ಉಜಿರೆ: ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಯಕ್ಷ ಭಾರತಿ ಬೆಳ್ತಂಗಡಿ ನೇತೃತ್ವದಲ್ಲಿ ಯಕ್ಷ ದಶಾವತಾರಿ ಡಾ. ಕೆ ಗೋವಿಂದ ಭಟ್ ಅವರ ಸಂಸ್ಮರಣಾ ಕಾರ್ಯಕ್ರಮ “ಗೋವಿಂದ ನಮನ”, ಕಲಾವಿದ ಕಲಾ ಪೋಷಕ ನರೇಂದ್ರ ಕುಮಾರ್ ಚೊಚ್ಚಲ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಲೆ ಪ್ರಸಂಗ “ಸೀತಾಪಹಾರ- ಬಲರಾಮ ಭಕ್ತಿ” ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣಯ್ಯ ಸಿರಿಬಾಗಿಲು, ಮಹೇಶ ಕನ್ಯಾಡಿ, ಚಂಡೆ ಮದ್ದಳೆಯಲ್ಲಿ ಜನಾರ್ದನ ತೋಳ್ಪಡಿತ್ತಾಯ, ಶಿತಿಕಂಠ ಭಟ್ ಉಜಿರೆ, ಗಣೇಶ ಭಟ್ ಬೆಳಾಲು ಚಕ್ರತಾಳದಲ್ಲಿ ಕೌಸ್ತುಭ ಕನ್ಯಾಡಿ ಸಹಕರಿಸಿದರು. ಮುಮ್ಮೇಳದಲ್ಲಿ ರಾವಣನಾಗಿ ಡಾ. ಶ್ರುತಕೀರ್ತಿ ರಾಜ್, ಸೀತೆಯಾಗಿ ಈಶ್ವರ ಪ್ರಸಾದ ನಿಡ್ಲೆ, ಜಟಾಯುವಾಗಿ ಶ್ರೀಧರ ಎಸ್ ಪಿ, ಬಲರಾಮನಾಗಿ ಡಾ. ಎಂ ಪ್ರಭಾಕರ ಜೋಶಿ, ವನಪಾಲಕನಾಗಿ ಸುರೇಶ ಕುದ್ರೆಂತ್ತಾಯ, ಅರ್ಜುನನಾಗಿ ರಾಧಾಕೃಷ್ಣ ಕಲ್ಚಾರ್ ಪಾತ್ರ ನಿರ್ವಹಿಸಿದರು.
ಬಳಿಕ ಗೋವಿಂದ ನಮನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
ಬಹುಶ್ರುತ ವಿದ್ವಾಂಸರಾದ ಡಾ. ಎಮ್ ಪ್ರಭಾಕರ ಜೋಶಿಯವರು ಗೋವಿಂದ ಭಟ್ಟರ ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು.ಯಕ್ಷಗಾನ ಕಲಾವಿದ ಈಶ್ವರ ಪ್ರಸಾದ ನಿಡ್ಲೆ ನರೇಂದ್ರ ಕುಮಾರ್ ಅವರನ್ನು ಸಂಸ್ಮರಿಸಿ ಪ್ರಶಸ್ತಿ ಪುರಸ್ಕೃತರಾದ ಹವ್ಯಾಸಿ ತಾಳಮದ್ದಲೆ ಅರ್ಥಧಾರಿ ಹರಿದಾಸ ಗಾಂಭೀರ ಧರ್ಮಸ್ಥಳ ಅವರನ್ನು ಅಭಿನಂದಿಸಿ ಮಾತನಾಡಿದರು. ಪ್ರಶಸ್ತಿ ಸ್ವೀಕರಿಸಿದ ಹರಿದಾಸ್ ಗಾಂಭೀರರರು ಗುರುಗಳಾದ ನರೇಂದ್ರ ಕುಮಾರ್ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿ ಪ್ರಶಸ್ತಿ ನೀಡಿ ಪುರಸ್ಕರಿಸಿದಕ್ಕಾಗಿ ಕೃತಜ್ಞತೆ ಅರ್ಪಿಸಿದರು. ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ರಘುರಾಮ ಶೆಟ್ಟಿ ಸಾಧನಾ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕಲಾಪೋಷಕ ಬಿ. ಭುಜಬಲಿ ಧರ್ಮಸ್ಥಳ, ಧರ್ಮಸ್ಥಳ ಯಕ್ಷಗಾನ ಮೇಳದ ಪ್ರಬಂಧಕರಾದ ಗಿರೀಶ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಡಾ. ಶ್ರುತ ಕೀರ್ತಿರಾಜ್ ಅವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಯಕ್ಷ ಭಾರತಿಯ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆಯವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಯಕ್ಷ ಭಾರತಿ ಟ್ರಸ್ಟಿ ರವೀಂದ್ರ ಶೆಟ್ಟಿ ಬಳಂಜ ವಂದಿಸಿದರು. ಸಮಾರಂಭದಲ್ಲಿ ಯಕ್ಷ ಭಾರತಿ ಟ್ರಸ್ಟಿಗಳು, ದಿ. ನರೇಂದ್ರ ಕುಮಾರ್ ಅವರ ಮನೆಯವರು ಮತ್ತು ಕಲಾಭಿಮಾನಿಗಳು ಉಪಸ್ಥಿತರಿದ್ದರು.













