ಅಳದಂಗಡಿ: ಅಳದಂಗಡಿ ಬಂಟ ಸಮಾಜದ ಆಟಿದ ಕೂಟವು ಅಳದಂಗಡಿ ದೀಪಾ ಸಭಾಭವನ ಯಲ್ಲಿ ಜು.19ರಂದು ವಿಜ್ರಂಭಣೆಯಿಂದ ನಡೆಯಿತು.

ಭಾಸ್ಕರ ಶೆಟ್ಟಿ ಕಾರ್ಯಾಣ, ಮತ್ತು ಸಹಕಾರಿಗಳು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರ್ವಹಿಸಿದರು. ಈ ವೇಳೆ ತಾಲೂಕಿನ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಕಾಶ್ ಶೆಟ್ಟಿ ನೊಚ್ಚರವರನ್ನು ಸನ್ಮಾನಿಸಲಾಯಿತು. ನಂತರ ಮಾತನಾಡಿದ ಪ್ರಕಾಶ್ ಶೆಟ್ಟಿಯವರು ಸಮುದಾಯದ ಜೊತೆಗಿರುವ ಅನುಬಂಧ, ಆರ್ಥಿಕವಾಗಿ ಹಿಂದುಳಿದ ಸ್ವಜಾತಿ ಬಾಂಧವರ ಮೇಲಿನ ಅನುಕಂಪ, ಸುಧಾರಣೆಗಾಗಿ ಕೈಗೊಳ್ಳಬೇಕಾದ ಅನುಷ್ಠಾನಗಳ ಬಗ್ಗೆ ಅನುಸರಿಸಬೇಕಾದ ಅನುಭವವನ್ನು ಹಂಚಿಕೊಂಡರು.

ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅಂಕಗಳಿಸಿ ಪೋಷಕರಿಗೆ, ಕಲಿತ ವಿದ್ಯಾ ಮಂದಿರಕ್ಕೆ ಹಾಗೂ ಬಂಟ ಸಮುದಾಯಕ್ಕೆ ಕೀರ್ತಿ ತಂದ ವಿದ್ಯಾರ್ಥಿ/ವಿದ್ಯಾರ್ಥಿನಿಯರನ್ನು ಹಾಗೂ ಸಭಾ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ಆಶ್ರಯದಾತರನ್ನು,ಭೋಜನ ವ್ಯವಸ್ಥೆಯನ್ನು ನಿರ್ವಹಿಸಿದ ಅನ್ನದಾತರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
‘ಬಂಟೆರ್ನ ಆಟಿದ-ಕೂಟ’ವು ಸಾಂಘಿಕ ಮನೋಭಾವ, ಜನ ಸಂಪರ್ಕ, ಸೃಜನಶೀಲ ಕಾರ್ಯದಕ್ಷತೆ, ಗಣನೀಯ ಪ್ರಮಾಣದಲ್ಲಿ ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸುವ ನಿಲುವಿನಲ್ಲಿ ಯಶಸ್ವಿಯಾಗಿದೆ. ಬಂಟ ಸಮುದಾಯದ ಮಾತೆ – ಭಗಿನಿಯರ ಸ್ವಯಂ ರಚಿತ ಮೂವತ್ತು ಬಗೆಯ ಶುಚಿ ರುಚಿಯಾದ ತಿನಿಸುಗಳು ಘಮಘಮಿಸುತ್ತಿದ್ದವು.
ಈ ಸಂದರ್ಭದಲ್ಲಿ ವಲಯದ ಪದಾಧಿಕಾರಿಗಳು ಹಾಗೂ ಬಂಟ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.















