ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್.) ಘಟಕದ ವತಿಯಿಂದ “ವೇದಿಕೆಯಿಂದ ನಾಯಕತ್ವದತ್ತ” ಎಂಬ ವಿಷಯದ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ಜು.11ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಿಷ್ಣು ಪ್ರಕಾಶ್ ಎಂ. ವಹಿಸಿದ್ದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ದಿನೇಶ್ ಗೌಡ ಯು. ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ಭಾರತದ ವಲಯ ತರಬೇತುದಾರರು ಹಾಗೂ ವಾಣಿ ಪದವಿ ಪೂರ್ವ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಸುಧೀರ್ ಕೆ. ಎನ್. ಭಾಗವಹಿಸಿ, “ವೇದಿಕೆಯಿಂದ ನಾಯಕತ್ವದತ್ತ” ಎಂಬ ವಿಷಯದ ಕುರಿತು ಪರಿಣಾಮಕಾರಿ ತರಬೇತಿ ನೀಡಿದರು. ಉತ್ತಮ ನಾಯಕತ್ವದ ಗುಣಗಳು, ಆತ್ಮವಿಶ್ವಾಸ, ಸಂವಹನ ಕೌಶಲ್ಯ, ವೇದಿಕೆ ನಿರ್ವಹಣೆ ಹಾಗೂ ಸಮಾಜಸೇವೆಯಲ್ಲಿ ಯುವಜನರ ಪಾತ್ರದ ಬಗ್ಗೆ ಅವರು ಸ್ವಯಂಸೇವಕರಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮವನ್ನು ಎನ್.ಎಸ್.ಎಸ್. ಘಟಕದ ನಾಯಕಿ ಇಂದುಮತಿ ನಿರೂಪಿಸಿದರು. ಎನ್.ಎಸ್.ಎಸ್. ಸ್ವಯಂಸೇವಕ ಸಂದೇಶ್ ಸ್ವಾಗತಿಸಿ, ಕಾರ್ಯಕ್ರಮಾಧಿಕಾರಿ ದಿನೇಶ್ ಗೌಡ ಯು. ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಎನ್.ಎಸ್.ಎಸ್. ಸ್ವಯಂಸೇವಕ ಲತೇಶ್ ವಂದನಾರ್ಪಣೆ ಸಲ್ಲಿಸಿದರು.
ಈ ತರಬೇತಿ ಕಾರ್ಯಕ್ರಮವು ಸ್ವಯಂಸೇವಕರಲ್ಲಿ ನಾಯಕತ್ವ ಕೌಶಲ್ಯ, ಸೇವಾ ಮನೋಭಾವ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಹೊಸ ಚೈತನ್ಯ ತುಂಬಿತು.
















