ಉಜಿರೆ: ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ಉಜಿರೆಯ ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ದೊಂಪದಪಲ್ಕೆ ಶಾಲಾ ಮಕ್ಕಳಿಗೆ ಉಚಿತವಾಗಿ ಕೊಡೆ ವಿತರಣಾ ಕಾರ್ಯಕ್ರಮ ನಡೆಯಿತು.

ಶಾಲಾ ಸಭಾಂಗಣದಲ್ಲಿ ನಡೆದ ಕೊಡೆ ವಿತರಣಾ ಕಾರ್ಯಕ್ರಮವನ್ನು ಬೆಳ್ತಂಗಡಿ ಸಂಚಾರಿ ಠಾಣೆಯ ಎಸ್ ಐ ಕಿಶೋರ್ ಪಿ. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿ ಸಂಸ್ಥೆಯು ಹಲವಾರು ಸೇವಾ ಯೋಜನೆಗಳನ್ನು ಸುದೀರ್ಘವಾಗಿ ನಡೆಸಿಕೊಂಡು ಬಂದಿದೆ. ಸಂಸ್ಥೆಯ ಸೇವಾ ಕಾರ್ಯಕ್ಕೆ ನಾವೆಲ್ಲರೂ ಅಭಾರಿಗಳಾಗೋಣ ಎಂದರು.

ಸಮೂಹ ಸಂಪನ್ಮೂಲ ಕೇಂದ್ರದ ಸಿಆರ್ ಪಿ ಶ್ರೀಮತಿ ಪ್ರತಿಮಾ ಮಾತನಾಡಿ, ಇಂದಿನ ಪ್ರಜೆಗಳನ್ನು ಸತ್ಪ್ರಜೆಗಳನ್ನಾಗಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಗ್ರಾಮೀಣ ಭಾಗದ ಶಾಲೆಯನ್ನು ಗುರುತಿಸಿ, ಇಲ್ಲಿನ ಮಕ್ಕಳಿಗೆ ಉಚಿತವಾಗಿ ಕೊಡೆ ವಿತರಿಸುವ ಮೂಲಕ ಆ ಮಕ್ಕಳ ಶಿಕ್ಷಣಕ್ಕೆ ಬಲು ದೊಡ್ಡ ಕೊಡುಗೆಯನ್ನು ರಾಜಕೇಸರಿ ಸೇವಾ ಟ್ರಸ್ಟ್ (ರಿ.) ಬೆಳ್ತಂಗಡಿಯವರು ಮಾಡಿದ್ದಾರೆ ಎಂದರು.
ವೇದಿಕೆಯಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ಇದರ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ, ರಾಜಕೇಸರಿ ಸೇವಾ ಟ್ರಸ್ಟ್ ಬೆಳ್ತಂಗಡಿ ಅಧ್ಯಕ್ಷ ಜಗದೀಶ್ ಲಾಯಿಲ, ಸಂಘಟನಾ ಕಾರ್ಯದರ್ಶಿ ದೇವರಾಜ್ ಪೂಜಾರಿ, ಹರೀಶ್ ಟ್ರಾಫಿಕ್ ಪೊಲೀಸ್ ಠಾಣೆ, ಇಬ್ರಾಹಿಂ ಹೆಡ್ ಕಾನ್ಸ್ಟೇಬಲ್ ಬೆಳ್ತಂಗಡಿ, ಶಾಲಾಭಿವೃದ್ಧಿ ಸಮಿತಿಯ ದಾಮೋದರ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಯನಿ ಶ್ರೀಮತಿ ಕುಸುಮಾವತಿ ಅವರು ಪ್ರಸ್ತಾವನೆಗೈದು ಸ್ವಾಗತಿಸಿದರು. ಶಾಲಾ ಶಿಕ್ಷಕಿಯರಾದ ಶ್ರೀಮತಿ ಸೌಮ್ಯ ರವರು ಧನ್ಯವಾದವಿತ್ತರು. ಶಿಕ್ಷಕಿ ಶ್ರೀಮತಿ ಸೌಮ್ಯ ಶ್ರೀ’ಯವರು ಕಾರ್ಯಕ್ರಮ ನಿರೂಪಣೆಗೈದರು.















