ಬೆಳ್ತಂಗಡಿ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತಾಲೂಕಿನ ಕೆಲವು ಗ್ರಾಮಗಳ ಒಳರಸ್ತೆಗಳು ಕೆಸರುಮಯವಾಗಿ ಮಾರ್ಪಟ್ಟಿದ್ದು, ಹಲವು ಕಡೆಗಳಲ್ಲಿ ಸಾಲು ಸಾಲು ಗುಂಡಿಗಳು ನಿರ್ಮಾಣಗೊಂಡಿವೆ. ಇದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಸಂಚಾರ ನಡೆಸಲು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಬಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಪಿನಡ್ಕ–ಪೆರ್ಮುಡ ಸಂಪರ್ಕಿಸುವ ನಾಲ್ಕೂರಿನ ಹುಂಬೆಜಲ್ಕೆ ಭಾಗದ ರಸ್ತೆಯು ಮಳೆಯ ಪರಿಣಾಮದಿಂದ ತೀವ್ರ ಹದಗೆಟ್ಟಿದ್ದು, ಈ ಭಾಗದ ಜನರು ಕೆಸರು ತುಂಬಿದ ರಸ್ತೆಯಲ್ಲಿ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಈ ಭಾಗದಲ್ಲಿ ನೂರಾರು ಕುಟುಂಬಗಳು ವಾಸವಾಗಿದ್ದು, ಶಾಲಾ–ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಹೈನುಗಾರರು, ದಿನಗೂಲಿ ಕಾರ್ಮಿಕರು,ಕೃಷಿಕರು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಪಟ್ಟಣ ಪ್ರದೇಶಗಳಿಗೆ ಸಂಚರಿಸಲು ಈ ರಸ್ತೆಯನ್ನೇ ಅವಲಂಬಿಸಿದ್ದಾರೆ. ಆದರೆ ರಸ್ತೆ ಸಂಪೂರ್ಣ ಕೆಸರುಮಯವಾಗಿರುವುದರಿಂದ ದೈನಂದಿನ ಸಂಚಾರ ದುಸ್ತರವಾಗಿದೆ.
ಪಾದಚಾರಿಗಳು ಕೆಸರನ್ನು ತಪ್ಪಿಸಲು ರಸ್ತೆ ಬದಿಯಲ್ಲಿ ಸಾಗಲು ಯತ್ನಿಸಿದರೆ, ಗಿಡಗಂಟಿಗಳು ಅಡ್ಡಿಯಾಗುತ್ತಿವೆ. ರಸ್ತೆ ಮಧ್ಯದಲ್ಲಿ ಸಾಗಲು ಪ್ರಯತ್ನಿಸಿದರೆ ಗುಂಡಿಗಳನ್ನು ತಪ್ಪಿಸಿಕೊಂಡು ಸಾಗುವುದೇ ದೊಡ್ಡ ಸವಾಲಾಗಿದೆ. ಭಾರೀ ವಾಹನಗಳು ಈ ರಸ್ತೆಯಲ್ಲಿ ಸಂಚರಿಸಿದರೆ ಕೆಸರಿನಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿಯೂ ಉಂಟಾಗುತ್ತಿದೆ.

ಹೀಗಾಗಿ ರಸ್ತೆ ಬಳಕೆ ಮಾಡುವ ಪ್ರತಿಯೊಬ್ಬರೂ ಒಂದಲ್ಲೊಂದು ರೀತಿಯ ತೊಂದರೆಗಳನ್ನು ಎದುರಿಸುತ್ತಿದ್ದು, ಸಂಬಂಧಪಟ್ಟ ಇಲಾಖೆ ಹಾಗೂ ಸ್ಥಳೀಯ ಆಡಳಿತ ತಕ್ಷಣವೇ ಗಮನಹರಿಸಿ ರಸ್ತೆ ದುರಸ್ತಿ ಹಾಗೂ ನಿರ್ವಹಣಾ ಕಾಮಗಾರಿ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
“ಈ ಭಾಗದ ನೂರಾರು ಕುಟುಂಬಗಳಿಗೆ ಹುಂಬೆಜಲ್ಕೆ ರಸ್ತೆ ಪ್ರಮುಖ ಸಂಪರ್ಕ ರಸ್ತೆಯಾಗಿದೆ.ಪೆರ್ಮುಡಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಆದರೆ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚರಿಸುವುದು ಅತ್ಯಂತ ಕಷ್ಟಕರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಆಡಳಿತ ಕೂಡಲೇ ಗಮನಹರಿಸಿ ಹದಗೆಟ್ಟಿರುವ ರಸ್ತೆಯನ್ನು ದುರಸ್ತಿ ಮಾಡಬೇಕು.” -ಸ್ಥಳೀಯರು













