ ನಾಲ್ಕು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ವಿಠಲ ಗೌಡರನ್ನು ಬಂಧಿಸಲು ಇಂದು (ಜೂ.27) ಬೆಂಗಳೂರಿನಿಂದ ಕೋರ್ಟ್ ಅಧಿಕಾರಿಗಳು ಬಂದಿದ್ದು, ಸ್ಥಳೀಯ ಪೊಲೀಸರ ಸಹಕಾರದಿಂದ ಹುಡುಕಾಟ ನಡೆಸುತ್ತಿದ್ದಾರೆ. ಕೋರ್ಟ್ ಅಧಿಕಾರಿಗಳು ಆತನ ಮನೆ, ಕುಸುಮಾವತಿಯವರ ಮನೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.












