ಬೆಳ್ತಂಗಡಿ: ಚುನಾವಣೆ ಬಂದಾಗ ಮಾತ್ರ ನೆನಪಾಗುವ ಜನಪ್ರತಿನಿಧಿಗಳ ಮಧ್ಯೆ, ಕೆಲಸ ಮಾಡಿ ತೋರಿಸುವ ಶಾಸಕರು ಇನ್ನೂ ಇದ್ದಾರೆ ಎಂಬುದಕ್ಕೆ ಬೆಳ್ತಂಗಡಿ ತಾಲೂಕಿನ ತಣ್ಣಿರುಪಂತ ಗ್ರಾಮದ ಪಾಲೇದು ಕೊಲ್ಯಾತ್ತಾರು ನಿವಾಸಿ ಉಷಾ ಪರಮೇಶ್ವರ ಪೂಜಾರಿ ಅವರ ಕುಟುಂಬವೇ ಸಾಕ್ಷಿ.
ಎರಡು ವರ್ಷ ಕತ್ತಲಲ್ಲೇ ಜೀವನ: ಆರ್ಥಿಕವಾಗಿ ಅತೀ ಹಿಂದುಳಿದ ಉಷಾ ಅವರ ಕುಟುಂಬದಲ್ಲಿ ಪತಿ-ಪತ್ನಿ ಇಬ್ಬರೂ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ. ಮಗನ ಫಿಸಿಯೋಥೆರಪಿ ವ್ಯಾಸಂಗಕ್ಕೆ ಹಣ ಹೊಂದಿಸುವ ಒತ್ತಡವೂ ಇದೆ. ಇದ್ದ ಚಿಕ್ಕ ಮನೆ ಕುಸಿದುಬಿದ್ದ ಬಳಿಕ, ಯಾರೋ ಹೇಳಿದ ಕಾರಣಕ್ಕೆ ಇದ್ದ ವಿದ್ಯುತ್ ಮೀಟರ್ ಅನ್ನು ಇಲಾಖೆಗೆ ಹಿಂದಿರುಗಿಸಿದ್ದರು.ನಂತರ ಪಂಚಾಯತ್ ನಿಂದ ಹೊಸ ಮನೆ ಮಂಜೂರಾಗಿ ಸಿಮೆಂಟ್ ಶೀಟ್ ಹಾಕಿ ಮನೆ ನಿರ್ಮಾಣವಾಯಿತು. ಆದರೆ ಇಲಾಖೆಯ ಕಾನೂನು ತೊಡಕು ಮತ್ತು ಹೆಚ್ಚುವರಿ ಶುಲ್ಕ ಪಾವತಿಸಲು ಆಗದ ಕಾರಣ ಕಳೆದ ಎರಡು ವರ್ಷಗಳಿಂದ ಈ ಮನೆಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಚಿಮಿಣಿ ದೀಪದ ಬೆಳಕಿನಲ್ಲೇ ದಿನ ದೂಡುವ ಪರಿಸ್ಥಿತಿ ಇತ್ತು.
ಶಾಸಕರ ಮಧ್ಯಪ್ರವೇಶದಿಂದ ಪರಿಹಾರ: ಈ ವಿಷಯವನ್ನು ಮಾಜಿ ತಾಲೂಕು ಪಂಚಾಯತ್ ಸದಸ್ಯರು ಗ್ರಾಮ ಪಂಚಾಯತ್ ನಿಂದ ದೃಢ ಪತ್ರ, ಇಂಜಿನಿಯರ್ ನಿಂದ ಮನೆ ಪೂರ್ಣಗೊಂಡ ಬಗ್ಗೆ ದಾಖಲೆಗಳೊಂದಿಗೆ ಶಾಸಕ ಶ್ರೀ ಹರೀಶ್ ಪೂಂಜಾ ಅವರ ಗಮನಕ್ಕೆ ತಂದರು.ವಿಷಯ ತಿಳಿದ ಕೂಡಲೇ ಶಾಸಕರು ಮುತುವರ್ಜಿ ವಹಿಸಿದರು. ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಅವರೊಂದಿಗೆ ಮಾತನಾಡಿ ಕನಿಷ್ಠ ಶುಲ್ಕದಲ್ಲಿ ಸಂಪರ್ಕ ನೀಡಲು ಅನುಮತಿ ಕೊಡಿಸಿದರು.ಅದರಂತೆ ಉಪ್ಪಿನಂಗಡಿಯ ಮಹಾಲಿಂಗೇಶ್ವರ ಇಲೆಕ್ಟ್ರಿಕಲ್ ಗುತ್ತಿಗೆದಾರರು ಕಡಿಮೆ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದರು.
ಕತ್ತಲಿಂದ ಬೆಳಕಿಗೆ: ಇಂದು ಉಷಾ ಅವರ ಮುಖದಲ್ಲಿ ಎರಡು ವರ್ಷದ ಬಳಿಕ ಮಂದಹಾಸ ಮೂಡಿದೆ. ಮನೆಯಲ್ಲಿ ಬಲ್ಬ್ ಬೆಳಗಿದ ಕ್ಷಣವೇ ಅವರಿಗೆ ಹೊಸ ಬದುಕು ಆರಂಭವಾದ ಅನುಭವವಾಗಿದೆ. ಸಮಾಜಭಿಮಾನದ ಮಾತು ಆಡುವುದೊಂದೇ ಅಲ್ಲ, ನೆಲದ ಮೇಲಿನ ಸಮಸ್ಯೆಗೆ ಸ್ಪಂದಿಸುವ ನಾಯಕತ್ವಕ್ಕೆಶಾಸಕರ ಸ್ಪಂದಿಸುವ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.
















