ಚಾರ್ಮಾಡಿ : ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ವ್ಯಾಪ್ತಿಯಲ್ಲಿ ಜಾರುವ ರಸ್ತೆಯಿಂದ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತೆ ರಫಿಂಗ್ ಕಾರ್ಯ ಕೈಗೊಂಡಿದೆ.
2020ರಲ್ಲಿ ಚಾರ್ಮಾಡಿ ಹಳ್ಳದಿಂದ ಘಾಟಿ ಪ್ರದೇಶದವರೆಗೆ ಹೆದ್ದಾರಿಯನ್ನು ನವೀಕರಿಸಲಾಗಿತ್ತು. ಆದರೆ ಚಾರ್ಮಾಡಿ ಹಳ್ಳದಿಂದ ಚಾರ್ಮಾಡಿ ಪೇಟೆಯವರೆಗೆ ಸುಮಾರು ಒಂದು ಕಿ.ಮೀ.ವ್ಯಾಪ್ತಿಯ ರಸ್ತೆ ಅತಿಯಾಗಿ ನಯವಾಗಿದ್ದರಿಂದ ಮಳೆಗಾಲದಲ್ಲಿ ವಾಹನಗಳು ನಿಯಂತ್ರಣ ತಪ್ಪಿ ಜಾರುವ ಸಮಸ್ಯೆ ಉಂಟಾಗುತ್ತಿತ್ತು. ಪರಿಣಾಮ ದ್ವಿಚಕ್ರ ವಾಹನಗಳು ಸೇರಿದಂತೆ ಹಲವು ವಾಹನಗಳು ಅಪಘಾತಕ್ಕೀಡಾಗಿದ್ದವು.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಈ ಹಿಂದೆ ಜೆಸಿಬಿ ಯಂತ್ರದ ಮೂಲಕ ರಸ್ತೆ ಮೇಲ್ಮೈಯಲ್ಲಿ ದಪ್ಪವಾದ ಗೆರೆಗಳನ್ನು ಎಳೆದು ರಫಿಂಗ್ ಕಾರ್ಯ ನಡೆಸಿತ್ತು. ಇದರಿಂದ ರಸ್ತೆಯ ಹಿಡಿತ ಹೆಚ್ಚಾಗಿ ಕೆಲಕಾಲ ಅಪಘಾತಗಳ ಪ್ರಮಾಣ ಕಡಿಮೆಯಾಗಿತ್ತು. ಆದರೆ ಕಾಲಕ್ರಮೇಣ ಆ ಗೆರೆಗಳು ಮಾಸಿಹೋಗಿ ರಸ್ತೆ ಮತ್ತೆ ಜಾರುವಂತಾಗಿದ್ದು, ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗತೊಡಗಿತ್ತು.
ಜೂ. 16ರಂದು ಇದೇ ರಸ್ತೆಯಲ್ಲಿ ಎಸ್ ಐಟಿ ಅಧಿಕಾರಿ ಸೈಮನ್ ಸಿ.ಎ. ಹಾಗೂ ತಂಡ ಚಿಕ್ಕಮಗಳೂರಿನತ್ತ ತೆರಳುತ್ತಿದ್ದ ವಾಹನ ಜಾರಿಬಿದ್ದು ಮಗುಚಿದ ಘಟನೆ ನಡೆದಿದ್ದು, ಈ ಘಟನೆ ರಸ್ತೆ ಸುರಕ್ಷತೆ ಕುರಿತು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಇದೀಗ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತೆ ಜೆಸಿಬಿ ಮೂಲಕ ರಸ್ತೆ ಮೇಲ್ಮೈಯಲ್ಲಿ ದಪ್ಪವಾದ ಗೆರೆಗಳನ್ನು ಎಳೆದು ರಫಿಂಗ್ ಕಾರ್ಯ ಪೂರ್ಣಗೊಳಿಸಿದೆ. ಮಳೆಗಾಲದಲ್ಲಿ ಚಾರ್ಮಾಡಿ ಘಾಟಿಯಲ್ಲಿ ಹೆಚ್ಚಿನ ವಾಹನ ಸಂಚಾರ ಇರುವುದರಿಂದ ಅಪಾಯಕಾರಿ ಸ್ಥಳಗಳಲ್ಲಿ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ರಸ್ತೆ ನಿರ್ವಹಣೆಯನ್ನು ನಿಯಮಿತವಾಗಿ ನಡೆಸಬೇಕು ಎಂದು ವಾಹನ ಸವಾರರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.













