ಬೆಳ್ತಂಗಡಿ: ಬೆಂಗಳೂರು ಪಶುಭವನದಲ್ಲಿ ಕರ್ನಾಟಕ ಕೋಳಿ ಸಾಕಾಣಿಕೆ ರೈತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿ ಹಾಗೂ ಕುಕ್ಕುಟ ಮಂಡಳಿ ಅಧ್ಯಕ್ಷ ವಿಜಯ್ ಅವರ ಅಧ್ಯಕ್ಷತೆಯಲ್ಲಿ ಆ.03 ರಂದು ಜರುಗಿದ ಮುಖ್ಯಮಂತ್ರಿಗಳ ಭೇಟಿಯ ಪೂರ್ವಭಾವಿ ಸಭೆಯಲ್ಲಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಪ್ರತಿನಿಧಿಸಿದ ‘ತುಳುನಾಡು ಕೋಳಿ ಸಾಕಾಣಿಕೆ ರೈತರ ಒಕ್ಕೂಟ (ರಿ.)’ ಮುಂಚೂಣಿಯಲ್ಲಿ ನಿಂತು ಕರಾವಳಿ ಭಾಗದ ರೈತರ ಪರವಾಗಿ ಗಟ್ಟಿಯಾದ ಧ್ವನಿ ಮೊಳಗಿಸಿತು.

ಮುಂಬರುವ ದಿನಗಳಲ್ಲಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿರುವ ಅಧಿಕೃತ ಮನವಿ ಪತ್ರದ ರೂಪುರೇಷೆ ರೂಪಿಸುವಲ್ಲಿ ಸಕ್ರಿಯ ಪಾತ್ರ ವಹಿಸಿದ ಒಕ್ಕೂಟದ ಅಧ್ಯಕ್ಷ ಸಯ್ಯದ್ ಹಸನ್, ಪ್ರಧಾನ ಕಾರ್ಯದರ್ಶಿ ಅಶ್ವಿನ್ ಕುಮಾರ್ ಬಿ.ಕೆ., ಸಂಘಟನಾ ಕಾರ್ಯದರ್ಶಿ ರಿತೇಶ್ ಕೊಕ್ಕಡ ಹಾಗೂ ಸದಸ್ಯ ಲಕ್ಷ್ಮಣ್ ಗೌಡ ಚಿಬಿದ್ರೆ ಅವರು ರೈತರ ಪ್ರಮುಖ ಬೇಡಿಕೆಗಳನ್ನು ಬಲವಾಗಿ ಮಂಡಿಸಿ ಗಮನ ಸೆಳೆದರು.
ಸಭೆಯಲ್ಲಿ ಕೋಳಿ ಸಾಕಾಣಿಕೆ ರೈತರಿಗೆ ಕನಿಷ್ಠ 10 ರೂಪಾಯಿಗಳ ಜಿಸಿ ದರ ಕಡ್ಡಾಯ ನಿಗದಿಪಡಿಸುವುದು, ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗುವ ಕೋಳಿ ಕೇಂದ್ರಗಳಿಗೆ ಸೂಕ್ತ ಪರಿಹಾರ ನೀಡುವುದು ಹಾಗೂ ಕರಾವಳಿಯಲ್ಲಿ ತೀವ್ರವಾಗಿ ಕಾಡುತ್ತಿರುವ ‘ನೊಣದ ಸಮಸ್ಯೆ’ಯನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು ಶಾಶ್ವತ ಕ್ರಮಕೈಗೊಳ್ಳುವಂತೆ ಒತ್ತಾಯಿಸಲಾಯಿತು. ರಾಜ್ಯ ಮಟ್ಟದ ಈ ಸಭೆಯಲ್ಲಿ ಕರಾವಳಿಯ ಕೋಳಿ ರೈತರ ಸಂಕಷ್ಟಗಳಿಗೆ ಧ್ವನಿಯಾಗುವ ಮೂಲಕ ಒಕ್ಕೂಟವು ಅತ್ಯಂತ ಮಹತ್ವದ ಮತ್ತು ಶ್ಲಾಘನೀಯ ಪಾತ್ರವನ್ನು ನಿರ್ವಹಿಸಿದೆ.













