ಬಳಂಜ: ಬೆಳ್ತಂಗಡಿ ತಾಲೂಕಿನ ಬಳಂಜ ಹಾಗೂ ನಾಲ್ಕೂರು ಗ್ರಾಮದ ಆರು ಮಂದಿ ಯುವಕರು ಇತಿಹಾಸ ಪ್ರಸಿದ್ಧ ಅಮರನಾಥ ಯಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಹಿಮದಿಂದ ಸ್ವಯಂ ರೂಪುಗೊಳ್ಳುವ ಪವಿತ್ರ ಶಿವಲಿಂಗದ ದರ್ಶನ ಪಡೆದು ಧನ್ಯತೆಯನ್ನು ಅನುಭವಿಸಿದರು.

ಸುಮಾರು 11,500 ಅಡಿ ಎತ್ತರದಲ್ಲಿರುವ ಅಮರನಾಥ ಗುಹೆಗೆ ಸುಮಾರು 48 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದ ಯಾತ್ರಿಕರು, ದುರ್ಗಮ ಹಾದಿಯನ್ನು ಕ್ರಮಿಸಿ ಹಿಮಲಿಂಗದ ದರ್ಶನ ಪಡೆದರು. ಯಾತ್ರೆಯುದ್ದಕ್ಕೂ ಹಿಮಾಚ್ಛಾದಿತ ಪರ್ವತಗಳು, ಪ್ರಕೃತಿ ಸೌಂದರ್ಯ ಹಾಗೂ ಕಣಿವೆಗಳ ನಯನಮನೋಹರ ದೃಶ್ಯಗಳು ಮನಸೂರೆಗೊಂಡವು ಎಂದು ಅವರು ತಮ್ಮ ಅನುಭವವನ್ನು ಹಂಚಿಕೊಂಡರು.
ಅಮರನಾಥ ದರ್ಶನದ ಬಳಿಕ ಪೆಹಲ್ಗಾಂ, ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದರು. ಜಮ್ಮುವಿನ ಪ್ರಸಿದ್ಧ ವೈಷ್ಣೋದೇವಿ ದೇವಾಲಯಕ್ಕೂ ಸುಮಾರು 25 ಕಿ.ಮೀ. ಕಾಲ್ನಡಿಗೆಯಲ್ಲಿ ತೆರಳಿ ದೇವಿಯ ದರ್ಶನ ಪಡೆದರು. ಅಲ್ಲದೆ, ಪಾಕಿಸ್ತಾನ ಗಡಿಭಾಗದ ಸಮೀಪದಲ್ಲಿರುವ ಶಿವಖೋರಿ ದೇವಾಲಯ ಹಾಗೂ ಗಡಿಭಾಗದ ನದಿ ಪ್ರದೇಶವನ್ನೂ ವೀಕ್ಷಿಸಿದರು.
ಯಾತ್ರೆಯ ಸಂದರ್ಭದಲ್ಲಿ ದೆಹಲಿಯ ಐತಿಹಾಸಿಕ ಹಾಗೂ ಪ್ರಮುಖ ಆಡಳಿತಾತ್ಮಕ ಸ್ಥಳಗಳಿಗೂ ಭೇಟಿ ನೀಡಲಾಯಿತು.
ಈ ಯಾತ್ರೆಗೆ ಬಂಟ್ವಾಳದ ಸಂತೋಷ್ ಕುಮಾರ್ ಮಾರ್ಗದರ್ಶಕರಾಗಿ ಸಂಪೂರ್ಣ ಸಹಕಾರ ನೀಡಿದರು. ಯಾವುದೇ ಪ್ಯಾಕೇಜ್ ವ್ಯವಸ್ಥೆಯಿಲ್ಲದೆ ವರ್ಷಂಪ್ರತಿ ಅಮರನಾಥ ಯಾತ್ರೆಯನ್ನು ಸಂಘಟಿಸುತ್ತಿರುವ ಅವರು, ಹೆಚ್ಚಿನ ಭಕ್ತರು ಅಮರನಾಥ ದರ್ಶನ ಪಡೆಯಬೇಕು ಎಂಬ ಉದ್ದೇಶದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಅನುಭವಿ ಮಾರ್ಗದರ್ಶನದಿಂದ ನಮ್ಮ ಯಾತ್ರೆ ಅತ್ಯಂತ ಯಶಸ್ವಿಯಾಯಿತು ಎಂದು ಯಾತ್ರಿಕರು ಸಂತಸ ವ್ಯಕ್ತಪಡಿಸಿದರು.
ಯಾತ್ರೆಯಲ್ಲಿ ದಿನೇಶ್ ಪೂಜಾರಿ ಕುದ್ರೋಟ್ಟು ನಾಲ್ಕೂರು, ಸತೀಶ್ ಕೆ. ಬಳಂಜ, ಸಂತೋಷ್ ಶೆಟ್ಟಿ ಹಲ್ಲಂದೋಡಿ ಪಡಂಗಡಿ, ದುಗ್ಗಯ್ಯ ಪೂಜಾರಿ ಹುಂಬೆಜೆ ನಾಲ್ಕೂರು, ಸಂತೋಷ್ ದೇವಾಡಿಗ ಕೊಂಗುಲ ಬಳಂಜ ಹಾಗೂ ಪ್ರವೀಣ್ ಪೂಜಾರಿ ಲಾಂತ್ಯಾರು ಬಳಂಜ ಭಾಗವಹಿಸಿದ್ದರು.















