ಬಣಕಲ್ : ವೈದ್ಯರ ದಿನಾಚರಣೆಯ ಅಂಗವಾಗಿ ಸಾಯಿ ಕೃಷ್ಣ ಹೆಲ್ತ್ ಸೆಂಟರ್, ಬಣಕಲ್ ವತಿಯಿಂದ ಹಿರಿಯ ವೈದ್ಯರಾದ ಡಾ. ಅನಂತ ಕೃಷ್ಣ ಉಪಾಧ್ಯಾಯ ಪಾದೂರು ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
1964ರಲ್ಲಿ ಬಣಕಲ್ನ ಕೃಷ್ಣ ಕ್ಲಿನಿಕ್ನಲ್ಲಿ ವೈದ್ಯಕೀಯ ಸೇವೆಯನ್ನು ಆರಂಭಿಸಿದ ಡಾ.ಅನಂತಕೃಷ್ಣ ಪಾದೂರು ಅವರು ಕಳೆದ ಆರು ದಶಕಗಳಿಗೂ ಅಧಿಕ ಕಾಲ ಬಣಕಲ್ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರಿಗೆ ನಿಸ್ವಾರ್ಥ,ಆರೋಗ್ಯ ಸೇವೆಯನ್ನು ಸಲ್ಲಿಸಿ ಸಾವಿರಾರು ಕುಟುಂಬಗಳ ವಿಶ್ವಾಸಾರ್ಹ ವೈದ್ಯರಾಗಿ ಗುರುತಿಸಿಕೊಂಡಿದದ್ದರು.ಸಾರಿಗೆ ಹಾಗೂ ಆರೋಗ್ಯ ಸೌಲಭ್ಯಗಳು ಅತ್ಯಂತ ಸೀಮಿತವಾಗಿದ್ದ ಕಾಲದಲ್ಲಿ ಸೈಕಲ್ನಲ್ಲಿ, ನಂತರದ ವರ್ಷಗಳಲ್ಲಿ ಮೋಟಾರ್ ಬೈಕ್ನಲ್ಲಿ ದೂರದ ಗ್ರಾಮಗಳಿಗೆ ತೆರಳಿ, ಮನೆ ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡಿದ ಅವರ ಸೇವೆ ಗ್ರಾಮೀಣ ಆರೋಗ್ಯ ಕ್ಷೇತ್ರದಲ್ಲಿ ಮಾದರಿಯಾಗಿದೆ.ಹಗಲು-ರಾತ್ರಿ ಎನ್ನದೆ ಸಲ್ಲಿಸಿದ ಅವರ ವೈದ್ಯಕೀಯ ಸೇವೆ ಸಮರ್ಪಣೆ, ಸೇವಾಭಾವ ಮತ್ತು ಮಾನವೀಯತೆಯ ಪ್ರತೀಕವಾಗಿದೆ.

ತಮ್ಮ ಸುದೀರ್ಘ ವೈದ್ಯಕೀಯ ಬದುಕಿನಲ್ಲಿ ಅಸಂಖ್ಯಾತ ರೋಗಿಗಳ ನೋವನ್ನು ನಿವಾರಿಸಿ, ಅನೇಕ ಕುಟುಂಬಗಳಿಗೆ ಆರೋಗ್ಯ, ಆಶಾಭಾವನೆ ಮತ್ತು ನೆಮ್ಮದಿಯನ್ನು ನೀಡಿರುವ ಅವರ ಅಮೋಘ ಸೇವೆಯನ್ನು ಸ್ಮರಿಸಿ, ವೈದ್ಯರ ದಿನಾಚರಣೆಯ ಅಂಗವಾಗಿ ಶ್ರೀ ಕೃಷ್ಣ ಆಸ್ಪತ್ರೆ ಕಕ್ಕಿಂಜೆ ಇದರ ಸಹಸಂಸ್ಥೆ ಸಾಯಿ ಕೃಷ್ಣ ಹೆಲ್ತ್ ಸೆಂಟರ್ ವತಿಯಿಂದ ಗೌರವ ಸನ್ಮಾನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಹೆಲ್ತ್ ಸೆಂಟರ್ ಹಾಗೂ ಸಹಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ.ಮುರಳಿಕೃಷ್ಣ ಇರ್ವತ್ರಾಯ ಅವರು ಮಾತನಾಡಿ “ಡಾ. ಅನಂತ ಕೃಷ್ಣ ಉಪಾಧ್ಯಾಯ ಪಾದೂರು ಅವರಂತಹ ಸೇವಾನಿಷ್ಠ ವೈದ್ಯರು ಸಮಾಜಕ್ಕೆ ಮಾದರಿಯಾಗಿದ್ದು, ಅವರು ಇಂದಿನ ಯುವ ವೈದ್ಯರಿಗೆ ಆದರ್ಶಪ್ರಾಯರಾಗಿದ್ದಾರೆ”ಎಂದರು.
ಕಾರ್ಯಕ್ರಮದಲ್ಲಿ ಸಾಯಿ ಕೃಷ್ಣ ಹೆಲ್ತ್ ಸೆಂಟರ್,ಬಣಕಲ್ ಇದರ ಮುಖ್ಯ ವೈದ್ಯಾಧಿಕಾರಿ ಡಾ. ಚೈತನ್ಯ ನಾಯಕ್,ವೈದ್ಯರಾದ ಡಾ. ಶ್ರೀಲಕ್ಷ್ಮಿ , ಡಾ. ಸುಮಂತ್, ವ್ಯವಸ್ಥಾಪಕರಾದ ಅನಂತ ಪ್ರಸಾದ್, ಹಾಗೂ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದು, ಡಾ. ಅನಂತ ಕೃಷ್ಣ ಉಪಾಧ್ಯಾಯ ಪಾದೂರು ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.













