ಬೆಳ್ತಂಗಡಿ: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಬೆಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಪುತ್ತೂರು ಮತ್ತು ಕಡಬ ತಾಲೂಕು ಘಟಕದ ವತಿಯಿಂದ ಪುತ್ತೂರಿನ ಬಂಟರ ಭವನದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ನೌಕರರ ಜಿಲ್ಲಾ ಶೈಕ್ಷಣಿಕ ಸಮಾವೇಶ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತನ್ನ ದಕ್ಷ ಹಾಗೂ ಪ್ರಾಮಾಣಿಕ ಸೇವೆಗಾಗಿ ಜಿಲ್ಲಾ ಮಟ್ಟದ ಸೇವಾಭೂಷಣ ಪ್ರಶಸ್ತಿ ಪಡೆಯಬೇಕಿದ್ದ ಧರೆಗುಡ್ಡೆಯ ಸರಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕ ಎ. ಶೀರಂಗ ಮಯ್ಯ ಅವರಿಗೆ ಮಂಗಳೂರಿನಲ್ಲಿ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ನಾರಾಯಣ ಮಯ್ಯ ಮತ್ತು ಕೆ. ಸೀತಮ್ಮ ದಂಪತಿಯ ಪುತ್ರನಾಗಿ 1970ರ ಆಗಸ್ಟ್ 4ರಂದು ಅಳದಂಗಡಿಯಲ್ಲಿ ಜನಿಸಿದ ಶ್ರೀರಂಗ ಮಯ್ಯ ಅವರು ತಮ್ಮ ವಿದ್ಯಾಭ್ಯಾಸದ ಬಳಿಕ 1990ರ ಜುಲೈ 19ರಂದು ಪಂಜ ಸರಕಾರಿ ಪದವಿ ಪೂರ್ವ ಕಾಲೇಜ್ನಲ್ಲಿ ವೃತ್ತಿಗೆ ಸೇರಿದ್ದರು. 1995ರ ಜೂನ್ 4ರಿಂದ 2008ರ ಮಾರ್ಚ್ 4ರವರೆಗೆ ಅಳದಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು 2008ರ ಮಾರ್ಚ್ 5ರಿಂದ 2012ರ ಅಕ್ಟೋಬರ್ 2ರವರೆಗೆ ಪದ್ಮುಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದ ಇವರು ಬಳಿಕ ಭಡ್ತಿ ಪಡೆದು 2012ರ ಅಕ್ಟೋಬರ್ 3ರಿಂದ ಧರೆಗುಡ್ಡೆ ಸರಕಾರಿ ಪ್ರೌಢಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇವರ ದಕ್ಷ ಮತ್ತು ಪ್ರಾಮಾಣಿಕ ಸೇವೆ ಗುರುತಿಸಿ ಜಿಲ್ಲಾ ಮಟ್ಟದ ಸೇವಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಯು.ಟಿ. ಖಾದರ್ ಅವರಿಂದ ಶ್ರೀರಂಗ ಮಯ್ಯ ಅವರು ಪ್ರಶಸ್ತಿ ಸ್ವೀಕರಿಸಿದರು.















