ಬೆಳ್ತಂಗಡಿ: ಸುನ್ನೀ ಯುವಜನ ಸಂಘ (SYS) ಕಾಜೂರು ಸರ್ಕಲ್ ಇಸಾಬ ಸಾಂತ್ವನ ಕಾರ್ಯಕರ್ತರ ವತಿಯಿಂದ ಮಿತ್ತಬಾಗಿಲು ಹಾಗೂ ಇಂದಬೆಟ್ಟು ಗ್ರಾಮ ವ್ಯಾಪ್ತಿಯ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಸ್ವಚ್ಛತಾ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಜರುಗಿತು.
ಸ್ವಚ್ಛತಾ ಅಭಿಯಾನದ ಅಂಗವಾಗಿ ಮಿತ್ತಬಾಗಿಲು ಗ್ರಾಮ ವ್ಯಾಪ್ತಿಯ ಐತಿಹಾಸಿಕ ಕಾಜೂರು ದರ್ಗಾ ಪರಿಸರ, ಕಾಜೂರು ಬಸ್ ಸ್ಟಾಂಡ್, ಮಿತ್ತಬಾಗಿಲು ಅಂಗನವಾಡಿ ಕೇಂದ್ರ, ಕಾಜೂರು-ಬೆದ್ರಬೆಟ್ಟು ರಸ್ತೆ ಬದಿ, ಶಾಲಾ ಪರಿಸರದ ಬಸ್ ಸ್ಟಾಂಡ್, ಕಿಲ್ಲೂರು ಶಾಲೆ ಹಾಗೂ ಅಂಗನವಾಡಿ ಕೇಂದ್ರ, ಕಿಲ್ಲೂರು ಬಸ್ ಸ್ಟಾಂಡ್, ಬೆದ್ರಬೆಟ್ಟು ಅಂಗನವಾಡಿ ಕೇಂದ್ರ ಹಾಗೂ ಇಂದಬೆಟ್ಟು ಗ್ರಾಮದ ಕೋಯಾನಗರ ಅಂಗನವಾಡಿ ಕೇಂದ್ರ ಮತ್ತು ಕಿಲ್ಲೂರು ಮಸೀದಿ ಪರಿಸರ ಸೇರಿದಂತೆ ಒಟ್ಟು ಹತ್ತಕ್ಕೂ ಹೆಚ್ಚು ಸಾರ್ವಜನಿಕ ಸ್ಥಳಗಳನ್ನು ಕಾರ್ಯಕರ್ತರು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.
ಗಣ್ಯರ ಶ್ಲಾಘನೆ:
ಸಾರ್ವಜನಿಕ ಹಿತದೃಷ್ಟಿಯಿಂದ ಹಮ್ಮಿಕೊಂಡ ಈ ಮಾದರಿ ಸ್ವಚ್ಛತಾ ಕಾರ್ಯಕ್ಕೆ ಮಿತ್ತಬಾಗಿಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಸ್ಥಳೀಯ ಶಾಲಾ ಅಧ್ಯಾಪಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ, ಎಸ್.ವೈಎಸ್ ಸಾಂತ್ವನ ಕಾರ್ಯಕರ್ತರ ಸಾಮಾಜಿಕ ಕಳಕಳಿಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸ್,ವೈಎಸ್ ಬೆಳ್ತಂಗಡಿ ಝೋನ್ ಇಸಾಬ ಕಾರ್ಯದರ್ಶಿಗಳು, ಎಸ್.ವೈಎಸ್ ಕಾಜೂರು ಸರ್ಕಲ್ ಅಧ್ಯಕ್ಷರು, ಕಾರ್ಯದರ್ಶಿಗಳು, ವಿವಿಧ ಯುನಿಟ್ಗಳ ಅಧ್ಯಕ್ಷರುಗಳು ಹಾಗೂ ಇಸಾಬ ಸಾಂತ್ವನ ಕಾರ್ಯದರ್ಶಿಗಳು ಮುಂಚೂಣಿಯಲ್ಲಿದ್ದು ಮಾರ್ಗದರ್ಶನ ನೀಡಿದರು. ಸರ್ಕಲ್ ವ್ಯಾಪ್ತಿಯ ಎಲ್ಲಾ ಇಸಾಬ ಸಾಂತ್ವನ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡು ಶ್ರಮದಾನವನ್ನು ಯಶಸ್ವಿಗೊಳಿಸಿದರು.















